ಸಚಿವರೇ ಇತ್ತ ನೋಡಿ ಸ್ವಲ್ಪ…
ಬೆಂಗಳೂರು: ನಗರದಲ್ಲಿ ಕಳೆದ ಅನೇಕ ದಿನಗಳಿಂದ ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ಪಾದಚಾರಿಗಳಿಗೆ ಮಾರ್ಗವಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.
ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣ ದಿಂದ ಕೂಗಳತೆ ದೂರದಲ್ಲಿ ಇರುವ ಪಾದಚಾರಿ ಮಾರ್ಗದ ಮೇಲೆ ನೋ ಪಾರ್ಕಿಂಗ್ ಎಂಬ ಒಂದು ದೊಡ್ಡ ಕಂಬ ಅನಾಥವಾಗಿ ಬಿದಿದ್ದು, ಪಾದಚಾರಿಗಳು ಇತ್ತ ಪಾದಾಚಾರಿ ಮಾರ್ಗವು ಇಲ್ಲದೆ, ಅತ್ತ ರಸ್ತೆಯ ತುಂಬಾ ವಾಹನಗಳ ದಟ್ಟಣೆಯ ನಡುವೆ ಕೆಲಸಕ್ಕೆ ಹೋಗುವ ಜನರು ಹಾಗು ಶಾಲಾ – ಕಾಲೇಜು ಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಗಲಿಬಿಲಿಗೊಂಡು ನೋಡಿ ಹಿಡಿ ಶಾಪ ಹಾಕುತ್ತ ಸಾಗುತ್ತಿದ್ದ ದೃಶ್ಯ ಕಂಡು ಬಂತು. ಗೋಪಾಲನ್ ಮಾಲ್ ಹಿಂಭಾಗದ ದ್ವಾರದ ಪಾದಚಾರಿ ಮಾರ್ಗದಲ್ಲಿ ಕಲ್ಲುಗಳ ರಾಶಿ ರಾಶಿ ಇದೆ. ಈ ಬಗ್ಗೆ ಬಿಬಿಎಂಪಿ ಕಣ್ಣಿದ್ದೂ ಕುರುಡಾಗಿದೆ. ಪಾದಚಾರಿಗಳಿಗೆ ಮಾರ್ಗವಿದ್ದು ಇಲ್ಲಾದಂತಾಗಿದೆ !
ಯಾವಾಗಲೂ ಜನಸಂದಣಿಯಿಂದ ತುಂಬಿ ತುಳುಕುವ ಈ ಮಾರ್ಗದಲ್ಲಿ ಜನತೆ ಪರದಾಡುವಂತಾಗಿದ್ದು ಸಚಿವ ಮುನಿಯಪ್ಪ, ಶಾಸಕರು, ಬಿಬಿಎಂಪಿ ಅಧಿಕಾರಿಗಳು….ಇವರ್ಯಾರ ಕಣ್ಣಿಗೂ ಇದು ಬೀಳದೆ ಇದ್ದದ್ದು ಅಚ್ಚರಿ ತಂದಿದೆ. ಬಿಬಿಎಂಪಿ ಕಾರ್ಯ ವೈಖರಿಗೊಂದು ಇದು ನಿದರ್ಶನವಾಗಿದೆ.
ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ:
ಇನ್ನು ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ಹಾಗೂ ಗೋಪಾಲ ನ್ ಮಾಲ್ ನ ಹಿಂಭಾಗದಲ್ಲಿ ಇರುವ ಗೇಟ್ ಬಳಿ ಬಸ್ ಕಾಯುತ್ತ ನಿಲ್ಲುವ ನಾಗರಿಕರು ಹಾಗೂ ಕೆಲಸಕ್ಕೆ ಹೋಗುವ ಕಾರ್ಮಿಕರು ಮತ್ತು ಶಾಲೆ – ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗಾಗಿ ಬಸ್ ನಿಲ್ದಾಣದ ಅವಶ್ಯಕತೆ ತೀರಾ ಇದ್ದು ಯಾರೂ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಪತ್ರಿಕೆಯ ಜೊತೆ ಮಾತನಾಡಿದ ಹಿರಿಯ ನಾಗರಿಕರೊಬ್ಬರು, ಕ್ಷೇತ್ರದ ಶಾಸಕ ಮುನಿರತ್ನ ಅವರು ಇತ್ತ ಗಮನ ಹರಿಸಿ ಒಂದು ಬಸ್ ನಿಲ್ದಾಣ ನಿರ್ಮಾಣ ಮಾಡಿ ಅದರಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿಶ್ರಾಂತಿ ಪಡೆಯಲು ಕೊಠಡಿ ಜೊತೆ ಒಂದು ಪುಟ್ಟ ಗ್ರಂಥಾಲಯ ನಿರ್ಮಿಸಿ ಕೊಡಬೇಕು ವಿನಂತಿಸಿಕೊಂಡರು
ಪಾದಚಾರಿ ಮಾರ್ಗ ದಲ್ಲಿ ಹೊಂಡ:
ಇಲ್ಲಿನ ಪಾದಚಾರಿ ಮಾರ್ಗದಲ್ಲಿ ಒಂದು ಹೊಂಡವೇ ನಿರ್ಮಾಣವಾಗಿದೆ ! ಅದರಲ್ಲಿ ಕಸ, ಪೆಪ್ಸಿ ಬಾಟಲು ಹಾಗೂ ಇತರೆ ತ್ಯಾಜ್ಯಗಳನ್ನು ರಾಶಿ ಹಾಕಿದ್ದಾರೆ ನಗರದ ಪ್ರಜೆಗಳು !
ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ನಾಗರಿಕರಿಗೆ ಪಾದಚಾರಿ ಮಾರ್ಗ ದಲ್ಲಿ ನಡೆದು ಹೋಗಲು ಅವಕಾಶ ಇಲ್ಲದೆ ಕಷ್ಟಪಟ್ಟು ಸಾಗುತ್ತಿದ್ದರೂ ಕೂಡ ಸಂಬಂಧ ಪಟ್ಟ ಬಿ.ಬಿ.ಎಂ.ಪಿ ಇಲಾಖೆ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೆ ಇಲ್ಲ ಅನ್ನುವ ಹಾಗೇ ಇದ್ದಾರೆ ಎಂಬುದು ಸ್ಥಳೀಯರ ದೂರು.
ಪಾದಚಾರಿ ಮಾರ್ಗದಲ್ಲಿರುವ ಈ ಹೊಂಡವನ್ನು ಮುಚ್ಚಿ ನಾಗರಿಕರಿಗೆ ಅಡ್ಡಾಡಲು ಅನುಕೂಲ ಮಾಡಿಕೊಡುವ ಅಗತ್ಯವಿದೆ.
ಮುಂದಿನ ಚುನಾವಣಾ ತಯಾರಿಯಲ್ಲಿ ಬಿ,ಬಿ.ಎಂ .ಪಿ, ರಾಜ್ಯ ಸರ್ಕಾರ:
ನಗರದಲ್ಲಿ ಇಷ್ಟೆಲ್ಲ ಅಧ್ವಾನಗಳಿದ್ದರೂ ಕಣ್ಣಿದ್ದೂ ಕುರುಡಾಗಿರುವ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಗಳು ಪ್ರಾಯಶಃ ಮುಂಬರುವ ಬಿ.ಬಿ,ಎಂ .ಪಿ ಚುನಾವಣಾ ತಯಾರಿಯಲ್ಲಿ ಸಂಪೂರ್ಣವಾಗಿ ಬ್ಯುಸಿ ಆಗಿರಬಹುದೇ ಎಂಬ ಪ್ರಶ್ನೆ ಕಾಡುತ್ತಿದೆ. ಚುನಾವಣೆಯಲ್ಲಿ ತಮ್ಮ ಮತ ಲೆಕ್ಕ ಹಾಕುತ್ತಿರಬಹುದು ಆದರೆ ಪಾದಚಾರಿ ಮಾರ್ಗವಿದ್ದರೂ ಪಾದಚಾರಿಗಳು ರಸ್ತೆಯ ಮಧ್ಯದಲ್ಲಿ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಆರ್ ಆರ್. ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರುವ ಈ ಸ್ಥಳದಲ್ಲಿ ಅಪಘಾತ ಸಂಭವಿಸುವ ಮುನ್ನ ಬಿ,ಬಿ,ಎಂ.ಪಿ ಹಾಗು ರಾಜ್ಯ ಸರ್ಕಾರ ಎಚ್ಚೆತುಕೊಳ್ಳಲಿ ಎಂದು ಆಶಿಸೋಣ
ಚುನಾವಣೆಯಲ್ಲಿ ಹೇಳಿಕೊಳ್ಳಲಾದರೂ ನಾಗರಿಕರ ಸಮಸ್ಯೆಗಳೆ ತೀವ್ರ ಪರಿಹಾರಕ್ಕೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂಬುದು ಟೈಮ್ಸ್ ಆಫ್ ಕರ್ನಾಟಕ ಆಶಯವಾಗಿದೆ.
ಚಿತ್ರ, ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ , ಬೆಂಗಳೂರು
Mobile Number : 9480129458