ಸಿಂದಗಿ: ಕಳೆದ ಸಮ್ಮಿಶ್ರ ಸರಕಾರದಲ್ಲಿ ಮಂಜೂರಾದ ಆಲಮೇಲ ತೋಟಗಾರಿಕೆ ಕಾಲೇಜಿಗೆ ಹಣ ಬಿಡುಗಡೆಗೊಳಿಸಲು ಸರಕಾರ ಮಟ್ಟದಲ್ಲಿ ಚರ್ಚಿಸುವುದಾಗಿ ತೋಟಗಾರಿಕಾ ಮತ್ತು ರೇಷ್ಮೆ ಸಚಿವ ಆರ್.ಶಂಕರ ಭರವಸೆ ನೀಡಿದರು.
ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಶ್ರೀ ಚನ್ನವೀರ ಶಿವಾಚಾರ್ಯರರ ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿ ಮಾತನಾಡಿ, ಕರೋನಾದಿಂದ ಸಂಕಷ್ಟ ದಲ್ಲಿರುವ ರೈತರಿಗೆ ಅನುಕೂಲವಾಗಲೆಂದು ಹಿಂದೆ ಪ್ರತಿಶತ 35 ಇದ್ದ ಸಬ್ಸಿಡಿ 50ಕ್ಕೆ, ತುಂತುರು ನೀರಾವರಿಗೆ ಪ್ರತಿಶತ 45 ಇದಿದ್ದ 90ಕ್ಕೆ ಏರಿಸಿ ರೈತರಿಗೆ ಉತ್ತೇಜನ ನೀಡಿದೆ ಅದರಂತೆ ಈ ಭಾಗದ ರೈತರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಯಾವುದೇ ರೈತರು ಅರ್ಜಿ ಸಲ್ಲಿಸಿದರೆ ಯೋಗ್ಯ ರೀತಿಯಲ್ಲಿ ನ್ಯಾಯ ಕೊಡಿಸಿ ಅಲ್ಲದೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ಖಾಲಿ ಜಮೀನಿದೆ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಿ ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಬೇಕಾಗುವ ಸೌಲಭ್ಯಗಳ ವಿತರಣಾ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು ಇನ್ನೊಮ್ಮೆ ಈ ಭಾಗದ ಪ್ರವಾಸ ಕೈಕೊಳ್ಳುವದರೊಳಗೆ ಇಂಡಿ- ಸಿಂದಗಿ ಭಾಗದಲ್ಲಿ ನೀಡಿದ ಬೇಡಿಕೆಗಳು ಸಂಪೂರ್ಣ ಈಡೇರಿಕೆಯಾಗುವಂತೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.

ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಕೇಂದ್ರ ಸರಕಾರದ ಯೋಜನೆಗಳ ಸಹಕಾರಿಯಾಗುವಂತೆ ಇಡೀ ರಾಜ್ಯದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇಂಡಿ-ಸಿಂದಗಿ ಭಾಗದಲ್ಲಿ 16 ಸಾವಿರ ಹೆಕ್ಟರ ಭೂಮಿ ಲಿಂಬೆ ಬೆಳೆಗಾರಿದ್ದರು ಅವರ ಉತ್ತೇಜನಕ್ಕೆ ಕೋಲ್ಡ ಸ್ಪೋರೇಜ್ ಸೇರಿದಂತೆ ಕರೋನಾ ಸಂಕಷ್ಟ ಕಾಲದಲ್ಲಿ ರೈತರಿಗೆ ಸರಕಾರದಿಂದ ಸಿಗುವ ಹಲವು ಯೋಜನೆಗಳನ್ನು ರೂಪಿಸಿ ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡರು.
ಸಾನ್ನಿಧ್ಯ ವಹಿಸಿದ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ಕಳೆದ ಸಮ್ಮಿಶ್ರ ಸರಕಾರದಲ್ಲಿ ನಿಯೋಜಿತ ಆಲಮೇಲ ತಾಲೂಕಿಗೆ ತೋಟಗಾರಿಕೆ ವಿಶ್ವವಿದ್ಯಾಲಯ ಮಂಜೂರಾತಿ ದೊರೆತಿದ್ದು ಯಾವುದೇ ಕಾರ್ಯಾರಂಭವಾಗದೇ ವಿಳಂಬ ನೀತಿ ಅನುಸರಿಸುತ್ತಿದ್ದು ಕಾರಣ ಶೀಘ್ರದಲ್ಲಿ ಪ್ರಾರಂಭಿಸಲು ಯಾವ ಕ್ರಮ ಜರುಗಿಸಬೇಕು ಎನ್ನುವದನ್ನು ಚರ್ಚೆ ನಡೆಸಬೇಕು ಎಂದು ವಿನಂತಿಸಿದರು.
ಸಾನ್ನಿಧ್ಯ ವಹಿಸಿದ ಆಲಮೇಲ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಯಂಕಂಚಿ ಹಿರೇಮಠದ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು, ವಿಜಯಪುರ ಕೃಷಿ ಜಂಟಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್, ಇಂಡಿ ಕೃಷಿ ಉಪ ನಿರ್ದೇಶಕ ಡಾ. ಚಂದ್ರಶೇಖರ ಪವಾರ, ವಿಜಯಪುರ ತೋಟಗಾರಿಕೆ ಉಪನಿರ್ದೇಶಕ ಸಿದ್ರಾಮಯ್ಯ ಬರ್ಗಿಮಠ, ಇಂಡಿ ಲಿಂಬೆ ಅಭಿವೃದ್ಧಿ ಮಂಡಳಿ ನಿಗಮದ ಎಂ.ಡಿ ಸಂತೋಷ ಸಪ್ಪಂಡಿ, ನಿವೃತ್ತ ಸಿಪಿಐ ಬಿ.ಬಿ.ಹುಲಸಗುಂದ, ಮುಂಬೈ ಹೈಕೋರ್ಟ್ ನ್ಯಾಯವಾದಿ ಶಂಬುಲಿಂಗ ಕಕ್ಕಳಮೇಲಿ, ಎಪಿಎಂಸಿ ಅಧ್ಯಕ್ಷ ಗುರಣ್ಣಗೌಡ ರೂಗಿ, ಹಳ್ಳೇಪ್ಪಗೌಡ ಚೌಧರಿ, ಶೈಲಜಾ ಸ್ಥಾವರಮಠ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಅಂಬಲಿ ನಿರೂಪಿಸಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ತೋಟಗಾರಿಕೆ ಕಾಲೇಜಿಗೆ ಮನವಿ
ಈ ಸಂದರ್ಭದಲ್ಲಿ ಆಲಮೇಲ ಪ್ರಗತಿಪರ ಒಕ್ಕೂಟದ ಪದಾಧಿಕಾರಿಗಳು ತೋಟಗಾರಿಕೆ ಕಾಲೇಜ ಪ್ರಾರಂಭಿಸುವಂತೆ ತೋಟಗಾರಿಕೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಶೋಕ ಕೊಳಾರಿ, ಅಯುಬ ದೇವರಮನಿ, ಹಣಮಂತ ಹೂಗಾರ, ಮಲ್ಲು ಅಚಲೇರಿ, ರವಿ ಬಡದಾಳ, ಶರಣಗೌಡ ಪಾಟೀಲ, ಅಶೋಕ ವಾರದ, ಮಡಿವಾಳ ಇಂಡಿ ಸೇರಿದಂತೆ ಅನೇಕರಿದ್ದರು.