ಮೂಡಲಗಿ: ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಗೋಕಾಕ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಉಳ್ಳಾಗಡ್ಡಿ ಬೆಳೆಯ ರೋಗ ಪೀಡಿತ ಕ್ಷೇತ್ರಗಳಿಗೆ ವಿಜ್ಞಾನಿಗಳು ಭೇಟಿ ನೀಡಿದರು.
ಡಾ. ವಿಜಯಕುಮಾರ ರಾಠೋಡ, ಸಹಾಯಕ ಪ್ರಾಧ್ಯಾಪಕರಾದ ರೇಣುಕಾ ಹಿರೇಕುರಬರ ಹಾಗೂ ತೋಟಗಾರಿಕಾ ಸಹಾಯಕ ಅಧಿಕಾರಿ ಕಾವ್ಯಶ್ರೀ ಸಿಂಗಳಾಪೂರ ಭಾಗವಹಿಸಿ ರೈತರಿಗೆ ರೋಗಕ್ಕೆ ಸೂಕ್ತ ಸಲಹೆಗಳನ್ನು ನೀಡಿದ್ದರು.
8-10 ದಿನಗಳಿಂದ ಸತತ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಕೊಳೆರೋಗ ಮತ್ತು ಥ್ರಿಪ್ಸ್ ನುಶಿ ಕಂಡು ಬಂದಿದ್ದು, ರೈತರು ಮ್ಯಾಂಕೋಜೆಬ್ ಶೇ.64+ ಕಾರ್ಬನ್ಡೈಜಿಮ್ ಶೇ. ಶಿಲೀಂದ್ರನಾಶಕವನ್ನು ಮತ್ತು ಅಸಿಟಮಾಪ್ರಿಡ್ 0.2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ನಂತರ ರೋಗದ ಬಾಧೆ ಮುಂದುವರೆದಲ್ಲಿ ಹೆಕ್ಸಾಕೊನೊಜೋಲ್ 1 ಮಿ.ಲೀ. ಮತ್ತು ಲ್ಯಾಮ್ಡಾಸೈಲೋಥ್ರೀನ್ 0.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಬಿತ್ತನೆ ಮಾಡಿದ 6 ವಾರಗಳ ನಂತರ ಪ್ರತಿ ಎಕರೆಗೆ 63 ಕೆ.ಜಿ. ಯೂರಿಯಾವನ್ನು ಕೊಡಬೇಕು. ಗಡ್ಡೆ ಬರುವ ಸಮಯದಲ್ಲಿ ಪ್ರತಿ ಎಕರೆಗೆ 11ಕೆ.ಜಿ. ಗಂಧಕವನ್ನು ಕೊಡಬೇಕು ಎಂದು ತಿಳಿಸಿದರು.
ಈ ಕ್ಷೇತ್ರ ಭೇಟಿಯಲ್ಲಿ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ವಿಜ್ಞಾನಿಗಳಾದ ಡಾ. ಕಾಂತರಾಜು ಇದ್ದರು.
ರೈತರಾದ ಸಿದ್ದಪ್ಪ ಬಸಪ್ಪ ಪೂಜೇರಿ, ಮಲ್ಲಪ್ಪ ತಟ್ಟಿನ, ಲಕ್ಷ್ಮಣ ಪೂಜೇರಿ, ಬಸವರಾಜ ಕಾಸರಡ್ಡಿ, ಗಣಪತಿ ಶಿರೋಶಿ, ಬೀರಸಿದ್ದಪ್ಪ ಪೂಜೇರಿ, ಚನ್ನಪ್ಪ ಪೂಜೇರಿ ಉಪಸ್ಥಿತರಿದ್ದರು.