ಸಿಂದಗಿ: ಸರಕಾರಿ ಆದೇಶವನ್ನು ಗಾಳಿಗೆ ತೂರಿ ಮನ ಬಂದಂತೆ ವರ್ತಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಖಾರಿಮುಂಗಿ ರವರನ್ನು ಅಮಾನತ್ತು ಗೊಳಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಸಿಂದಗಿ ಸರ್ವಧರ್ಮ ಪ್ರತಿಷ್ಠಾನದ ಪದಾಧಿಕಾರಿಗಳು ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜಾಪಟೇಲ ಜಮಾದಾರ, ಜಿಲಾನಿ ಮುಲ್ಲಾ ಮಾತನಾಡಿ, ತಾಲೂಕಿನ ಅಲ್ಪಸಂಖ್ಯಾತರ ಬಡ ಮಕ್ಕಳು ಹಸಿವಿನಿಂದ ಬಳಲಿ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೆರೆದು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ವಸತಿ ಸಹಿತ ಶಿಕ್ಷಣ ನೀಡಲು ಮುಂದಾಗಿದೆ ಆದರೆ ಪ್ರಿನ್ಸಿಪಾಲ ಸಿದ್ದಪ್ಪ ಕಾರಿಮುಂಗಿ ಇವರು ಸರಕಾರ ಆದೇಶವನ್ನು ಗಾಳಿಗೆ ತೂರಿ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕುಗಳ ವಿದ್ಯಾರ್ಥಿಗಳ ಪಾಲಕರಿಂದ ಹಣದ ವ್ಯವಹಾರದಲ್ಲಿ ತೊಡಗಿ ಪರೀಕ್ಷೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಫೇಲಾಗಿದ್ದಾರೆ ಎಂದು ಇಲ್ಲಿನ ಪಾಲಕರಿಗೆ ಮನವರಿಕೆ ಮಾಡಿ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಈರಪ್ಪ, ಹುನಗುಂದ ತಾಲೂಕಿನ ಕಿರಣಕುಮಾರ ಮಹಾಂತೇಶ ಲಾಳಗೇರಿ, ಶಶಾಂಕ, ವಿನೋದ ಸೀಮಕೇರಿ, ಶಿವಲಿಂಗಯ್ಯ, ಬಾಲರಾಜ ವಡ್ಡರ ಹಾಗೂ ಬಾದಾಮಿ ತಾಲೂಕಿನ ಶಾರುಖಾನ ಅಮೀನಸಾಬ ಮೊಕಾಶಿ, ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ರೋಹಿತ ರಾಮಪ್ಪ ತುಂಗಳ, ಮುಧೋಳ ತಾಲೂಕಿನ ಮದನ ಮೆಟಗಾರ, ಗುಲ್ಬರ್ಗಾ ಜಿಲ್ಲೆ ಯಡ್ರಾಮಿ ತಾಲೂಕಿನ ಸುಪ್ರಿಯಾ, ಗದಗ ಜಿಲ್ಲೆಯ ಜನ ಬೆಂತನೂರ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭೀಮಶಿ ಖಿಲಾರಿ, ಯಾದಗಿರಿ ಜಿಲ್ಲೆಯ ಹುಣಸಗಿ ಗ್ರಾಮದ ಆಮೀನಾ, ಸುರುಪೂರ ತಾಲೂಕಿನ ಶಿವರಾಜ ತಿರುಪತಿ, ಕಲ್ಬುರ್ಗಿ ಜಿಲ್ಲೆಯ ಕೇತಲಪ್ಪ ಇವರನ್ನು ಅನಧಿಕೃತವಾಗಿ ಪರೀಕ್ಷೆಯಿಲ್ಲದೆ ಸದರಿ ಶಾಲೆಯಲ್ಲಿ ಪ್ರವೇಶ ಪಡೆದಿರುತ್ತಾರೆ. ಈಗಾಗಲೇ 2-3 ಸಲ ಮನವಿ ಕೊಟ್ಟರೂ ಸಹ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. 2 ದಿನಗಳಲ್ಲಿ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.