ಸಿಂದಗಿ: ನಾಡಗೀತೆಗೆ ನೂರರ ಸಂಭ್ರಮ. ಹೀಗಾಗಿ ಸಿಂದಗಿ-ಅಲಮೇಲ-ದೇವರಹಿಪ್ಪರಗಿ ಮೂರು ತಾಲ್ಲೂಕುಗಳ ೬೪೦ ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ನಾಡಗೀತೆಯನ್ನು ಸುಶ್ರಾವ್ಯವಾಗಿ, ರಾಗಬದ್ಧವಾಗಿ ಹಾಗೂ ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವ ತರಬೇತಿಯನ್ನು ನೀಡಲು ಯಾವುದೇ ಫಲಾಕ್ಷೇಪವಿಲ್ಲದೆ ಪಟ್ಟಣದ ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಪ್ರಕಾಶ ಮೂಡಲಗಿ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಸಂಸ್ಥೆಯ ಮುಖ್ಯ ಸಂಚಾಲಕಿ ಕಾಂಚನಾ ನಾಗರಬೆಟ್ಟ ಪ್ರಸಂಶೆ ವ್ಯಕ್ತ ಪಡಿಸಿದರು.
ಪಟ್ಟಣದ ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನಾಡಗೀತೆ ಹಾಡುವ ತರಬೇತಿಗೆ ಚಾಲನೆ ನೀಡಿ ಮಾತನಾಡಿ, ರಾಗ ರಂಜಿನಿ ಸಂಗೀತ ಅಕಾಡೆಮಿ ಸಂಚಾಲಕರು ಹಂಸಲೇಖ ಅವರ ವಿಧ್ಯಾರ್ಥಿಯಾಗಿರುವ ಹಿನ್ನೆಲೆಯಲ್ಲಿ ಅವರ ಹಾದಿಯಲ್ಲಿ ಶಾಲೆ-ಶಾಲೆಗೆ ತೆರಳಿ ವಿದ್ಯಾರ್ಥಿಗಳಲ್ಲಿ ನಾಡಪ್ರೇಮ ಬಿಂಬಿಸುವ ನಾಡಗೀತೆಯನ್ನು ಹೇಗೆ ಹಾಡಬೇಕು ಎಂಬ ತರಬೇತಿ ನೀಡುವ ಕಾರ್ಯಕ್ಕೆ ಡಾ. ಪ್ರಕಾಶ ಮೂಡಲಗಿ ಅವರು ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಅನುಮತಿ ಪಡೆದುಕೊಂಡು ತಮ್ಮ ಸ್ವಂತ ಖರ್ಚಿನಿಂದ ದಿನಕ್ಕೆ ೨-೩ ಶಾಲೆಗಳಿಗೆ ಹೋಗಿ ನಾಡಗೀತೆಯ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ೧೫ ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇದಕ್ಕೆ ಶಾಲಾ ಸಿಬ್ಬಂದಿಯಿಂದ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಎಂದರು.
ಪಟ್ಟಣದ ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಹಾಗೂ ಹಂಸಲೇಖ ಅವರ ವಿದ್ಯಾರ್ಥಿಯಾಗಿರುವ ಪ್ರಕಾಶ ಮೂಡಲಗಿ ಮಾತನಾಡಿ, ನಾನು ವಿದ್ಯಾರ್ಥಿಗಳಲ್ಲಿ ನಾಡಗೀತೆ ಬಗ್ಗೆ ಅಭಿಮಾನ ಮೂಡಿಸುವ ಜೊತೆಗೆ ನಾಡಗೀತೆಯನ್ನು ರಾಗಬದ್ಧವಾಗಿ ಹಾಡಿಸುವ ಉದ್ದೇಶ ನನ್ನದಾಗಿದೆ. ಇದನ್ನು ನಾನು ಸ್ವಯಂಪ್ರೇರಣೆಯಿಂದ ಸೇವಾ ಕಾರ್ಯ ಎಂದು ಮಾಡುತ್ತಿರುವೆ. ವಿದ್ಯಾರ್ಥಿಗಳು ನಾಡಗೀತೆಯನ್ನು ಶಿಸ್ತುಬದ್ಧವಾಗಿ ಹಾಡುವದನ್ನು ಕಲಿತರೆ ನನ್ನ ಶ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರಾಜು ಕಾಂಬಳೆ, ಕಾವ್ಯ ನಾಗರಬೆಟ್ಟ, ಸುಮಾ ವಸ್ತçದ, ಪ್ರಶಾಂತ ಬಂಕಲಗಿ, ಭಾಗ್ಯಶ್ರೀ ಪತ್ತಾರ, ಕಾವ್ಯ ಹಿರೇಮಠ, ಉಮಾ ಕೂಚಬಾಳ, ಹೀನಾ ಮುಲ್ಲಾ, ಶರಣಮ್ಮ ಬಿರಾದಾರ ನಿಷಾ ಮುಲ್ಲಾ ಸೇರಿದಂತೆ ಅನೇಕರಿದ್ದರು.

