ಬೀದರ – ರಾಜ್ಯದಲ್ಲಿ ಪೇ ಸಿಎಂ ಪೋಸ್ಟರ್ ಅಭಿಯಾನ ಆರಂಭಿಸಿದ ಕೂಡಲೇ ಈಗ ಲಿಂಗಾಯತರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ.ಆದರೆ ಸರ್ಕಾರದ ಪ್ರತಿಯೊಂದು ಇಲಾಖೆಯು ಭ್ರಷ್ಟಾಚಾರದಿಂದ ಶೋಷಣೆಯಾಗುತ್ತಿದೆ. ಗ್ರಾಮ ಪಂಚಾಯತ್ ಮಟ್ಟದಿಂದ ವಿಧಾನಸೌಧದ ವರೆಗೆ ಭ್ರಷ್ಟಾಚಾರದ ಮಾತು ಕೇಳಿ ಬರುತ್ತಿದೆ.ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.
ಭಾಲ್ಕಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ವಿರೋಧಿ ಅಭಿಯಾನ ವಿಚಾರ ಪ್ರಸ್ತಾಪಿಸಿ, ಮಾಜಿ ಸಿಎಂ ಯಡಿಯೂರಪ್ಪ ಭ್ರಷ್ಟಾಚಾರ ಆರೋಪದ ಮೇಲೆ 2012 ರಲ್ಲಿ ಜೈಲಿಗೆ ಹೋದಾಗ ಬಿಜೆಪಿ ಲಿಂಗಾಯತರಿಗೆ ಆಗ ಅರಿವು ಆಗಿಲ್ಲವೇ..? ಸಂತೋಷ ಪಾಟೀಲ್ ಆರೋಪದ ಹಿನ್ನೆಲೆ ಪಂಚಾಯತ್ ರಾಜ್ ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪನವರಿಗೆ ಕ್ಲೀನ್ ಚೀಟ್ ಕೊಟ್ಟಿದ್ದರಲ್ಲ ಆಗ ಯಾಕೆ ಲಿಂಗಾಯತರ ನೆನಪು ಆಗಿಲ್ಲ…ಬಾಳೆ ಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗೆ ಮಠದ ಹಣ ಬಿಡುಗಡೆ ಮಾಡಲು ಶೇ. 30 ಲಂಚ ಕೇಳಿದ್ದಾರೆ ಎಂದು ನೇರವಾಗಿ ಸ್ವಾಮೀಜಿಯವರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.
ಬಿಜೆಪಿ ಸರ್ಕಾರ ಲಿಂಗಾಯತ ಮಠಕ್ಕೆ ಮಂಜೂರಾದ ಹಣ ಬಿಡುಗಡೆ ಮಾಡಲು ಲಂಚ ಕೇಳಿದಾಗ ಲಿಂಗಾಯತ ಸಮುದಾಯಕ್ಕೆ ಮಾಡಿದ ಅವಮಾನ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಲಿಲ್ಲ ಆಗ ಲಿಂಗಾಯತರು ಎಲ್ಲಿ ಹೋಗಿದ್ದರು. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ರಾಜ್ಯದ ಮರ್ಯಾದೆ ಹಾಳಾಗಿದೆ ಸರ್ಕಾರಕ್ಕೆ ಈಗಲಾದರೂ ರಾಜ್ಯದ ಹಿತ ಚಿಂತನೆ ಇದ್ದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ ಬಾಕಿ ಇರುವ ಎಲ್ಲಾ ಬಿಲ್ ಗಳ ಪಾವತಿ ಮಾಡಲಿ ಸ್ವಚ್ಛ ಸರ್ಕಾರ ಆಡಳಿತ ಕೊಡಲಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡರಾದ ಕೆ.ಎಚ್ ಮುನಿಯಪ್ಪನವರು ಬಿಜೆಪಿಗೆ ಹೋಗುತ್ತಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, ಬಿಜೆಪಿ ಮುಳುಗುವ ಹಡಗು ಕಾಂಗ್ರೆಸ್ ನಿಂದ ಬಿಜೆಪಿ ಗೆ ಯಾರು ಹೋಗಲ್ಲ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ವರದಿ: ನಂದಕುಮಾರ ಕರಂಜೆ, ಬೀದರ