ಬೀದರ : ಬೀದರ್ ಜಿಲ್ಲೆಯಲ್ಲಿ ಕೆಲ ದಿನಗಳಿಂದ ತೀವ್ರ ಚಳಿ ಇರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಬೇಗ ಶಾಲೆಗೆ ತೆರಳಲು ತೊಂದರೆಯಾಗುತ್ತಿರುವ ಹಿನ್ನೆಲೆ ಶನಿವಾರದಂದು ಎಲ್ಲ ಪ್ರಾಥಮಿಕ, ಪ್ರೌಢ ಶಾಲೆಗಳ ಸಮಯ ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕ ಸುರೇಶ ಹೆಚ್.ಜಿ. ಅವರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಪ್ರತಿ ಶನಿವಾರದಂದು ಬೆಳಿಗ್ಗೆ 7.30 ರಿಂದ 12.30ರವರೆಗೆ ಶಾಲಾ ಸಮಯ ಬದಲಾವಣೆಯಾಗಿತ್ತು. ಇದರಿಂದ ಚಳಿಗಾಲದಲ್ಲಿ ತೀವ್ರ ಚಳಿ, ಶೀತಗಾಳಿ ಬೀಸುತ್ತಿರುವ ಕಾರಣ ವಿದ್ಯಾರ್ಥಿಗಳು ಬೆಳಿಗ್ಗೆ ಬರಲು ತೊಂದರೆಯಾಗುತ್ತಿತ್ತು. ಮಕ್ಕಳ ಹಿತದೃಷ್ಟಿಯಿಂದ ಶಾಲಾ ಸಮಯ ಬದಲಾವಣೆ ಮಾಡುವಂತೆ ಬೀದರ್ ಜಿಲ್ಲಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿತು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಅನುಮತಿ ಆದೇಶ ಮೇರೆಗೆ ಡಿಡಿಪಿಐ ಸುರೇಶ ಹೆಚ್.ಜಿ. ಅವರು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಸಮಯವನ್ನು ಶನಿವಾರದಂದು ಬೆಳಿಗ್ಗೆ 9.50 ರಿಂದ ಮಧ್ಯಾಹ್ನ 1.30ರವರೆಗೆ ಬದಲಾವಣೆ ಮಾಡಿ ಜ.1ರಂದು ಆದೇಶಿಸಿದ್ದಾರೆ.
ತೀವ್ರ ಚಳಿಯಿಂದ ಶಾಲಾ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿತ್ತು. ಗ್ರಾಮೀಣ ಭಾಗದಿಂದ ಪ್ರೌಢ ಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಬೆಳಿಗ್ಗೆ ಬಸ್ ಸೌಕರ್ಯ ಸೇರಿ ನಾನಾ ತೊಂದರೆ ಅನುಭವಿಸುತ್ತಿದ್ದರು. ಶನಿವಾರ ಶಾಲಾ ಸಮಯ ಬದಲಾವಣೆಗೆ ಶಿಕ್ಷಕರ, ಪೋಷಕರ ಆಗ್ರಹ ಕೇಳಿ ಬಂದಿತ್ತು. ಈಗ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಸಮಯ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶಿಸಿರುವುದು ಸಾರ್ವಜನಿಕ ವಲಯದಲ್ಲಿ ಸ್ವಾಗತ ವ್ಯಕ್ತವಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ

