Homeಲೇಖನನಾಡೋಜ 'ಡಾ. ಕಯ್ಯಾರ ಕಿಞ್ಞಣ್ಣ ರೈ' ಸನ್ನಿಧಿಯಲ್ಲಿ ಕೆಲ ರಸ ನಿಮಿಷಗಳು

ನಾಡೋಜ ‘ಡಾ. ಕಯ್ಯಾರ ಕಿಞ್ಞಣ್ಣ ರೈ’ ಸನ್ನಿಧಿಯಲ್ಲಿ ಕೆಲ ರಸ ನಿಮಿಷಗಳು

ನಾನು ಮತ್ತು ನನ್ನ ಗೆಳೆಯ ಬಾಳೇಶ ಸಸಾಲಟ್ಟಿ ಕೇರಳದ ಪ್ರವಾಸದಲ್ಲಿದ್ಧಾಗ ದಿನಾಂಕ 14-11-2014 ರಂದು ಬದಿಯಡ್ಕ ಗ್ರಾಮದ ಸಮೀಪವಿರುವ ‘ರೈ’ ಅವರ ತೋಟದ ಮನೆಗೆ ಹೋಗಿದ್ದೆವು. ಆಗ ಇನ್ಪೂ ಬೆಳಗಿನ ಸಮಯವಾಗಿತ್ತು.’ಆಪ್ಪ ಇನ್ನೂ ಮಲಗಿದ್ದಾರೆ ಕುಳಿತುಕೊಳ್ಳಿ’. ಎಂದು ಅವರ ಮಗ ಹೇಳಿದರು.

ನಮ್ಮ ಮಾತು ಕೇಳಿಸಿಕೊಳ್ಳುತ್ತಲೇ ಅವರು ಎದ್ದು ಕುಳಿತರು. ಆಗ ಅವರು ತಮ್ಮ ಜೀವನದ ನೂರನೇ ವಯಸ್ಸಿಗೆ ಕಾಲಿಟ್ಟಿದ್ದರು. ಮುಖ ಮಾರ್ಜನದ ನಂತರ ಅವರನ್ನು ಕರೆದುಕೊಂಡು ಬಂದು ಪಡಸಾಲೆಯ ಆರಾಮಾಸನದ ಮೇಲೆ ಕುಳ್ಳಿರಿಸಿದರು. ನಾವು ಅವರ ಪಾದಕ್ಕೆ ನಮಸ್ಕರಿಸಿ ನಮ್ಮನ್ನು ಪರಿಚಯಿಸಿ ತಮ್ಮನ್ನು ಕಂಡು ಆಶೀರ್ವಾದ ಪಡೆಯಲು ಬೆಳಗಾವಿಯಿಂದ ಬಂದಿದ್ದೇವೆ ಎಂದು ಹೇಳಿದೆವು.

ಬೆಳಗಾವಿಯವರು ಎಂದ ತಕ್ಷಣ ಅವರು ತುಂಬ ಸಂತಸ ಪಟ್ಟರು. ಇಸ್ವಿ 2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಅತ್ಯಂತ ಆತ್ಮೀಯವಾಗಿ ಸತ್ಕರಿಸಿದ ಹೃದಯಸ್ಪರ್ಷಿ ಪ್ರಸಂಗವನ್ನು ನೆನಪಿಸಿಕೊಂಡರು. ನಾನು ಬರೆದ ಎರಡು ಮಕ್ಕಳ ಕವನ ಸಂಕಲನ ಕೃತಿಗಳನ್ನು ಅವರ ಕೈಗಿತ್ತೆನು. ಅವರು ಅವುಗಳನ್ನು ತಮ್ಮ ಕಣ್ಣಿಗೆ ಒತ್ತಿಕೊಂಡು ಪ್ರೀತಿಯಿಂದ ಸ್ವೀಕರಿಸಿ ನನ್ನನ್ನು ಆಶೀರ್ವದಿಸಿದರು.

ಕೆಲಹೊತ್ತು ಅವರೊಂದಿಗೆ ನಾಡು ನುಡಿ ಗಡಿ ವಿಷಯ ಚರ್ಚಿಸಿ ಅವರ ಅನುಭವಗಳನ್ನು ತಿಳಿದುಕೊಂಡೆವು. ಅಷ್ಟರಲ್ಲಿ ಅವರ ಚಿಕ್ಕ ಸೊಸೆ ನಮಗೆ ಬಿಸಿ ಬಿಸಿ ಇಡ್ಲಿ ಚಟ್ನಿ ಕೆನೆಮೊಸರು ಸಾಂಬಾರು ತಂದರಿಸಿದರು. ಖುಷಿಯಿಂದ ಇಡ್ಲಿ ತಿಂದು ಕಾಫಿ ಕುಡಿದು ತೃಪ್ತಿ ಪಟ್ಟೆವು. ಅವರ ಆತ್ಮೀಯತೆ ಆದರತೆ ಸರಳತೆ ಕಂಡು ಮೂಕವಿಸ್ಮಿತರಾದೆವು.

“ಇಷ್ಟು ವಯಸ್ಸಾಗಿದ್ಧರೂ ನಮ್ಮ ಮಾವನವರು ಈಗಲೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅವರಿಗೆ ಹೊರಗೆ ಹೋಗಲಿಕ್ಕೆ ಆಗದ
ಕಾರಣ ಸಾಹಿತಿ ಬಳಗದವರು ಪ್ರತಿ ತಿಂಗಳು ನಮ್ಮ ಮನೆಯಲ್ಲೇ ಕಾರ್ಯಕ್ರಮ ನಡೆಸುತ್ತಾರೆ” ಎಂದು ಅವರ ಸೊಸೆ ಹೇಳಿದರು. ಅವರೆಲ್ಲರಿಗೂ ಧನ್ಯವಾದ ಹೇಳಿ ನಾವು ಅಲ್ಲಿಂದ ಹೊರಡಲನುವಾದೆವು. ರೈ ಅವರ ಮಗ ತಮ್ಮ ಕಾರಿನಲ್ಲಿ ನಮ್ಮನ್ನು ಬದಿಯಡ್ಕ ಬಸ್ ಸ್ಟಾಂಡಿನವರೆಗೆ ಬಿಟ್ಟು ಹೋದರು. ಈ ಘಟನೆ ನನ್ನ ಜೀವನದಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ.

ಆರ್. ಎಸ್. ಚಾಪಗಾವಿ
ಬೆಳಗಾವಿ 8317404648

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group