ವೃತ್ತಿಪರ ನೇಕಾರರಿಗೆ ಕಾರ್ಮಿಕ ದರ್ಜೆ ನೀಡಿ ಸೌಲಭ್ಯ ನೀಡಬೇಕು – ಶಿವಲಿಂಗ ಟಿರಕಿ

Must Read

ಮೂಡಲಗಿ – ನಮ್ಮ ದೇಶದಲ್ಲಿ ೬೬ ಲಕ್ಷ ವೃತ್ತಿಪರ ನೇಕಾರರಿದ್ದು ೫-೬ ಲಕ್ಷ ಕೂಲಿ ಕಾರ್ಮಿಕ ವರ್ಗದವರಿದ್ದಾರೆ ಇವರಿಗೆ ಸರ್ಕಾರದಿಂದ ಯಾವುದೇ ಕಾರ್ಮಿಕ ಯೋಜನೆಗಳ ಮಾಹಿತಿ ಇಲ್ಲದೆ ಸೌಲಭ್ಯಗಳು ಸಿಗುತ್ತಿಲ್ಲ. ಅದರಮೇಲೆ ಲಾಕ್ ಡೌನ್ ಹಮ್ಮಿಕೊಂಡಿದ್ದರಿಂದ ಎಲ್ಲರ ಬದುಕು ಹೀನಾಯವಾಗಿದೆ. ರಾಷ್ಟ್ರೀಕೃತ, ಕೆಎಸ್ಎಫ್ ಸಿ, ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆದವರಿಗೆ ಸಾಲ ಮನ್ನಾ ಸೌಲಭ್ಯ ಸಿಗದೇ ಅನ್ಯಾಯವಾಗಿದೆ ಇದರಿಂದ ನೇಕಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇವರ ನೆರವಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.

ವೃತ್ತಿಪರ ನೇಕಾರರಿಗೆ ಹಾಗೂ ಕಾರ್ಮಿಕರಿಗೆ ಸೌಲಭ್ಯ ಒದಗಿಸುವಂತೆ ಜವಳಿ ಸಚಿವ ಶ್ರೀಮಂತ ಪಾಟೀಲ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮೂಡಲಗಿ ತಹಶೀಲ್ದಾರ ಡಿ ಜೆ ಮಹಾತ್ ಅವರ ಮೂಲಕ ಮನವಿ ಸಲ್ಲಿಸಿ ಅವರು ಮಾತನಾಡಿದರು.

ವೃತ್ತಿಪರ ನೇಕಾರರಿಗೆ ಕಾರ್ಮಿಕರ ಸೌಲಭ್ಯ ಮತ್ತು ಜವಳಿ ವಹಿವಾಟಿನಿಂದ ಬರುವ ತೆರಿಗೆಯಲ್ಲಿ ಕಾರ್ಮಿಕ ಕಲ್ಯಾಣ ನಿಧಿ ಸ್ಥಾಪಿಸಿ ಮದುವೆ, ವಿದ್ಯಾರ್ಥಿ ವೇತನ, ಹೆರಿಗೆ, ಆರೋಗ್ಯ, ವಿಮಾ ಸೌಲಭ್ಯ, ಮಾಸಾಶನ ಒದಗಿಸಬೇಕು. ನೇಕಾರ ಸಮ್ಮಾನ ಯೋಜನೆಗೆ ವಾರ್ಷಿಕ ರೂ.೧೦ ಸಾವಿರ ನಿಗದಿಪಡಿಸಬೇಕು. ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್, ಕೆಎಸ್ಎಫ ಸಿ ಹಾಗೂ ಮೈಕ್ರೋ ಫೈನಾನ್ಸ್ ನಲ್ಲಿ ನೇಕಾರರು ಪಡೆದ ಸಾಲವನ್ನು ಮನ್ನಾ ಮಾಡಬೇಕು.

ಸಾಲದ ಬಾಧೆಯಿಂದಾಗಿ ೨೪ ನೇಕಾರರ ಆತ್ಮಹತ್ಯೆ ಹಾಗೂ ಇಬ್ಬರ ಅವಘಡ ಸಂಭವಿಸಿ ಮರಣವಾಗಿದೆ ಅವರಿಗೆ ತಲಾ ೧೦ ಲಕ್ಷ ರೂ. ಪರಿಹಾರ ನೀಡಬೇಕು ಅಥವಾ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು.

೫೫ ವರ್ಷ ವಯಸ್ಸು ಮೇಲ್ಪಟ್ಟ ನೇಕಾರರಿಗೆ ಮಾಸಿಕ ೫ ಸಾವಿರ ಮಾಸಾಶನ ಕೊಡಬೇಕು.

ಕೆಎಚ್ ಡಿಸಿ ನೇಕಾರರ ಶ್ರೇಯೋಭಿವೃದ್ಧಿಗಾಗಿ ಆವೃತ್ತ ನಿಧಿ ಸ್ಥಾಪನೆಯಾಗಬೇಕು, ನಿಗಮದ ೧೧೦ ಕೋಟಿ ಸಾಲವನ್ನು ಸರ್ಕಾರವೇ ಪೂರ್ಣ ಭರಿಸಬೇಕು. ಯುವಜನತೆಗೆ ವಿಶೇಷ ತರಬೇತಿಯೊಂದಿಗೆ ನೇಕಾರಿಕೆ ಉತ್ತೇಜನಕ್ಕಾಗಿ ನಿಗಮದ ಮೂಲಕ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂಬ ಬೇಡಿಕೆಗಳನ್ನು ಶಿವಲಿಂಗ ಟಿರಕೆಯವರು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ತಹಶೀಲ್ದಾರ ಡಿ ಜೆ ಮಹಾತ್ ಅವರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸೋಮಶೇಖರ ಮರೇಗುದ್ದಿ, ಬಿಜೆಪಿ ಮುಖಂಡ ಪ್ರಕಾಶ ಮಾದರ, ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠದ ಅಧ್ಯಕ್ಷ ಮಹಾಲಿಂಗ ಒಂಟಗೋಡಿ, ಈಶ್ವರ ಮುರಗೋಡ, ಉಮೇಶ ಬೆಳಕೂಡ ಹಾಗೂ ನೇಕಾರರಾದ ಮಡಿವಾಳ ಜಿಡ್ಡಿ, ಶ್ರೀಶೈಲ ಖಾನಾಪೂರ ಮತ್ತು ಮಲ್ಲಪ್ಪ ಗೊಲಭಾಂವಿ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group