ಬೆಂಗಳೂರು: ರಕ್ಷಾ ಬಂಧನ ಹೆಣ್ಣು ಮಕ್ಕಳಿಗೆ ತವರಿನ ನಂಟು ಬೆಸೆಯುವ ಹಬ್ಬ ಹಾಗು ರಕ್ಷಣೆ ಮತ್ತು ಪ್ರೀತಿಯ ಸಂಕೇತವಾದ ರಕ್ಷಾ ಬಂಧನವನ್ನು ಆಗಸ್ಟ್ 22 ರಂದು ನಗರದ ವಿವಿಧೆಡೆ ಆಚರಿಸಲಾಯಿತು.
ಅಣ್ಣತಂಗಿ ವಾತ್ಸಲ್ಯ ಬಂಧನಕೆ ಸಾಟಿಯಿಲ್ಲ ಬನಶಂಕರಿ 3 ನೇ ಹಂತದ ಜನತಾ ಬಜಾರ್ ನಲ್ಲಿ ಇರುವ ಮಂಜುನಾಥ ಸ್ಟುಡಿಯೋದಲ್ಲಿ ವಿನುತಾ ಮತ್ತು ಹರ್ಷಿತಾ ಅವರ ಸಹೋದರ ಮಹೇಶ್ ಅವರಿಗೆ ರಕ್ಷಾ ಬಂಧನದ ದಿನವಾದ ಇಂದು ರಾಖಿ ಕಟ್ಟಿ ಸಿಹಿ ತಿನಿಸಿ ಸಂಭ್ರಮ ಪಟ್ಟಿದ್ದು ಹೀಗೆ !!
ಚಾಮರಾಜಪೇಟೆ ಆಟದ ಮೈದಾನದಲ್ಲಿ ಕನ್ನಡ ತಿಂಡಿ ಕೇಂದ್ರದ ಡಾ ಕೆ. ವೈ. ರಾಮಚಂದ್ರ ಅವರಿಗೆ ಅವರ ಸಹೋದರಿ ರಾಖಿ ಕಟ್ಟಿದರೆ , ಚಾಮರಾಜ ಪೇಟೆ ಮತ್ತು ಬನಶಂಕರಿ ಮೂರನೇ ಹಂತದ ಗುರುದತ್ತ ಬಡಾವಣೆಯಲ್ಲಿ ಆರ್ ಎಸ್ ಎಸ್ ಸಂಘಟನೆಯಿಂದ ರಕ್ಷಾ ಬಂಧನ ಆಚರಿಸಲಾಯಿತು.
“ರಕ್ಷಾ ಬಂಧನ” ಹಬ್ಬದ ಬಗ್ಗೆ
ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ.
ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ’ ಅಥವಾ ‘ರಾಖಿ’ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ.
ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ – ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.
ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ.
ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.
ತೀರ್ಥಹಳ್ಳಿ ಅನಂತ ಕಲ್ಲಾಪುರ