ಧಾರವಾಡ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ೨೦೨೫ ನೆಯ ವರ್ಷದ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ರಿಷಿ ಕೃಷ್ಣ ಬೋಂಗಾಳೆ ರಾಷ್ಟ್ರಕ್ಕೆ 334ನೆಯ ರಾಂಕ್ ಪಡೆದು ಭಾರತೀಯ ಭೂಸೇನಾ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
2017ರಲ್ಲಿ ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾದ ರಿಷಿ, ಅಲ್ಲಿ ಸತತ 7 ವರ್ಷಗಳ ಅಧ್ಯಯನದ ಸಂದರ್ಭದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ತೇರ್ಗಡೆಯಾಗಿ ಭಾರತೀಯ ಭೂಸೇನಾ ಅಧಿಕಾರಿಯಾಗಿ ದೇಶಸೇವೆ ಮಾಡುವಲ್ಲಿ ಸಂಕಲ್ಪಿಸುತ್ತಾರೆ. ಪರೀಕ್ಷೆಯ ಪಠ್ಯಕ್ರಮ ಹಾಗೂ ಹಳೆಯ ಪ್ರಶ್ನೆಪತ್ರಿಕೆ ಗಮನಿಸಿ ಅದಕ್ಕೆ ಪೂರಕವಾದ ಅಧ್ಯಯನ ಸಾಮಗ್ರಿ ಸಂಗ್ರಹಿಸಿಕೊಂಡು ದಿನಕ್ಕೆ ನಿರಂತರ 7-8 ತಾಸುಗಳ ಅಧ್ಯಯನದೊಂದಿಗೆ ಪರೀಕ್ಷೆ ಎದುರಿಸಿದ್ದು, ಪ್ರಸ್ತುತ 3ನೆಯ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ.
ಶುಭ ಹಾರೈಕೆ : ರಾಷ್ಟ್ರಕ್ಕೆ 334ನೆಯ ರಾಂಕ್ ಪಡೆದು ಭಾರತೀಯ ಭೂಸೇನಾ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ರಿಷಿ ಬೋಂಗಾಳೆ ಅವರಿಗೆ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಸಿ, ಇದು ಅಮ್ಮಿನಬಾವಿ ಗ್ರಾಮಕ್ಕೆ ಅತ್ಯಂತ ಹೆಮ್ಮೆಯ ಸಂಗತಿ ಎಂದಿದ್ದಾರೆ. ರಿಷಿ ತಂದೆ ಕೃಷ್ಣ ಬೋಂಗಾಳೆ ಹಾಗೂ ತಾಯಿ ಚೆನ್ನಮ್ಮ ಬೋಂಗಾಳೆ ಇಬ್ಬರೂ ಪ್ರಾಥಮಿಕ ಶಾಲಾ ಅಧ್ಯಾಪಕರು.
ವರದಿ:ಗುರುಮೂರ್ತಿ ಯರಗಂಬಳಿಮಠ, ಅಮ್ಮಿನಬಾವಿ ೫೮೧೨೦೧ ಮೊ : ೯೯೪೫೮೦೧೪೨೨

