ಬೀದರ – ಬೀದರ ಕೆಡಿಪಿ ಸಭೆಯಲ್ಲಿ ಹುಮನಾಬಾದ್ ಪೊಲೀಸ್ ಅಧಿಕಾರಿಗಳ ವಿರುದ್ಧ ಶಾಸಕ ರಾಜಶೇಖರ ಬಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಬೀದರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಹುಮನಾಬಾದ್ ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿ ಕುರಿತಂತೆ ಅಸಮಾಧಾನ ಹೊರಹಾಕಿದ ಶಾಸಕರು, ಕೊಲೆ, ದರೋಡೆ, ಕಳ್ಳತನ, ಜೂಜು, ಇಸ್ಪೀಟು, ಮಟಕಾ, ಸೇರಿದಂತೆ ನಿಷೇಧಿತ ಅಕ್ರಮ ಧಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ. ನಿಯಮ ಬಾಹಿರ ಮದ್ಯ ಮಾರಾಟ ಮಾತ್ರವಲ್ಲದೇ ಕೇವಲ ಒಂದು ವಾರದಲ್ಲಿ 8 ಯುವತಿಯರ ಅಪಹರಣವಾಗಿದೆ. ಪೊಲೀಸರಿಗೆ ಸೂಚಿಸಿದರೆ ಕ್ಯಾರೇ ಅನ್ನುತ್ತಿಲ್ಲ, ಠಾಣೆಗೆ ಕಾಲಿಟ್ಟರೆ ಮಧ್ಯವರ್ತಿಗಳ ಮುಖಾಂತರ ಹಣದ ವ್ಯವಹಾರ ಮಾಡುವುದರಲ್ಲಿ ಪೊಲೀಸರು ಬಿಜಿ ಆಗಿದ್ದಾರೆ ಎಂದು ಆರೋಪಿಸಿದರು.
ಈ ಅಧಿಕಾರಿಗಳಿಗೆ ಜನರ ಶಾಂತಿ ನೆಮ್ಮದಿಗಿಂತ ಹಣವೇ ಮುಖ್ಯವಾಗಿದೆ. ಅಪರಾಧ ಚಟುವಟಿಕೆಗಳ ವಿರುದ್ದ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು. ನಿಮ್ಮಿಂದ ಆಗದಿದ್ದರೇ ಹೇಳಿ ಸರ್ಕಾರದ ಮೇಲೆ ಒತ್ತಡ ಹೇರಿ ಆ ಕೆಲಸ ನಾವೇ ಮಾಡಿಕೊಳ್ಳುತ್ತೇವೆ ಎಂದು ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಶಾಸಕ ಈಶ್ವರ ಖಂಡ್ರೆ, ರಹಿಮಖಾನ ಮುಂತಾದವರು ಇದ್ದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ