Homeಸುದ್ದಿಗಳುಉಕ್ರೇನ್ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಸಿಎಂಗೆ ಮನವಿ ಮಾಡಿರುವೆ - ಬಾಲಚಂದ್ರ ಜಾರಕಿಹೊಳಿ

ಉಕ್ರೇನ್ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಸಿಎಂಗೆ ಮನವಿ ಮಾಡಿರುವೆ – ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಯುದ್ಧ ಸನ್ನಿವೇಶ ನಿರ್ಮಾಣವಾಗಿರುವ ಉಕ್ರೇನ್‌ನಲ್ಲಿ ಮೂಡಲಗಿ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಬೆಳಗಾವಿ ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿರುವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿರುವ ಅವರು, ಯುದ್ಧ ರಾಷ್ಟ್ರದಲ್ಲಿ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿರುವುದರಿಂದ ಸಹಜವಾಗಿ ಅವರಲ್ಲಿ ಮಾತ್ರವಲ್ಲ ಅವರ ಪೋಷಕರಲ್ಲಿಯೂ ಆತಂಕವಾಗುತ್ತದೆ. ಅದರಂತೆಯೇ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಪ್ರೀತಿ ಚಬ್ಬಿ ಮತ್ತು ಪ್ರಿಯಾ ಚಬ್ಬಿ ಇಬ್ಬರೂ ವಿದ್ಯಾರ್ಥಿನಿಯರು ವೈದ್ಯಕೀಯ ಕೋರ್ಸ್ ಕಲಿಯಲೆಂದು ಉಕ್ರೇನ್‌ಗೆ ತೆರಳಿದ್ದರು. ಆದರೆ, ಅವರಾಗಲಿ ಅಥವಾ ಅವರ ಪೋಷಕರಾಗಲಿ ಆತಂಕಗೊಳ್ಳುವ ಅಗತ್ಯವಿಲ್ಲ. ಸದ್ಯ ಆ ವಿದ್ಯಾರ್ಥಿಗಳಿಬ್ಬರೂ ಸುರಕ್ಷಿತವಾಗಿದ್ದಾರೆ.

ಇದರ ನಡುವೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡ ಇವರಿಬ್ಬರ ಪೋಷಕರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ಮಾತ್ರವಲ್ಲ ಮುಖ್ಯಮಂತ್ರಿಗಳ ಜತೆಗೆ ನಾನು ಕೂಡ ಇವರಿಬ್ಬರ ಜತೆಗೆ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ನಮ್ಮ ನಾಡಿಗೆ ಕರೆತರುವ ನಿಟ್ಟಿನಲ್ಲಿ ಸತತ ಸಂಪರ್ಕದಲ್ಲಿದ್ದೇನೆ. ಹೀಗಾಗಿ ಉಕ್ರೇನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group