ಮುನವಳ್ಳಿ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನದಯಾಳ ಅಂತ್ಯೋದಯ ಯೋಜನೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಅಡಿಯಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಶಿಕ್ಷಕ ವೀರಣ್ಣ ಕೊಳಕಿ ನೆರವೇರಿಸಿದರು.
ನಂತರ ಮಾತನಾಡಿ “ಮಹಿಳೆಯರು ಸ್ವಾವಲಂಬಿಯಾಗಲು ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಅವುಗಳ ಸಮಗ್ರ ಮಾಹಿತಿ ಪಡೆದು, ಸದುಪಯೋಗ ಪಡೆದುಕೊಳ್ಳಬೇಕು. ಸ್ವ ಸಹಾಯವೆಂದರೆ ತಮಗೆ ತಾವೇ ಮಾಡಿಕೊಳ್ಳುವ ಸಹಾಯ. ತಮಗೆ ತಾವೇ ಸಹಾಯ ಮಾಡಿಕೊಳ್ಳುತ್ತ ಇತರರಿಗೂ ಸಹಾಯ ಮಾಡಿ, ಉಳಿದವರೂ ಕೂಡ ಆರ್ಥಿಕ ಪ್ರಗತಿ ಸಾಧಿಸಲು ಸಹಾಯ ಮಾಡಬೇಕು” ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕ ಗುರುನಾಥ ಪತ್ತಾರ ಮಾತನಾಡಿ “ಮಹಿಳೆಯರು ವಿಶಾಲ ಮನಸ್ಸನ್ನು ಹೊಂದಿರುತ್ತಾರೆ. ವಿಶಾಲ ಮನಸ್ಸು ಇರುವುದರಿಂದ ಕುಟುಂಬದ ಪ್ರತಿಯೊಂದು ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನೆರವೇರುತ್ತವೆ. ಮಹಿಳೆಯರಿಗೆ ಸಹನಾ ಶಕ್ತಿ ಇರುವುದರಿಂದ ಅವರು ಹಿಡಿದ ಪ್ರತಿಯೊಂದು ಕಾರ್ಯ ಯಶಸ್ವಿ ಹೊಂದುತ್ತವೆ. ಹಿಂದಿನ ಕಾಲದ ಸ್ತ್ರೀಗೂ ಇಂದಿನ ಕಾಲದ ಸ್ತ್ರೀಗೂ ಕಾಲಾನುಕ್ರಮದಲ್ಲಿ ವ್ಯತ್ಯಾಸಗಳಿದ್ದು, ಎಲ್ಲವನ್ನು ಅರಿತುಕೊಂಡು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪರಸ್ಪರ ಅಭಿವೃದ್ಧಿಗೆ ಪೂರಕವಾಗಬೇಕೆಂದರು.
ಪುರಸಭೆ ಸಮುದಾಯ ಸಂಘಟನಾಧಿಕಾರಿ ವಿ.ಜಿ.ಅಂಗಡಿ ಮಾತನಾಡುತ್ತ ‘ಮಹಿಳೆಯರ ಸ್ವಾವಲಂಬನೆ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ, ಜೀವಪನೋಪಾಯಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಪುರಸಭೆ ಆ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸಲು ಪ್ರಯತ್ನಿಸುತ್ತಿದೆ. ಸ್ವಸಹಾಯ ಸಂಘಗಳ ಸದಸ್ಯರು ಈ ಕುರಿತು ಜನರಿಗೆ ತಿಳಿಹೇಳಬೇಕು’ ಎಂದರು.
ಧಾರವಾಡದ ಪ್ರಮೀಳಾ ಕೌಶಲ್ಯಾ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕಿ ಪ್ರಿಯಾ ಖೋದಾನಪುರ ಮಾತನಾಡಿ ‘ಮಹಿಳೆಯರು ಕೈಗೊಳ್ಳಬಹುದಾದ ಸ್ವಯಂ ಉದ್ಯೋಗ ಹಾಗೂ ಗುಡಿ ಕೈಗಾರಿಕೆಗಳ ಸಮಗ್ರ ಮಾಹಿತಿ’ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಮನೋಹರ ಅಜಮನಿ, ಯಲ್ಲಪ್ಪ ಭಜಂತ್ರಿ, ಮುತ್ತಪ್ಪ ಪಾಗಾದ, ಅಡಿವೆಪ್ಪ ವೀರಶೆಟ್ಟಿ, ಹಾಗೂ ಪುರಸಭೆ ಸಿಬ್ಬಂದಿ ಸೇರಿದಂತೆ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಸದಸ್ಯರು ಇದ್ದರು.