ಸರ್ಕಾರಿ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾ ಹತ್ತಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದಾರೆ ಡಾ. ಹೇಮಂತ ಕುಮಾರ್. ಬಿ. ರವರು.
ಹಾಸನ ತಾಲ್ಲೂಕು ಚಿಕ್ಕನಾಯಕನಹಳ್ಳಿ ಎಂಬ ಗ್ರಾಮದ ನಿವೃತ್ತ ಶಿಕ್ಷಣ ಸಂಯೋಜಕರಾದ ಬೊಮ್ಮೇಗೌಡ. ಎ. ಪಿ. ಹಾಗೂ ಶ್ರೀಮತಿ ಸಾವಿತ್ರಮ್ಮ. ಕೆ. ದಂಪತಿಗಳ ಸುಪುತ್ರರಾಗಿರುವ ಡಾ. ಹೇಮಂತ ಕುಮಾರ್. ಬಿ. ರವರು ತಮ್ಮ ಊರಿನಿಂದ 5 ಕಿ. ಮೀ. ದೂರ ಇರುವ ಗೊರೂರು ಹೇಮಾವತಿ ಜಲಾಶಯ ಯೋಜನೆ ( H R P ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗೊರೂರಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದವರು. ಪ್ರಾಥಮಿಕ ಶಾಲೆಗೆ ತಮ್ಮ ಊರಿನಿಂದ 5 ಕಿ. ಮೀ. ನಡೆದುಕೊಂಡೇ ಹೋಗುತ್ತಿದ್ದವರು ಪ್ರೌಢಶಾಲೆಗೆ ಬಂದ ನಂತರ ಬೈಸಿಕಲ್ ನಲ್ಲಿ ಓಡಾಡಿಕೊಂಡು ವಿದ್ಯಾಭ್ಯಾಸ ಮಾಡಿದರು. ಬಳಿಕ ಮೈಸೂರು ಬಳಿಯ ಸುತ್ತೂರಿನ JSS TCH ಕಾಲೇಜಿನಲ್ಲಿ TCH ತರಬೇತಿ ಪಡೆದು ಮೈಸೂರು ವಿ. ವಿ. ಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಪದವಿ ಹಾಗೂ ಕುವೆಂಪು ವಿ. ವಿ. ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.
ಸಹ ಶಿಕ್ಷಕರಾಗಿ ಹಲವು ವರ್ಷಗಳ ಸೇವೆ ಪೂರೈಸಿದ್ದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಗರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಶಾಲಾ ಸಿಬ್ಬಂದಿಗಳ ಸಹಕಾರದೊಂದಿಗೆ ಹಳೆಯ ವಿದ್ಯಾರ್ಥಿಗಳು ಹಾಗೂ ಇತರ ದಾನಿಗಳಿಂದ ಶಾಲೆಗೆ ಲ್ಯಾಪ್ ಟಾಪ್, ಪ್ರಿಂಟರ್, ಪ್ರೊಜೆಕ್ಟರ್ ಇತ್ಯಾದಿಗಳನ್ನು ಸಂಗ್ರಹಿಸಿ ಸ್ಮಾರ್ಟ್ ಕ್ಲಾಸ್ ಗಳಾಗಿ ಪರಿವರ್ತಿಸಿ ಆಧುನಿಕ ಡಿಜಿಟಲ್ ಶಿಕ್ಷಣ ನೀಡುತ್ತಿದ್ದಾರೆ. ಇವರು ತಮ್ಮ ಕೈಲಾದಷ್ಟು ಮಟ್ಟಿಗೆ ಹಾಗೂ ಇತರ ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಗಳು, ಬ್ಯಾಗುಗಳು ಹಾಗೂ ಇತರೆ ಸ್ಟೇಷನರಿ ವಸ್ತುಗಳನ್ನು ಪ್ರತೀ ವರ್ಷ ನೀಡುತ್ತಿರುವುದು ಇವರು ಸರ್ಕಾರಿ ಶಾಲೆಗಳ ಹಾಗೂ ವಿದ್ಯಾರ್ಥಿಗಳ ಬಗ್ಗೆ ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ.
ಬಡತನದಿಂದ SSLC ನಂತರ ಮುಂದೆ ಓದಲು ಸಾಧ್ಯವಾಗದೆ ಅರ್ಧಕ್ಕೆ ಓದು ನಿಲ್ಲಿಸಿದ ಹಲವು ಬಡ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಪದವಿವರೆಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಜೊತೆಗೆ ಹಲವು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ ತಾವೇ ಸ್ವತಃ ಕೋಚಿಂಗ್ ಕೊಡಿಸಿ ಅವರ ಭವಿಷ್ಯವನ್ನು ಉಜ್ವಲವಾಗಿಸಿದ್ದಾರೆ.
ಸಾಹಿತ್ಯಾಭಿರುಚಿ
ಶಿಕ್ಷಕ ವೃತ್ತಿಯೊಂದಿಗೆ ಬರಹವನ್ನು ಪ್ರವೃತ್ತಿಯಾಗಿ ರೂಢಿಸಿಕೊಂಡಿರುವ ಡಾ. ಹೇಮಂತ ಕುಮಾರ್. ಬಿ. ರವರು ನಮ್ಮ ನಾಡು – ನುಡಿ, ಹಬ್ಬ – ಹರಿದಿನಗಳ ಆಚರಣೆಗಳನ್ನು ಕುರಿತಂತೆ ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರಸಿದ್ಧ ವ್ಯಕ್ತಿಗಳ ಕುರಿತಂತೆ ಹಲವಾರು ಲೇಖನಗಳನ್ನು ಬರೆದಿದ್ದು ಕರ್ನಾಟಕದ ಹಲವು ಪತ್ರಿಕೆಗಳಲ್ಲಿ ಅಷ್ಟೇ ಅಲ್ಲದೆ ವಿದೇಶಿ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟಗೊಳ್ಳುತ್ತಿವೆ. ಇವರು ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಪ್ರತೀ ದಿನ ನೀತಿಕಥೆಗಳನ್ನು ವಾಟ್ಸಪ್ ಹಾಗೂ ಫೇಸ್ ಬುಕ್ ಗ್ರೂಪುಗಳಲ್ಲಿ ಹಂಚಿಕೊಳ್ಳುತ್ತಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅನುಕೂಲವಾಗುತ್ತಿವೆ. ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಾ ಕನ್ನಡ ನಾಡು – ನುಡಿ – ಸಂಸ್ಕೃತಿ ಹಾಗೂ ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರ ಹಲವಾರು ಪ್ರಬಂಧಗಳು, ಲೇಖನಗಳು, ಚಿಂತನಗಳು ಹೇಮಂತ್ ಚಿನ್ನು ಎಂಬ ಹೆಸರಿನಿಂದ ಪ್ರತಿನಿತ್ಯ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿವೆ. ಇದರೊಂದಿಗೆ ಪ್ರಸ್ತುತ ಇವರು ಬೇಲೂರು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವುದು ಇವರ ಶಿಕ್ಷಣ ಹಾಗೂ ಸಾಹಿತ್ಯ ಪ್ರೀತಿಯ ಕೈಗನ್ನಡಿಯಾಗಿದೆ.
ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದ ಇವರ ಸೇವೆಯನ್ನು ಗುರುತಿಸಿ ಇವರಿಗೆ “ರಾಜ್ಯ ಶಿಕ್ಷಕ ಮಿತ್ರ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ, ರಾಜ್ಯ ವಿದ್ಯಾರತ್ನ ಪ್ರಶಸ್ತಿ, ಪುನೀತ ಪ್ರಶಸ್ತಿ, ಸ್ವರ್ಣ ಕನ್ನಡಿಗ ಪ್ರಶಸ್ತಿ, ಕರುನಾಡು ರತ್ನ ಪ್ರಶಸ್ತಿ, ಚಾಲುಕ್ಯರತ್ನ ಇಮ್ಮಡಿ ಪುಲಕೇಶಿ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಸೇರಿದಂತೆ ಹತ್ತಾರು ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಅಷ್ಟೇ ಅಲ್ಲದೆ ಇವರಿಗೆ “ಭಾರತ ಸೇವಾರತ್ನ, ಡಾ. ಎಸ್. ರಾಧಾಕೃಷ್ಣನ್ ಆದರ್ಶ ಶಿಕ್ಷಕರತ್ನ, Indian Global Icon Award, Indian Icon Award, National Achievers Award, Rashtriya Pratishta Puraskar, Bharat Seva Puraskar, ಕದಂಬರತ್ನ ಮಯೂರವರ್ಮ ರಾಷ್ಟ್ರಪ್ರಶಸ್ತಿ, ಮಹಾತ್ಮ ಗಾಂಧಿ ಸದ್ಭಾವನಾ ರಾಷ್ಟ್ರಪ್ರಶಸ್ತಿ” ಸೇರಿದಂತೆ ಹತ್ತಾರು ರಾಷ್ಟ್ರ ಪ್ರಶಸ್ತಿಗಳು ಇವರಿಗೆ ಸಂದಿವೆ.
ಪ್ರತಿನಿತ್ಯ ಪ್ರಸಾರವಾಗುವ ಇವರ ನೀತಿಕಥೆಗಳನ್ನು ಮೆಚ್ಚಿ ಇವರಿಗೆ “ಪಂಚತಂತ್ರ ದುರ್ಗಸಿಂಹ” ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, “ಶ್ರೀ ಗುರುಕುಲ ತಿಲಕ” ಹಾಗೂ “International Pride Award 2023” ಎಂಬ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಹ ಇವರ ಮುಡಿಗೇರಿವೆ.
ಇವರ ನೀತಿಕಥೆಗಳು, ಬರಹಗಳು ಹಾಗೂ ಇವರ ಸೇವೆ ಭಾರತದ ಹೆಮ್ಮೆಯ Bharat Proud Book Of Record ನಲ್ಲಿ ದಾಖಲಾಗುವ ಮೂಲಕ ಹೊಸ ಅಧ್ಯಾಯವನ್ನು ಬರೆದಿದ್ದು IPBR ಅವರ ವತಿಯಿಂದ
“Bharat Proud Award 2023,
Bharat Gowrav Samman 2023,
Best Educationist Award 2023″ ಪ್ರಶಸ್ತಿಗಳು ಇವರ ಸೇವೆಗೆ ಇನ್ನಷ್ಟು ಗೌರವ ತಂದುಕೊಟ್ಟಿವೆ.
ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಬಾಲ್ಯದಿಂದಲೇ ಉತ್ತಮ ನಡೆ – ನುಡಿ, ಸಂಸ್ಕೃತಿ – ಸಂಪ್ರದಾಯಗಳನ್ನು ಸ್ವತಃ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಶಿಕ್ಷಕರಾಗಿ, ಶಿಕ್ಷಣ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ತಮ್ಮ ತಂದೆ – ತಾಯಿಗಳಿಂದ ಕಲಿತು ರೂಢಿಸಿಕೊಂಡು ಬಂದಿರುವ ಹೇಮಂತ್ ಚಿನ್ನು ರವರು *ಸರ್ಕಾರಿ ಕೆಲಸ ದೇವರ ಕೆಲಸ* ಎಂದು ನಂಬಿ “ಕರ್ತವ್ಯವೇ ದೇವರು” ಎಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹೇಮಂತ ಕುಮಾರ್. ಬಿ. ರವರ ಅತ್ಯುತ್ತಮ ಸೇವೆಯನ್ನು ಗುರುತಿಸಿದ ಅಮೆರಿಕದ ಖ್ಯಾತ ಕೇಂಬ್ರಿಡ್ಜ್ ಡಿಜಿಟಲ್ ಯೂನಿವರ್ಸಿಟಿಯು ಇವರಿಗೆ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಶ್ರೀ ದಿಗಂಬರ ಕಾಮತ್ ಹಾಗೂ ಭಾರತೀಯ ಸೈನ್ಯದ ಅಗ್ನಿವೀರ್ ಮುಖ್ಯಸ್ಥರಾದ ಬ್ರಿಗೇಡಿಯರ್ ಶ್ರೀ ರಾಜೀವ್ ಚೌಹಾಣ್ ರವರ ನೇತೃತ್ವದಲ್ಲಿ *ಗೌರವ ಡಾಕ್ಟರೇಟ್ 2023* ಪದವಿಯನ್ನು ನೀಡಿ ಪುರಸ್ಕರಿಸಿದೆ. ಹಾಗೂ ಶಿಕ್ಷಣ ಇಲಾಖೆಯು ಇವರ ಸೇವೆ ಹಾಗೂ ಪುರಸ್ಕಾರಗಳನ್ನು ಮನತುಂಬಿ ಹರಸಿ ಹಾರೈಸಿ ಅಭಿನಂದಿಸಿ ಪ್ರೋತ್ಸಾಹಿಸುತ್ತಿದೆ.
ಇವರ ಈ ಸೇವೆಗೆ ಮತ್ತೊಂದು ಗರಿಯಿಟ್ಟಂತೆ ಇವರಿಗೆ ಗಣರಾಜ್ಯೋತ್ಸವ 2024 ಪ್ರಯುಕ್ತ “ರಾಷ್ಟ್ರೀಯ ಶಿಕ್ಷಣ ರತ್ನ” ಎಂಬ ಮತ್ತೊಂದು ರಾಷ್ಟ್ರಪ್ರಶಸ್ತಿಯು ಅರಸಿ ಬಂದಿದ್ದು ಸದ್ಯದಲ್ಲೇ ಸ್ವೀಕರಿಸಲಿದ್ದಾರೆ. ಇವರ ಕನ್ನಡ ಹಾಗೂ ಇಂಗ್ಲೀಷ್ ಬರವಣಿಗೆಗಳು ಪುಸ್ತಕಗಳ ರೂಪದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಹೊರಬರಲಿವೆ.
ಇಂತಹ ಮಹಾನ್ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯ ಸೇವೆ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹಲವು ವರ್ಷಗಳ ಕಾಲ ಲಭಿಸಲಿ ಎಂಬುದಾಗಿ 2024 ರ ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಮನಸಾರೆ ಆಶಿಸೋಣ.