ಮೂಡಲಗಿ – ಭಾರತದ ಮಹಿಳೆಯರು ನಾನಾ ರಂಗಗಳಲ್ಲಿಯೂ ಸಂಪೂರ್ಣ ಸಮಾನತೆ ಸಾಧಿಸಲು ಗಟ್ಟಿಯಾದ ತಳಹದಿ ಹಾಕಿದ ಮಹಿಳೆಯರಲ್ಲಿ ದೇಶದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆಯವರ ಕೊಡುಗೆ ಅಪಾರವಾದುದು. ಬಾಲ್ಯ ವಿವಾಹ ರದ್ಧತಿ, ವಿಧವಾ ವಿವಾಹ, ಮಹಿಳೆಯರ ಶಿಕ್ಷಣಕ್ಕಾಗಿ ಅಪಾರ ಕೊಡುಗೆ ನೀಡಿದ ಅವರ ತ್ಯಾಗವನ್ನು ನಾವು ನೀವು ಗೌರವಿಸಿ ಅವರ ಹಾದಿಯಲ್ಲಿ ದೇಶ ಮುನ್ನಡೆಸಬೇಕಾಗಿದೆ ಎಂದು ಪ್ರೊ. ಚೇತನರಾಜ್ ಬಿ. ಹೇಳಿದರು.
ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆಯವರ 191 ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಭಾರತದಲ್ಲಿ ಪ್ರಥಮ ಬಾಲಕಿಯರ ಶಾಲೆಯನ್ನು ತೆರೆದು ಮಕ್ಕಳನ್ನು ಶಾಲೆಗೆ ಸೆಳೆಯುವ ವಿನೂತನ ಯೋಜನೆಯಾಗಿ ವಿದ್ಯಾರ್ಥಿವೇತನ ನೀಡಲಾರಂಭಿಸಿದರು. ಸಾಮಾಜಿಕ ಸೇವೆಯಲ್ಲಿ ತೊಡಗಿದ ಅವರು ಉಚಿತ ಆಸ್ಪತ್ರೆಯನ್ನು ತೆರೆದು ಬಡಜನರ ಸೇವೆ ಮಾಡಿದರು ಇಂದು ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳನ್ನು ಫುಲೆ ದಂಪತಿಗಳು ನೂರಾರು ವರ್ಷಗಳ ಹಿಂದೆಯೇ ಪ್ರಾರಂಭಿಸಿರುವದು ಶ್ಲಾಘನೀಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಂಶುಪಾಲರಾದ ಹನುಮಂತ ಕಾಂಬಳೆ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ದೇಶದ ಮೊದಲ ಮಹಿಳಾ ಶಿಕ್ಷಕಿಯರು ಮಾಡಿದ ಸಾಧನೆಗಳು ಅಪಾರ.ಅವರ ಜೀವನ ನಮಗೆ ಸಂದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. , ಎನ್.ಎಸ್.ಎಸ್ ಸಂಯೋಜಕರಾದ ಸಂಜೀವಕುಮಾರ ಗಾಣಿಗೇರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವೀಣಾ ಮೂಗನೂರ, ಆರ್.ಆಯ್. ಆಸಂಗಿ, ಮಹಿಳಾ ವೇದಿಕೆಯ ಸಂಚಾಲಕರಾದ ಶ್ರೀಮತಿ ಶೀತಲ ತಳವಾರ, ಸಂಜೀವ ಮದರಖಂಡಿ, ಬಸಪ್ಪ ಹೆಬ್ಬಾಳ , ಶಿವಕುಮಾರ ಹಾಗೂ ಎಲ್ಲಾ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ಎಮ್.ಬಿ. ಸಜ್ಜನವರ ಸ್ವಾಗತಿಸಿದರು. ಆರ್.ಆಯ್.ಆಸಂಗಿ ವಂದಿಸಿದರು. ಶ್ರೀಮತಿ ಗಾಯತ್ರಿ ಸಾಳೋಖೆ ನಿರೂಪಿಸಿದರು.