ಹಿಂದು ಪಂಚಾಂಗದ ಹನ್ನೆರಡು ಮಾಸಗಳಲ್ಲಿ ಧನುರ್ಮಾಸಕ್ಕೆ ವಿಶೇಷ ಮಹತ್ವವಿದೆ.
ಶ್ರೀಕೃಷ್ಣನು ಕೂಡ ಭಗವದ್ಗೀತೆಯಲ್ಲಿ ‘ಮಾಸಾನಾಂ ಮಾರ್ಗಶೀಷೋಸ್ಮಿ’ ಎಂದಿದ್ದಾನೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಒಂದು ತಿಂಗಳ ಅವಧಿ ಬೇಕಾಗುತ್ತದೆ. ಅಂತೆಯೇ ಧನುರ್ ರಾಶಿಯನ್ನು ಪ್ರವೇಶಿಸಿ ಮಕರ ರಾಶಿಗೆ ಬರಲು ಒಂದು ತಿಂಗಳು ಬೇಕು. ಸೂರ್ಯನು ಧನುರ್ ರಾಶಿಯಲ್ಲಿರುವ ಈ ಒಂದು ತಿಂಗಳ ಅವಧಿಯನ್ನೇ ‘ಧನುರ್ವಸ’ “ಧನುರ್ಮಾಸ” ಎಂದು ಕರೆಯಲಾಗುತ್ತದೆ.
ಈ ಮಾಸದ ಅವಧಿಯಲ್ಲಿ ಪ್ರತಿದಿನ ಬೆಳಗಿನ ಜಾವ ಮಹಾವಿಷ್ಣು ಪೂಜೆ, ಹುಗ್ಗಿಯ ನೈವೇದ್ಯ ಮಾಡುವ ಸಂಪ್ರದಾಯವಿದೆ. ಈ ಮಾಸದಲ್ಲಿ ಮಹಾವಿಷ್ಣುವಿನ ಜತೆಗೆ ಮಹಾಲಕ್ಷ್ಮೀ ಯನ್ನು ಪೂಜಿಸಿದರೆ ಧನಸಮೃದ್ಧಿ ಉಂಟಾಗುವುದೆಂಬ ನಂಬಿಕೆ ಇದೆ. ಸ್ವರ್ಗಭ್ರಷ್ಟನಾದ ಇಂದ್ರನ ಪರವಾಗಿ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ಲಕ್ಷ್ಮಿ ಯನ್ನು ಸ್ತುತಿಸಿದ್ದರಿಂದ ಇಂದ್ರನು ಮರಳಿ ಸ್ವರ್ಗಾಧಿಪತ್ಯವನ್ನು ಪಡೆದನೆಂಬ ಪುರಾಣಕಥೆಯೂ ಇದೆ.
ಪಾಂಚರಾತ್ರಾಗಮ, ಅಗ್ನಿಪುರಾಣ ಮತ್ತು ಸ್ಮೃತಿಮುಕ್ತಾವಳಿಗಳಲ್ಲಿ ಧನುರ್ಮಾಸ ಮಹಾತ್ಮೆಯನ್ನು ಹೇಳಲಾಗಿದೆ. ಪಾಂಚರಾತ್ರಾಗಮದಲ್ಲಿ ಧನುರ್ವಸದ ಮಹಾತ್ಮೆಯನ್ನು ನಾಲ್ಕು ಅಧ್ಯಾಯಗಳಲ್ಲಿ ಹಂಸ ಮತ್ತು ಚತುರ್ಮುಖ ಬ್ರಹ್ಮನ ಮಧ್ಯದ ಸಂವಾದದ ಮೂಲಕ ಹೇಳಲಾಗಿದೆ. ಮೊದಲ ಅಧ್ಯಾಯದಲ್ಲಿ ಸೂತಮಹರ್ಷಿಗಳು ಧನುರ್ವಸದ ಮಹತ್ವವನ್ನು ವಿವರಿಸುತ್ತಾರೆ. ಎರಡನೇ ಅಧ್ಯಾಯದಲ್ಲಿ ಭಕ್ತ ನಡೆದುಕೊಳ್ಳಬೇಕಾದ ರೀತಿನೀತಿಗಳಿವೆ.
ನಾಲ್ಕನೇ ಅಧ್ಯಾಯದಲ್ಲಿ ವಿಪ್ರರಿಗೆ ಭೋಜನ ನೀಡಿ ಸತ್ಕರಿಸುವ ಬಗ್ಗೆ ವಿವರಣೆಯಿದೆ. ಇನ್ನು ಮಹಾಭಾರತವನ್ನು ಅವಲೋಕಿಸಿದಾಗ ಒಮ್ಮೆ ಪಾಂಡವರು ಯಜ್ಞವನ್ನು ಮಾಡುವ ಕಾಲಕ್ಕೆ ವಿಪ್ರನೊಬ್ಬ ಅನ್ನಾರ್ಥಿಯಾಗಿ ಬರುತ್ತಾನೆ. ಸ್ವಯಂಪಾಕ ಮಾಡಿಕೊಳ್ಳುವ ದೀಕ್ಷೆ ಪಡೆದ ವಿಪ್ರನನ್ನು ಉದ್ದೇಶಿಸಿ ಧರ್ಮರಾಯ, ‘ಇಲ್ಲಿ ನೀವೇ ಅಡುಗೆ ಮಾಡಿಕೊಳ್ಳಲು ಸ್ಥಳವಿಲ್ಲ. ಹಾಗಾಗಿ ದ್ರೌಪದಿ ಅಡುಗೆ ಮಾಡುತ್ತಾಳೆ, ಭೀಮ ಬಡಿಸುತ್ತಾನೆ, ನಾನು ಆಪೋಶನ ಹಾಕುತ್ತೇನೆ, ನೀವು ನಿಸ್ಸಂಕೋಚವಾಗಿ ಊಟ ಮಾಡಬಹುದು’ ಎಂದು ನಿವೇದಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಭಗವಾನ್ ಕೃಷ್ಣ ಅಲ್ಲಿಗೆ ಬರುತ್ತಾನೆ. ಕೃಷ್ಣ, ‘ಅನ್ಯಾಯವಾಗಿ ವಿಪ್ರನ ವ್ರತ ನಿಯಮ ಮುರಿಯಬೇಡ. ಅವನಿಗೆ ಅಡುಗೆ ಮಾಡಿಕೊಳ್ಳಲು ಸ್ಥಳಾವಕಾಶ ಮಾಡಿಕೊಡು’ ಎನ್ನುತ್ತಾನೆ. ಕೃಷ್ಣನ ಮಾತಿನಂತೆಯೇ ವಿಪ್ರನಿಗೆ ಅಡುಗೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾನೆ. ಅವನ ಜೊತೆ ಉಳಿದವರೂ ಭೋಜನ ಮಾಡುತ್ತಾರೆ. ಬೇರೆಲ್ಲ ಎಂಜಲ ಎಲೆಗಳನ್ನು ತೆಗೆದ ಧರ್ಮರಾಯ ವಿಪ್ರನ ಎಲೆಯನ್ನು ತೆಗೆಯಲು ಮರೆಯುತ್ತಾನೆ. ಕೃಷ್ಣ ನಸುನಕ್ಕು ಅದೊಂದು ಎಲೆಯನ್ನೇಕೆ ಬಿಟ್ಟೆ ಎಂದು ವ್ಯಂಗ್ಯವಾಡುತ್ತಾನೆ. ಕೃಷ್ಣನ ಮಾತಿನಿಂದ ಸಂಕೋಚಕ್ಕೆ ಈಡಾದ ಧರ್ಮರಾಯ ಎಲೆ ತೆಗೆಯಲು ಪ್ರಯತ್ನಿಸಿದಷ್ಟು ಹೊಸ ಎಲೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಆ ಕಾಲ ಧನುರ್ವಸವಾಗಿರುತ್ತದೆ. ಹಾಗೆಂದೇ ಧನುರ್ವಸದಲ್ಲಿ ದೇವರಿಗೆ ನಿವೇದನೆ ಮಾಡಿ, ವಿಪ್ರರಿಗೆ ದಾನ ಮಾಡುವ ಪದ್ಧತಿ ಜಾರಿಗೆ ಬಂದಿತೆನ್ನುತ್ತಾರೆ.
ತಿರುಮಲದಲ್ಲಿ ನೆಲೆಸಿರುವ ಶ್ರೀನಿವಾಸ/ವೆಂಕಟೇಶನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ ಭೂದೇವಿ ಒಬ್ಬ ಸಾಮಾನ್ಯ ಹುಡುಗಿಯಾಗಿ, ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಮೊದಲು ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚೆನ್ನಾಗಿ ಕಾಣಿಸುತ್ತದೆ ಎಂದಮೇಲೆ ಅದನ್ನು ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು. ಇದೇ ಮಾರ್ಗಶೀರ್ಷ ಮಾಸದಲ್ಲಿ ತನ್ನ ಪ್ರಿಯತಮನಾದ ವೆಂಕಟೇಶನಿಗಾಗಿ ತಮಿಳಿನಲ್ಲಿ ತಿರುಪ್ಪಾವೈ ಮೂವತ್ತು ಕವಿತೆಗಳು ಎಂಬ ಗ್ರಂಥವನ್ನು ರಚಿಸಿದಳು. ಇವತ್ತಿಗೂ ಶ್ರೀವೈಷ್ಣವರು ಆ ಕೃತಿಗಳೇ ವೆಂಕಟೇಶನಿಗೆ ಪ್ರಿಯವಾದದ್ದೆಂದು ಪಠಿಸುತ್ತಾರೆ. ಪುರಾಣಗಳ ಪ್ರಕಾರ, ದೇವತೆಗಳ ರಾಜನಾದ ಇಂದ್ರ ಅಸುರರಿಂದ ಪರಾಜಿತನಾಗಿ ರಾಜ್ಯಭ್ರಷ್ಟನಾಗುತ್ತಾನೆ. ಆಗ ತನ್ನ ಪತಿದೇವನ ಕಲ್ಯಾಣಕ್ಕಾಗಿ ಶಚೀದೇವಿ ಶ್ರೀಹರಿಯನ್ನು ಪೂಜಿಸುತ್ತಾಳೆ. ಅದರಿಂದ ಸಂತುಷ್ಟನಾದ ಶ್ರೀಮನ್ನಾರಾಯಣನ ಕೃಪೆಯಿಂದ ಮತ್ತೆ ಇಂದ್ರ ಪದವಿ ಪಡೆದುಕೊಂಡದ್ದು ಇದೇ ಧನುರ್ವಸದಲ್ಲಿ.
ಧನುರ್ವಸದಲ್ಲಿ ಉಷಃಕಾಲದಲ್ಲಿ ವಿಷ್ಣುಪೂಜೆ ಮಾಡದವನು ಏಳು ಜನ್ಮಗಳಲ್ಲಿ ಬಡವನೂ, ಮೂಢನೂ, ಕ್ಷಯರೋಗಿಯೂ ಆಗುವನು. ಆದುದರಿಂದ ಮಹಾಪುಣ್ಯಕರವಾದ ಧನುರ್ಮಾಸದಲ್ಲಿ ಪ್ರಾತಃಕಾಲದಲ್ಲಿ ಪರಮಾತ್ಮನನ್ನು ಪೂಜಿಸತಕ್ಕದ್ದು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ನಮ್ಮ ಪಂಚಾಂಗದ ಪ್ರಕಾರ ಒಂದು ವರ್ಷವನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದು ಎರಡು ಭಾಗಗಳನ್ನಾಗಿ ಮಾಡಿದ್ದೇವೆ. ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನ. ಮಾರ್ಗಶೀರ್ಷ ಮಾಸ ದಕ್ಷಿಣಾಯನ ಪುಣ್ಯಕಾಲದಲ್ಲಿ ಬರುತ್ತದೆ. ಉತ್ತರಾಯಣ ಪುಣ್ಯಕಾಲ ದೇವತೆಗಳಿಗೆ ಬೆಳಗ್ಗೆ-ದಕ್ಷಿಣಾಯನ ಪುಣ್ಯಕಾಲ ರಾತ್ರಿ. ಈ ಮಾಸ, ರಾತ್ರಿ ಮುಗಿಯುತ್ತಿರುವ ಸಮಯ. ನಾವು ಯಾವ ಸಮಯವನ್ನು ಬ್ರಾಹ್ಮಿಮುಹೂರ್ತವೆಂದು ಕರೆಯುತ್ತೇವೋ ಅಂತಹ ಶ್ರೇಷ್ಠ ಮುಹೂರ್ತ ಈ ಇಡೀ ಮಾಸ. ಈ ತಿಂಗಳು ಪೂರ್ತಿ ಬ್ರಹ್ಮಮುಹೂರ್ತವೇ. ಈ ಮಾಸದಲ್ಲಿ ದೇಹವನ್ನು ದಂಡಿಸಿ, ಚಳಿಯಿದ್ದರೂ ನದಿಯಲ್ಲಿ ಸ್ನಾನ ಮಾಡಿ ಬರೀ ದೇವರ ಕಾರ್ಯಗಳನ್ನೇ ಮಾಡಿದರೆ ನಮ್ಮ ಇಷ್ಟಾರ್ಥಗಳು ಫಲಿಸುತ್ತವೆ.
ಧನುರ್ವಸದಲ್ಲಿ ವಿಶೇಷವಾಗಿ ಪರಮಾತ್ಮನನ್ನು ಹುಗ್ಗಿ ಸಮರ್ಪಣೆ ಮಾಡಿ ಪೂಜಿಸುವುದರಿಂದ ವಿಶೇಷ ಫಲವಿದೆ ಎಂದು ಪುರಾಣಗಳು ಸಾರಿ ಹೇಳುತ್ತಿವೆ. ಆಗ್ನೇಯ ಪುರಾಣದಲ್ಲಿ; ಧನುರ್ ರಾಶಿಯಲ್ಲಿ ಸೂರ್ಯನಿರುವಾಗ ಶ್ರೀಹರಿಗೆ ಹುಗ್ಗಿಯನ್ನು ಒಂದು ದಿನವಾದರೂ ಸಮರ್ಪಿಸುವ ಮನುಷ್ಯನು ಒಂದು ಸಾವಿರ ವರ್ಷಗಳವರೆಗೆ ಪೂಜೆ ಮಾಡಿದ ಫಲವನ್ನು ಪಡೆಯುವನು ಎಂದಿದೆ. ಧನುರ್ವಸದ ಒಂದು ತಿಂಗಳ ಕಾಲ ಪ್ರತಿದಿನ ಉಷಃಕಾಲದಲ್ಲಿ ಶ್ರೀಹರಿಗೆ ಹುಗ್ಗಿಯನ್ನು ಸಮರ್ಪಿಸುವುದರಿಂದ ಶ್ರೀಹರಿಯು ಸಂಪ್ರೀತನಾಗುವನು.
ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಚಳಿಗಾಲದಲ್ಲಿ ದೇಹ ಎಣ್ಣೆ ಅಂಶ ಕಳೆದುಕೊಳ್ಳುವುದರಿಂದ ತುಪ್ಪವು ಅದನ್ನು ದೇಹಕ್ಕೆ ಒದಗಿಸುವುದು, ಮೆಣಸು, ಜೀರಿಗೆ ಇದು ಶೀತ ತಡೆಯುವುದು, ಕಫ, ವಾಂತಿ ಪಿತ್ತ ನಿವಾರಿಸಿ ದೇಹಕ್ಕೆ ಉಷ್ಣವನ್ನು ನೀಡುವುದು ಹಾಗೂ ಹಸಿ ಶುಂಠಿ ಜೀರ್ಣಕ್ರಿಯೆಗೆ ಶ್ರೇಷ್ಠವಾದುದು. ಇನ್ನು ಈ ಕಾಲದ ಧನುರ್ವ್ಯತೀಪಾತಯೋಗವು ಸಹಸ್ರ ಅಧೋದಯಕ್ಕೆ ಸಮಾನ. ಈ ದಿನ ಶ್ರಾದ್ಧ, ಪಿತೃತರ್ಪಣ ನೀಡಬೇಕು. ನೈವೇದ್ಯ ಮಾಡಿ ಭಗವಂತನಿಗೆ ಅರ್ಘ್ಯವನ್ನು ನೀಡಬೇಕು.
ಈ ಆಚರಣೆಯಲ್ಲಿ ಪಾರಮಾರ್ಥಿಕತೆ, ವೈಜ್ಞಾನಿಕತೆ, ಭಾವನಾತ್ಮಕ ಸಂಬಂಧವೆಲ್ಲ ಕೂಡಿಕೊಂಡು ಒಳ್ಳೆಯದನ್ನೇ ನೀಡುತ್ತದೆ. ದೇವರನ್ನು ಧ್ಯಾನಿಸಲು, ಪೂಜಿಸಲು ಧನುರ್ಮಾಸ ಅತಿ ಶ್ರೇಷ್ಠವಾದುದಾಗಿದೆ.
ಈ ವರ್ಷದ ವಿಶೇಷ ಮಹತ್ವವುಳ್ಳ ಧನುರ್ಮಾಸ 2021 -2022ರಲ್ಲಿ 2021 ಡಿಸೆಂಬರ್ 16ರಂದು ಪ್ರಾರಂಭವಾಗುತ್ತದೆ ಮತ್ತು 2022 ಜನವರಿ 14ರಂದು ಕೊನೆಗೊಳ್ಳುತ್ತದೆ. ಅಂದರೆ ಮಕರ ಸಂಕ್ರಾಂತಿಯಂದು ಕೊನೆಗೊಳ್ಳುತ್ತದೆ.
ತಮಗೆಲ್ಲರಿಗೂ ಈ ಧನುರ್ಮಾಸ ಶುಭಕರವಾಗಿರಲಿ
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ