“ದಾರಿ ಯಾವುದಯ್ಯ ವೈಕುಂಠಕೆ ಎಂಬ ಉತ್ತಮ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಸಿದ್ದು ಪೂರ್ಣಚಂದ್ರರವರು ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಹಲವು ವಿಭಿನ್ನ ಚಿತ್ರಗಳನ್ನು ಈಗಾಗಲೇ ನಿರ್ದೇಶನ ಮಾಡಿದ್ದಾರೆ. ಬ್ರಹ್ಮಕಮಲ, ತಾರಿಣಿ, ಈ ಪಾದ ಪುಣ್ಯ ಪಾದ, ಇವುಗಳ ಸಾಲಿಗೆ ಮತ್ತೊಂದು ಹೊಸ ಚಿತ್ರ ಪುಟ್ಟಣ್ಣನ ಕತ್ತೆ ಎಂಬ ಚಿತ್ರವೂ ಸೇರಿಕೊಳ್ಳುತ್ತದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನವರಾದ ಸಿದ್ದು ಪೂರ್ಣಚಂದ್ರ ಮತ್ತು ನನ್ನ ಸ್ನೇಹ ಕೆಲ ವರ್ಷಗಳಿಂದ ಆತ್ಮೀಯವಾಗಿ ಬೆಳೆದಿದೆ. ಇಂದು ಫೋನ್ ಗೆ ಸಿಕ್ಕರು. ನನ್ನ (ನಿರ್ದೇಶಕರ) ಜನುಮದಿನದಂದು ಚಿತ್ರ ತಂಡ “ಪುಟ್ಟಣ್ಣನ ಕತ್ತೆ” ಪೋಸ್ಟರ್ ಬಿಡುಗಡೆ ಮಾಡಿದೆ ಎಂದರು.
ಮೊದಲ ಪೋಸ್ಟರ್ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂಬುದು ಚಿತ್ರತಂಡದ ನಂಬಿಕೆ. ಮುಂದಿನ ಪೋಸ್ಟರ್ನಲ್ಲಿ ಕಲಾವಿದರನ್ನು ತೋರಿಸಲಾಗುತ್ತದೆ ಎಂದು ಸಿದ್ದು ತಿಳಿಸಿದರು.
ಎಲ್ಲರು ನಾಯಿ ಮೇಲೆ ಚಿತ್ರ ಮಾಡಿದರೆ ನಾನ್ಯಾಕೆ ಕತ್ತೆ ಮೇಲೆ ಕತೆ ಬರೆದು ಚಿತ್ರ ಮಾಡಬಾರದು ಅಂತ ಐಡಿಯಾ ಬಂದು ಈ ಕಥೆ ಹೊಳೆಯಿತೆಂದು ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನುಷ್ಯರ ಜೊತೆ ಕತ್ತೆಯನ್ನು ಬಳಸಲಾಗಿದೆ ಎಂದರು. ಮೊದಲಿಗೆ ಇದು ಸಾವಾಲಾಗಿ ಪರಿಣಮಿಸಿದರೂ ನಂತರ ಅದರೊಂದಿಗೆ ನಟರನ್ನು ಬಿಟ್ಟು ಅಭ್ಯಾಸ ಮಾಡಿಸಿದೆವು, ನಟನೆ ಜೊತೆಗೆ ಅದರೊಂದಿಗೆ ಬಾಂಧವ್ಯ ಬೆಳೆಸಿಕೊಂಡ ನಂತರ ಚಿತ್ರೀಕರಿಸಲಾಯಿತು ಎಂದರು.
ನಮ್ಮೆಲ್ಲರಿಗೂ ಕತ್ತೆಯ ಜೊತೆಗಿನ ಒಡನಾಟ ಹೊಸದು ಅದರ ಮನಸ್ಥಿತಿ ನೋಡಿಕೊಂಡು ಚಿತ್ರೀಕರಣ ಮಾಡಿದೆವು. ಮುಂದಿನ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕಷ್ಟವೆಸಿದರೂ ಒಂದೆರಡು ದಿನಗಳಲ್ಲಿ ಕತ್ತೆಯೂ ನಮ್ಮೊಂದಿಗೆ ಸಹಕರಿಸಿದ್ಧು ವಿಶೇಷ ಎಂದರು. ಇದಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತಿದ್ದೇನೆಂದು ಸಿದ್ದು ಪೂರ್ಣಚಂದ್ರ ಹೇಳಿದರು.
ಪೂರ್ಣಚಂದ್ರ ಫಿಲಂಸ್’ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ತನ್ಮಯ್ ಎಸ್ ಗೌಡರು ಬಂಡವಾಳ ಹೂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಅನಿಶ್ ಆರ್ಯನ್, ಭೀಮೇಶ್ ಅಭಿನಯಿಸಿದ್ದಾರೆ. ಉಳಿದಂತೆ ಕಲಾರತಿ ಮಹದೇವ್, ಸಿದ್ದು ಮಂಡ್ಯ, ರಶ್ಮಿ ಮೈಸೂರ್, ಬಾಬು, ರೋಹಿಣಿ, ಎನ್ ಟಿ ರಾಮಸ್ವಾಮಿ, ಲಕ್ಕಿ ಶಂಕರ್, ಶೃತಿ ಗಗನ, ಸೌಮ್ಯ, ಕವಿತಾ ಕಂಬಾರ್, ಲಿಯೋ ಶರ್ಮ, ವಿಭಾ ವಂದನ್ ಮೊದಲಾಗಿ ಅಭಿನಯಿಸುತ್ತಿದ್ದಾರೆ.
ಛಾಯಾಗ್ರಾಹಕರಾಗಿ ರಾಜು ಹೆಮ್ಮಿಗೇಪುರ, ಸಂಕಲನಕಾರರಾಗಿ ದೀಪು, ಸಂಗೀತ ಅನಂತ್ ಆರ್ಯನ್, ಸಿಂಕ್ ಸೌಂಡ್ ಕೃಷ್ಣಮೂರ್ತಿ ನಿರ್ವಹಿಸಿದ್ದಾರೆ.
ಇಷ್ಟು ಮಾಹಿತಿ ಹಂಚಿಕೊಂಡ ಸಿದ್ದುಗೆ ಶುಭಾಶಯ ಕೋರಿದೆ. ಇವರ ನಿರ್ದೇಶನದ ಈ ಹಿಂದಿನ ಮೂರು ಚಿತ್ರಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಫಿಲಂ ಫೇಸ್ಟಿವೆಲ್ ಗಳಲ್ಲಿ, ಪ್ರದರ್ಶನಗೊಂಡು ಅವಾರ್ಡ್ ಪಡೆದಿವೆ. ಇವರ ನಿರ್ದೇಶನದ ವೈಕುಂಠಕ್ಕೆ ದಾರಿ ಯಾವುದಯ್ಯಾ ನೂರಕ್ಕೂ ಮೀರಿ ಪ್ರಶಸ್ತಿ ಪುರಸ್ಕಾರಗಳ ಭೇಟೆಯಾಡಿದೆ. ಈ ಚಿತ್ರವನ್ನು ನೋಡಿ ನಾನು ಆಗೆ ಬರೆದಿದ್ದೆ. ಈ ಪಾದ ಪುಣ್ಯ ಪಾದ ಚಿತ್ರದ ಬಗ್ಗೆಯೂ ಬರೆಯಿರಿ ಕಳಿಸಿ ಕೊಡುತ್ತೇನೆ ಎಂದರು. ಖಂಡಿತ ಕಳಿಸಿ. ನಿಮ್ಮ ಹೊಸ ಚಿತ್ರವೂ ಯಶಸ್ವಿಯಾಗಲಿ. ಚಿತ್ರ ನೋಡುವ ಕುತೂಹಲ ಇದೆ ಎಂದೆ. ಆಗಲಿ ಚಿತ್ರ ಬಿಡುಗಡೆ ದಿನ ನಿಮಗೆ ತಿಳಿಸುವೆ ಎಂದರು.
ಗೊರೂರು ಅನಂತರಾಜು,
ಹಾಸನ
9449462879