ಬೆಳಗಾವಿ – ಇದೇ ತಿಂಗಳು 21, 22, 23 ರಂದು ಉತ್ತರ ಈಶಾನ್ಯ ರಾಜ್ಯ ಅಸ್ಸಾಂ ನ ಗೌಹಾತಿಯಲ್ಲಿ ಅಖಿಲ ಭಾರತ ಕವಯಿತ್ರಿಯರ 25 ನೆಯ ವರ್ಷದ ಸಮ್ಮೇಳನವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ.
ಇದರಲ್ಲಿ ಇಡೀ ಭಾರತದ ಎಲ್ಲ ಭಾಷೆಗಳ ಕವಯಿತ್ರಿಯರು ಭಾಗವಹಿಸುತ್ತಿರುವುದು ಒಂದು ವಿಶೇಷ. 25 ಭಾಷೆಯ ಪುಸ್ತಕಗಳು ಬಿಡುಗಡೆಗೊಳ್ಳುತ್ತಿರುವುದು ಇನ್ನೊಂದು ವಿಶೇಷ.
ಅಲ್ಲಿ ಬಹುಭಾಷಾ ಕವಿಗೋಷ್ಠಿ, ಪ್ರಬಂಧ ಮಂಡನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದರ ಜೊತೆಗೆ ಹಲವಾರು ದತ್ತಿ ಪ್ರಶಸ್ತಿಗಳನ್ನು ಸಹ ನೀಡಿ ಗೌರವಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳು, ರಾಜ್ಯಪಾಲರು ಮತ್ತು ಇತರ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಬೆಳಗಾವಿಯಿಂದ ಇಪ್ಪತ್ತೈದು ಜನ ಕವಯಿತ್ರಿಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಅದರಲ್ಲಿ ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆಯ ಅಡಿಯಲ್ಲಿರುವ ಅಕ್ಕನ ಅರಿವು ಮತ್ತು ಕನ್ನಡ ಕವನ ಕಾವ್ಯ ಕೂಟದ ಬಳಗದಿಂದ ವಿಶ್ವಸ್ಥರಾದ ಶ್ರೀಮತಿ ಸುಧಾ ಪಾಟೀಲ ಅವರು ಮತ್ತು ಆಜೀವ ಸದಸ್ಯರಾದ ಪ್ರೊ.ರಾಜನಂದಾ ಗಾರ್ಗಿ ಅವರೂ ಸಹ ಭಾಗವಹಿಸಿ ಕಾವ್ಯ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಭಾಗಿಯಾಗಲಿದ್ದಾರೆ.
ಇದೇ ಸಂದರ್ಭದಲ್ಲಿ ಸುಧಾ ಪಾಟೀಲ ಅವರ ” ತೊಟ್ಟಿಲು ತೂಗುವ ಕೈ ” – ಅಪ್ರತಿಮ ಮಹಿಳಾ ಸಾಧಕಿಯರ ಬಗೆಗೆ ಬರೆದ ಪುಸ್ತಕ ಬಿಡುಗಡೆಗೊಳ್ಳುತ್ತಿದೆ.
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆಯ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು,ವಿಶ್ವಸ್ಥರು, ಕಾರ್ಯಕಾರಿ ಮಂಡಳಿ,ದತ್ತಿ ದಾಸೋಹಿಗಳು ಮತ್ತು ಆಜೀವ ಸದಸ್ಯರು ಸುಧಾ ಪಾಟೀಲ್ ಮತ್ತು ಪ್ರೊ ರಾಜನಂದಾ ಘಾರ್ಗಿ ಅವರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆಗಳ ಜೊತೆಗೆ ಶುಭ ಕೋರಿದ್ದಾರೆ.

