Homeಸುದ್ದಿಗಳುಸವಿತಾ ಸಮಾಜ ಮುಖ್ಯವಾಹಿನಿಗೆ ಬರಬೇಕು

ಸವಿತಾ ಸಮಾಜ ಮುಖ್ಯವಾಹಿನಿಗೆ ಬರಬೇಕು

ಸಿಂದಗಿ: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮೂಲದ ಕುರಿತು ಅರಿವು ಹೊಂದಿರಬೇಕು. ಸವಿತಾ ಮಹರ್ಷಿಗಳು ಸಾಮವೇದ ರಚನೆ ಮಾಡಿದ್ದರು. ಇವರ ಪುತ್ರಿ ಗಾಯತ್ರಿ ಮಂತ್ರ ರಚಿಸಿದ್ದರು ಎನ್ನುವ ಐಹಿತ್ಯವಿದೆ. ಯುವ ಜನಾಂಗಕ್ಕೆ ಸವಿತಾ ಮಹರ್ಷಿಗಳ ಬದುಕು ಆದರ್ಶಪ್ರಾಯವಾಗಿದೆ ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತ ಹಮ್ಮಿಕೊಂಡ ಸವಿತಾ ಮಹರ್ಷಿ ಅವರ ಜಯಂತಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿ, ಸವಿತಾ ಸಮಾಜದವರು ಇಂದು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು, ಸಮಾಜ ತನ್ನ ಪಾವಿತ್ರ್ಯವನ್ನು ಕಾಪಾಡಿಕೊಂಡಿದೆ. ಆದರೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಸರಕಾರ ಕಲ್ಪಿಸಿರುವ ಸವಲತ್ತುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕಿದೆ. ಒಂದು ಕಾಲದಲ್ಲಿ ತೀವ್ರ ಶೋಷಣೆಗೆ ಒಳಗಾಗಿದ್ದ ಸಮಾಜ ಪ್ರತಿ ಹಂತದಲ್ಲಿಯೂ ಪ್ರಗತಿ ಕಾಣಬೇಕಿದೆ. ಸಂಘಟನೆಯ ಮೂಲಕ ಹೋರಾಟಕ್ಕೆ ನಾಂದಿ ಹಾಡುವ ಅಗತ್ಯವಿದೆ ಎಂದು ತಿಳಿಸಿದರು.

ಸವಿತಾ ಸಮಾಜದ ಅಧ್ಯಕ್ಷ ಮಹಾಂತೇಶ ನಾವಿ ಮಾತನಾಡಿ, ಸವಿತಾ ಮಹರ್ಷಿಗಳ ಜಯಂತಿ ಆಚರಣೆಗೆ ಸರಕಾರ ಆದೇಶಿಸಿರುವುದು ಸ್ವಾಗತಾರ್ಹ. ಕೇವಲ ಆಚರಣೆಯಿಂದ ಸಮಾಜದ ಉದ್ಧಾರ ಸಾಧ್ಯವಾಗದು. ಮಹರ್ಷಿಗಳ ವಿಚಾರಧಾರೆಗಳನ್ನು ಪುಸ್ತಕರೂಪದಲ್ಲಿ ಹೊರತರುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ಸೋಮಪೂರ, ರಾಘವೇಂದ್ರ ಕೊಟನೂರ, ಸದಾಶಿವ ನಾವಿ, ಪ್ರಕಾಶ ನಾವಿ, ರವಿ ನಾವಿ, ಶ್ರೀಮಂತ ನಾವಿ, ಸಂಜು ಹಡಪದ, ಗುಂಡು ನಾವಿ, ಸಿದ್ದಲಿಂಗ ನಾವಿ ರಾಘವೇಂದ್ರ ನಾವಿ ಸೇರಿದಂತೆ ಹಲವರು ಇದ್ದರು.

RELATED ARTICLES

Most Popular

error: Content is protected !!
Join WhatsApp Group