ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ಇತಿಹಾಸ ಶಿಕ್ಷಕರ ಸಂಘ, ಬೆಳಗಾವಿ ಹಾಗೂ ಭರತೇಶ ಬಿ.ಬಿ.ಎ. ಕಾಲೇಜು ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ “ಭಾರತದಲ್ಲಿ ಜಾತಿ ವಿರೋಧಿ ರಾಜಕೀಯ: ಡಾ. ಬಿ.ಆರ್.ಅಂಬೇಡ್ಕರ ಅವರ ಚಿಂತನೆ ಮತ್ತು ಕಾರ್ಯತಂತ್ರ” ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಚದ ಒಂದು ದಿನದ ವಿಚಾರ ಸಂಕಿರಣವನ್ನು ಶನಿವಾರ ದಿ. 21-06-2025 ರಂದು ಬೆಳಿಗ್ಗೆ 11 ಗಂಟೆಗೆ ಭರತೇಶ ಬಿ.ಬಿ.ಎ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಆದರೆ ಚನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ಶಿಕ್ಷಕರ ಸಂಘವು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಆಂಗ್ಲ ಭಾಷೆಯಲ್ಲಿ ಮುದ್ರಿಸಿ ತನ್ನ ಹೆಗ್ಗಳಿಕೆ ಮೆರೆದಿದೆ.
ಮುಖ್ಯ ಅತಿಥಿಗಳಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಶೀಲಾಧರ ವಾಯ್. ಮುಗಳಿ ಆಗಮಿಸಲಿದ್ದಾರೆ. ಸಂಘದ ಹಾಗೂ ಇತಿಹಾಸ ಮೌಲ್ಯಮಾಪನ ವಿಭಾಗದ ಅಧ್ಯಕ್ಷರಾದ ಡಾ. ಆರ್.ಎಚ್. ಸಜ್ಜನ್ ಅಧ್ಯಕ್ಷತೆ ವಹಿಸುವರು.
ಭರತೇಶ ಬಿ.ಬಿ.ಎ. ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ ಆರ್. ಕಾಂಬಳೆ, ವಿವಿಧ ಕಾಲೇಜುಗಳ ಇತಿಹಾಸ ಅಧ್ಯಾಪಕರು, ರಾಚವಿ ಕಾಲೇಜು ಇತಿಹಾಸ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತಿ ಇರುವರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಾಧ್ಯಾಪಕರುಗಳನ್ನು ಸತ್ಕರಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷರಾದ ಶಂಕರ ಎಂ. ನಿಂಗನೂರ, ಕಾರ್ಯದರ್ಶಿಗಳಾದ ಡಾ. ಸಿ.ಬಿ. ತಾಬೋಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಡಿ ನಾಡಿನಲ್ಲಿ ಕನ್ನಡವನ್ನು ವಿಜೃಂಭಿಸಬೇಕಾದ ಶಿಕ್ಷಕರು, ಉಪಾಧ್ಯಾಯರು, ಪ್ರಾಧ್ಯಾಪಕರುಗಳು ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಇಂಗ್ಲಿಷ್ ನಲ್ಲಿ ಮುದ್ರಿಸಿ ವಿತರಣೆ ಮಾಡಿದ್ದಾರೆ. ಕನ್ನಡದ ಹೋರಾಟಗಾರ್ತಿ ರಾಣಿ ಚನ್ನಮ್ಮಳ ಹೆಸರಿನ ಮೇಲೆ ನಿರ್ಮಾಣವಾಗಿರುವ ವಿಶ್ವವಿದ್ಯಾಲಯ ಕನ್ನಡ ಕಟ್ಟುವ ಕೆಲಸ ಮಾಡಬೇಕಾಗಿದೆ.