Homeಸುದ್ದಿಗಳುಪರಸಗಡ ನಾಟಕೋತ್ಸವದ ಎರಡನೇ ನಾಟಕ "ಚುಕ್ಕಿ ಮದುವಿ"

ಪರಸಗಡ ನಾಟಕೋತ್ಸವದ ಎರಡನೇ ನಾಟಕ “ಚುಕ್ಕಿ ಮದುವಿ”

ಪರಸಗಡ ನಾಟಕೋತ್ಸವದಲ್ಲಿ ಎರಡನೆಯ ದಿನ ಮೂಡಿ ಬಂದ ರಂಗ ಆರಾಧನಾ ನಾಟಕ ಸಂಘಟನೆಯ ಮೊದಲ ನಾಟಕ “ಚುಕ್ಕಿ ಮದುವಿ” ಇದು ಅಮರೇಶ ನುಗಡೋಣಿ ಅವರ ಕಥಾ  ಸಂಕಲನದಿಂದ ಆಯ್ದ ಕತೆ. ಈ ಕತೆಯ ಕೇಂದ್ರ ಪಾತ್ರ ನರಸವ್ವ. ಈಕೆಯ ಮಗಳು ಈರವ್ವ ಮತ್ತು ಅಳಿಯ ಸಣ್ಣಪ್ಪ. ಇವರ ಮಗಳು ಚುಕ್ಕಿಯ ಮದುವೆಯದೇ ಮುಖ್ಯ ಕತೆ. ನರಸವ್ವನ ಗಂಡ ಬೆಟ್ಟಪ್ಪ ಇದ್ದೂ ಇಲ್ಲದಂತಿರುವ ಗಂಡ.ಪುಂಡ ಪೋಕರಿಯಂತೆ ತಿರುಗುತ್ತಿದ್ದ ಶಿವರಾಜನಿಗೆ ಚುಕ್ಕಿಯನ್ನು ಮದುವೆ ಮಾಡಿಸುವ ಹುಣ್ಣಾರಕ್ಕೆ ಶಿವರಾಜನೊಂದಿಗೆ ಕೈ ಜೋಡಿಸುವನು.(ತನ್ನ ಕುಡಿತದ ಚಟದಿಂದಾಗಿ). ಆದರೆ  ನರಸವ್ವನಿಗೆ ಚುಕ್ಕಿಯನ್ನು ಭೀಮೇಶನಿಗೆ ಕೊಟ್ಟು ಮದುವೆ ಮಾಡಿಸುವ ಆಸೆ, ಇದರ ಜೊತೆಗೆ ಮಠದ ರಾಜಕಾರಣ, ಚುಕ್ಕಿ ಶಾಲೆ ಕಲಿಯಲು ಹೋಗುವುದು, ಹಜರೇಶನೊಂದಿಗೆ ಪರಿಚಯ. ಊರಿನಲ್ಲಿ ಮಠದ ವತಿಯಿಂದ ಸಾಮೂಹಿಕ ಮದುವೆ ಕಾರ್ಯಕ್ರಮದ ಆಯೋಜನೆ, ಚುಕ್ಕಿ ಮದುವೆ ಯಾರೊಂದಿಗೆ ಆಯಿತು ಎನ್ನುವುದು ನಾಟಕ ನೋಡಿ ತಿಳಿಯಬೇಕು.

ಮನುಷ್ಯನ ಆಸೆ, ಅಸಹಾಯಕತೆ ಮತ್ತು ಒಳಿತು ಕೆಡುಕಿನ ಜಿಜ್ಞಾಸೆಯನ್ನು ಸೂಕ್ತವಾಗಿ ರಂಗ ರೂಪಕ್ಕೆ ತರುವಲ್ಲಿ ಝಕೀರ ಅವರ ಪರಿಶ್ರಮ,ನೆರಳು ಬೆಳಕಿನಾಟದ ದೃಶ್ಯ ಸಂಯೋಜನೆ ಎಲ್ಲ ಪಾತ್ರಧಾರಿಗಳೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿರುವುದು ಮಹತ್ವದ ಸಂಗತಿ.

ಇಲ್ಲಿನ ಪಾತ್ರಧಾರಿಗಳ ಬಗ್ಗೆ ಹೇಳಲೇಬೇಕು. ಚುಕ್ಕಿಯಾಗಿ ಅನಿತಾ ದಿನ್ನಿಮನಿ, ನರಸವ್ವಳಾಗಿ ಪ್ರತಿಭಾ ವಕ್ಕುಂದ, ಸಣ್ಣಪ್ಪನಾಗಿ ಸಿದ್ದಪ್ಪ ಕಟಿಗೆನ್ನವರ, ಭೀಮೇಶಿಯಾಗಿ ಬಸವರಾಜ ಮಡ್ಲಿ, ಸದಾನಂದಯ್ಯನಾಗಿ ರಾಜು ನಡುವಿನಮನಿ(ಅಂಚೆ ಇಲಾಖೆ, ಮುನವಳ್ಳಿ) ಬೆಟ್ಟಪ್ಪನಾಗಿ ಸುರೇಶ ಮಾನೆ, ಚನ್ನಬಸಯ್ಯನಾಗಿ ಶಿವಾನಂದ ತಾರೀಹಾಳ, ಶಿವರಾಜನಾಗಿ ಗೋಪಾಲ ಫಾಸಲಕರ,ಸಿದ್ದಪ್ಪನಾಗಿ ಹುಸೇನ ನದಾಪ್, ಹಜರೇಶಿಯಾಗಿ ನಾರಾಯಣ ಗೊಂದಳಿ, ಇನಸ್ಪಕ್ಟರ್ ಆಗಿ ಕಲಂದರ ಬೀಳಗಿ, ಸಾರುವಯ್ಯನಾಗಿ ಬಸವರಾಜ ಬೆಳವಡಿ, ಡಂಗೂರ ಸಾರುವವನಾಗಿ ಗಣೇಶ ಭಜೇರಿ, ಸ್ವಾಮಿಯಾಗಿ ಹೇಮಂತ ಕಾತ್ರಾಳ, ವ್ಯಕ್ತಿಯಾಗಿ ಮಂಜು ಬೆಳವಡಿ ಇವರ ಅಭಿನಯ ಮನಮುಟ್ಟುವಂತದ್ದು.

ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಕತೆಯನ್ನು ದೃಶ್ಯ ಸಂಯೋಜನೆಗೆ ಅಳವಡಿಸುವಲ್ಲಿ ಝಕೀರ ನದಾಫ ಅವರ ಪರಿಶ್ರಮ ಇಡೀ ನಾಟಕದ ಪ್ರತಿ ಸನ್ನಿವೇಶದಲ್ಲಿಯೂ ಎದ್ದು ಕಾಣುತ್ತದೆ. ಚನ್ನಬಸಯ್ಯನಾಗಿ ಶಿವಾನಂದ ತಾರೀಹಾಳ ಅವರ ಅಭಿನಯ ಜೊತೆಗೆ ಸಂಭಾಷಣೆ ಶೈಲಿ, ಮಠ ಪರಂಪರೆಯಲ್ಲಿ ಸ್ವಾಮೀಜಿಯವರ ಆಧುನಿಕತೆಯ ನೋಟ, ಹಾಗೆಯೇ ಮಠದ ಹಿಂದಿನ ಸ್ವಾಮೀಜಿಯಾಗಿ ಹೇಮಂತ ಕಾತ್ರಾಳ ಅವರ ಅಭಿನಯ. ಸದಾನಂದಯ್ಯನವರು ಮಠದ ಕಾರಕೂನಕಿ
ಮಾಡುವ ರೀತಿ, ಚುಕ್ಕಿಯಾಗಿ ಅಭಿನಯಿಸಿದ ಕಲಾವಿದೆ ಅನಿತಾ ದಿನ್ನಿಮನಿ, ನಾಟಕದುದ್ದಕ್ಕೂ ಗಮನ ಸೆಳೆಯುವ ನರಸವ್ವ ಮತ್ತಿ ಸಣ್ಣಪ್ಪ ಅವರ ಪಾತ್ರ ಪೋಷಣೆ, ಶಿವರಾಜ್‌ನ ಖಳನ ಸಂಭಾಷಣೆಯ ರೀತಿ, ಅದರಲ್ಲೂ ಮಠದ ಹಿಂದಿನ ಸ್ವಾಮೀಜಿ ಲಿಂಗೈಕ್ಯರಾದಾಗ ಪೋಟೋ ಪ್ರೇಮ್ ಬಳಸಿರುವ ರೀತಿಯಂತೂ ಗುರುತಿಸಲಾಗದಷ್ಟು ನೈಜತೆಯನ್ನು ಕಾತ್ರಾಳ ಅವರ ಅಭಿನಯ ಮನಸೂರೆಗೊಳ್ಳುತ್ತದೆ.

ಕೊನೆಗೆ ಚುಕ್ಕಿಯ ವಿವಾಹ ಮಾಡಿಕೊಳ್ಳಲು ಹೊಡೆದಾಡುವ ದೃಶ್ಯ.ಇದರಲ್ಲಿ ತಾಳಿ ಕಟ್ಟಿದವರಾರು ಎಂಬುದನ್ನು ಅಂತ್ಯದವರೆಗೂ ಕುತೂಹಲ ಕಾಯ್ದುಕೊಳ್ಳುವಂತೆ ಮಾಡಿದ ತಂತ್ರಗಾರಿಕೆ ನಿರ್ದೇಶಕನ ಜಾಣ್ಮೆಯನ್ನು ಎತ್ತಿ ತೋರಿಸಿದೆ.  ಮೂಲ ಕತೆಯನ್ನು ಓದಿದ ನನಗೆ ಅಮರೇಶ ನುಗಡೋಣಿಯವರು ಕಟ್ಟಿಕೊಟ್ಟ ಹಳ್ಳಿಯ ಪರಿಸರದ ಕತೆಯನ್ನು ರಂಗರೂಪಕ್ಕೆ ತರುವಲ್ಲಿ ಅಲ್ಲಲ್ಲಿ ಹಾಸ್ಯದ ತುಣುಕುಗಳನ್ನು ಜೋಡಿಸುವ ಮೂಲಕ ಝಕೀರ ನದಾಫ್ಅ ವರ ನಾಟಕ ರಚನೆ ಮತ್ತು ನಿರ್ದೇಶನ ಎಲ್ಲಿಯೂ ನಾಟಕ ಪ್ರೇಕ್ಷಕನಿಗೆ ಬೇಸರ ತರಿಸದು.

ಒಂದು ದೃಶ್ಯದ ನಂತರ ಬರುವ ಮತ್ತೊಂದು ದೃಶ್ಯ.ಅವುಗಳಿಗೆ ಬಳಸಿರುವ ರಂಗಸಜ್ಜಿಕೆ. ನೆರಳು ಬೆಳಕಿನ ದೃಶ್ಯ ಸಂಯೋಜನೆ, ಝಕೀರ ಅವರ ಸಂಗೀತ ಸಂಯೋಜನೆ ನಾಟಕಕ್ಕೆಪ್ಲಸ್ ಪಾಯಿಂಟ್. ಇಂತಹ ನಾಟಕ ಜರುಗುವುದು ಕೇವಲ ೮೦ ನಿಮಿಷದ ಅವಧಿ.ಮೂಲ ಕತೆಯ ಆಶಯಕ್ಕೆ ಎಲ್ಲಿಯೂ ಯಾವುದೇ ಚ್ಯುತಿ ಬಾರದಂತೆ ಉತ್ತರ ಕರ್ನಾಟಕದ ಭಾಷಾ ಸೊಗಡಿನ ಸಂಭಾಷಣೆಯನ್ನು ಝಕೀರ ರಚಿಸುವ ಮೂಲಕ ನಿರ್ದೇಶನಕ್ಕೆ ಅಳವಡಿಸಿರುವ ರೀತಿಗೆ ಅಭಿನಂದನೆ ಸಲ್ಲಿಸಲೇಬೇಕು.

ಜಾತಿ, ಧರ್ಮ ಮೀರಿದ ಪ್ರೀತಿಯ ಚೌಕಟ್ಟನ್ನು ಹೊಂದಿದ ಕಥಾನಕದ ಈ ನಾಟಕ ಉತ್ತಮವಾಗಿ ಮೂಡಿ ಬಂದಿತು. ಕೊನೆಯ ದೃಶ್ಯದ ನಂತರ ಕೋರೋನಾ ಸೇನಾನಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಇದು ಕೂಡ ರಂಗ ಆರಾಧನಾ ಸಂಘಟನೆ ಯವರು ಕೈಗೊಂಡ ಮಹತ್ವದಕಾರ್ಯ. ಎಸ್.ವೈ.ಹಾದೀಮನಿ, ಡಾ.ಶ್ರೀಪಾದ ಸಬನೀಸ್,ಡಾ,ಮಹೇಶ ಮಟ್ಟಿ, ಪೋಲಿಸ್ ಇಲಾಖೆಯ ಎಲ್.ವೈ.ಹಿರೇಹೊಳಿ (ಎ.ಎಸ್.ಐ.)ಇವರನ್ನು ಸನ್ಮಾನಿಸಿ ಗೌರವಿಸುವ ಜೊತೆಗೆ ನಾಟಕದಲ್ಲಿ ಅಭಿನಯಿಸಿದ ಕಲಾವಿದರ ಪಾತ್ರ ಪರಿಚಯವನ್ನು ಮಾಡಿಸುವ ಮೂಲಕ ನಾಟಕ ಕೊನೆಗೊಂಡಿತು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

RELATED ARTICLES

Most Popular

error: Content is protected !!
Join WhatsApp Group