ಮೂಡಲಗಿ: ಮಹಾರಾಷ್ಟ್ರದ ಜತ್ತ ತಾಲೂಕಿನಲ್ಲಿ ಫೆ.೬ರಂದು ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆಗೆ ಒಳಪಡಿಸ ಬೇಕೆಂದು ಆಗ್ರಹಿಸಿ ಗುರುವಾರದಂದು ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಅಲ್ಪಸಂಖ್ಯಾತರ ಘಟಕ ಹಾಗೂ ವಿವಿದ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಿ ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಡಿಎಸ್ಎಸ್ ರಾಜ್ಯ ಸಂಚಾಲಕ ಸತ್ಯಪ್ಪಾ ಕರವಾಡಿ ಮಾತನಾಡಿ, ಮಹಾರಾಷ್ಟದ ಬೋರಗಿ ಕರ್ಜಗಿ ಗ್ರಾಮದ ೪ ವರ್ಷದ ಕುಮಾರಿ ಮಿಜ್ಜಾ ಫಾರುಕ ಜಾತಗಾರ ಎಂಬ ಮಗು ತೋಟದ ಪಕ್ಕದಲ್ಲಿ ಆಟ ಆಡುವ ಸಮಯದಲ್ಲಿ ಆ ಸಣ್ಣ ಮಗುವಿನ ಮೇಲೆ ದೌರ್ಜನ್ಯ ಎಸಗಿ ಹತ್ಯೆ ಮಾಡಿದ ಪಾಂಡು ಸೋಮಲಿಂಗ ಕಳ್ಳಿ ಆರೋಪಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಇಂತಹ ವ್ಯಕ್ತಿಗಳು ಸಮಾಜದಲ್ಲಿ ಇದ್ದರೆ ಮುಂದೆ ಸಾಮಾನ್ಯ ಹೆಣ್ಣು ಮಕ್ಕಳು ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗುತ್ತದೆ. ಕಾರಣ ಪಾಂಡು ಸೋಮಲಿಂಗ ಕಳ್ಳಿಗೆ ಯಾವುದೇ ರೀತಿಯ ದಯೆ ತೋರಿಸದೆ ಗಲ್ಲು ಶಿಕ್ಷೆಗೆ ಒಳಪಡಿಸಿ ಅನ್ಯಾಯವಾದ ಚಿಕ್ಕ ಮಗುವಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.
ಪುರಸಭೆ ಸದಸ್ಯ ರವೀಂದ್ರ ಸಣ್ಣಕ್ಕಿ, ಡಿಎಸ್ಎಸ್ ಮುಖಂಡರಾದ ಬಸವರಾಜ್ ಕಾಡಾಪುರ, ಮಾದೇವ ಮಾಸಣ್ಣವರ ಮಾತನಾಡಿ, ಸಣ್ಣ ಮಗುವಿನ ಮೇಲೆ ದೌರ್ಜನ್ಯ ಎಸಗಿ ಹತ್ಯೆ ಮಾಡಿ ಪಾಂಡು ಕಳ್ಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸದಿದರೆ ರಾಜ್ಯಾದ್ಯಂತ ಉಗ್ರಹೋರಾಟ ಮಾಡುವುದಾಗಿ ಹೇಳಿದರು.
ಈ ಸಮಯದಲ್ಲಿ ಡಿಎಸ್ಎಸ್ ಮುಖಂಡರು ಮತ್ತು ಪದಾಧಿಕಾರಿಗಳಾದ ಮರೆಪ್ಪ ಮರಿಯಪ್ಪಗೋಳ, ರಂಜಾನ ಬಿಜಾಪುರ, ಅಶೋಕ ಶಿದ್ದಲಿಂಗಪ್ಪಗೋಳ, ಪ್ರಭಾಕರ ಮಂಟುರ, ಹಸನಸಾಬ ಮುಗಾಟಖಾನ, ಶಂಕರ ತಳವಾರ, ಮದರಾಸಾಬ ಜಕಾತಿ, ಸಂಜು ಹಾದಿಮನಿ, ಡಾ.ರಾಜು ಚುಟುಕುಸಾಬ ಮಂಟುರ, ಈರಪ್ಪ ಢವಳೇಶ್ವರ, ಬಂದೇನವಾಜ ಶೇಖ, ಯಲಪ್ಪ ಬಾಳವಗೋಳ, ತುಕಾರಾಮ್ ಮಾದರ, ಸಲೀಮ್ ಸೈದ, ಸೈಪನ್ ಲಕ್ಷಮೆಶ್ವರ, ಹಾಜಿಸಬಾ ಬಿಜಾಪುರ, ಹಾಜಿಸಬಾ ಜಾತಾಗಾರ, ಅಲ್ಲಾ ಶೇಖ, ಮಹಿಬುಬ ಮನಗುಳ್ಳಿ, ಅನೀಲ ಗಸ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.