ಬೀದರ:- ಬೀದರ್ನ ಎಸ್ಬಿಐ ಬ್ಯಾಂಕ್ ಎದುರು ನಡೆದ ದರೋಡೆ, ಶೂಟೌಟ್ ಪ್ರಕರಣ ಮರೆ ಮಾಚುವ ಮುನ್ನವೇ ಔರಾದ್ ತಾಲೂ ಕಿನ ಕೌಠಾ(ಬಿ) ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಖದೀಮರು ಒಂಟಿ ಮಹಿಳೆ ಮೇಲೆ ಮರಣಾಂತಿಕ ಹಲ್ಲೆ ನಡೆಸಿ ೨೫ ಲಕ್ಷ ಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.
ಪ್ರೀತಿ ಓಂಕಾರ ಗಾದಗೆ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಮಧ್ಯಾಹ್ನ ವೇಳೆ ಮನೆಯ ಹಿಂಬಾಗಿಲು ಮುರಿದು ಒಳಗೆ ನುಗ್ಗಿದ ಮುಸುಕುಧಾರಿ ಇಬ್ಬರು ಕಳ್ಳರು ಒಂಟಿ ಮಹಿಳೆಗೆ ಹಣ ಮತ್ತು ಚಿನ್ನಾಭರಣ ನೀಡಲು ಬೆದರಿಕೆವೊಡ್ಡುವ ಜತೆಗೆ ಚಾಕುವಿನಿಂದ ಕೈ ಮತ್ತು ಭುಜಕ್ಕೆ ಚುಚ್ಚಿದ್ದಾರೆ. ನಂತರ ಗ್ಯಾಸ್ ಒಲೆಯ ಮೇಲೆ ಚಾಕು ಕಾಯಿಸಿ ಕೈ ಮೇಲೆ ಚುಚ್ಚಿ ಚಿತ್ರಹಿಂಸೆ ನೀಡಿದ್ದಾರೆ
ಸುಮಾರು ೧೦೦ ಮೀಟರ್ ಅಂತರದ ಮನೆಯೊಂದರಲ್ಲಿ ಶುಭ ಕಾರ್ಯಕ್ರಮ ನಡೆಯುತ್ತಿದ್ದರೂ ಯಾರೊಬ್ಬರ ಭಯವಿಲ್ಲದೇ ಮನೆಗೆ ನುಗ್ಗಿದ ಕಳ್ಳರು ೨೫ ತೊಲ ಬಂಗಾರ ಹಾಗೂ ೪ ಲಕ್ಷ ರೂ. ನಗದು ದರೋಡೆ ಮಾಡಿದ್ದಾರೆ. ಪ್ರಕರಣದಿಂದ ಸದ್ಯ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂತಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ದರೋಡೆಕೋರರಿಂದ ಹಲ್ಲೆಯೊಳಗಾದ ಮಹಿಳೆಗೆ ಬೀದರ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ೧೫ ದಿನಗಳ ಹಿಂದಷ್ಟೆ ಈ ಮಹಿಳೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಮನೆಗೆ ನುಗ್ಗಿದ ಕಳ್ಳರು ಹಣ ಕೇಳಿದಾಗ ನಿರಾಕರಿಸಿದ್ದರಿಂದ ರೊಚ್ಚಿಗೆದ್ದು ಚಾಕು ತೋರಿಸಿ ಜೀವ ಬೆದರಿಕೆವೊಡ್ಡಿ ಅಲಮಾರಿಯ ಕೀಲಿ ಕೊಡುವಂತೆ ಒತ್ತಾಯಿಸಿದರು. ಇದಕ್ಕೂ ಒಪ್ಪದಿದ್ದಾಗ ತಲೆ ಮತ್ತು ಕೈ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ಮಹಿಳೆ ಪ್ರೀತಿ ಗಾದಗೆ ಮಾಹಿತಿ ನೀಡಿದ್ದಾರೆ
ವರದಿ : ನಂದಕುಮಾರ ಕರಂಜೆ, ಬೀದರ