ಎಮ್ಈಎಸ್ ಎಂಬುದು ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲ ಮುಟ್ಠಾಳ ಸಮಿತಿ ಎಂದು ಶುಭೋದಯ ಸ್ವಾಭಿಮಾನಿ ಕರ್ನಾಟಕ ಸಂಘದ ಅಧ್ಯಕ್ಷ ಸುಭಾಸ ಕಡಾಡಿ ಹೇಳಿದ್ದಾರೆ.
ಎಮ್ಈಎಸ್ ಪುಂಡರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ, ಬಸವಣ್ಣನವರ ಪ್ರತಿಮೆಗೆ ಅವಮಾನ ಹಾಗೂ ಕನ್ನಡ ಧ್ವಜ ಭಸ್ಮ ಮಾಡಿರುವ ಮೂರ್ಖತನದ ವಿರುದ್ಧ ಪ್ರತಿಕ್ರಿಯೆ ನೀಡಿರುವ ಅವರು, ಗಡಿ ವಿವಾದ ನ್ಯಾಯಾಲಯದಲ್ಲಿ ಇದ್ದು ಅದನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಅದನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುವ ಮುಟ್ಠಾಳತನವನ್ನು ಈ ಪುಂಡರು ಮಾಡಿದ್ದಾರೆ ಇವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದರು.
ಜಿಲ್ಲೆಯ ನಾಯಕರ ಮೌನ
ಮರಾಠಿ ಪುಂಡರು ಇಷ್ಟೆಲ್ಲ ದಾಂಧಲೆ ಮಾಡಿದ್ದರೂ ಜಿಲ್ಲೆಯ ರಾಜಕೀಯ ನಾಯಕರು ಯಾವುದೇ ಪ್ರತಿಭಟನಾರ್ಥ ಮಾತುಗಳನ್ನಾಡದೇ ಇರುವುದು ಅಚ್ಚರಿ ತಂದಿದೆ ಎಂದ ಅವರು, ಇವರಿಗೆ ರಾಜ್ಯದ ಪ್ರೇಮ, ಭಾಷಾ ಪ್ರೇಮಕ್ಕಿಂತಲೂ ತಮ್ಮ ಓಟ್ ಬ್ಯಾಂಕ್ ಕೈಬಿಡುವ ಚಿಂತೆ ಹೆಚ್ಚಾಗಿದೆ. ಇಂಥವರನ್ನು ಜಿಲ್ಲೆಯ ಸ್ವಾಭಿಮಾನಿ ಕನ್ನಡಿಗರು ಧಿಕ್ಕರಿಸಬೇಕು ಎಂದು ಕರೆ ನೀಡಿದರು.
ಸರ್ಕಾರಕ್ಕಿಂತ ದೊಡ್ಡವರಾ ಎಮ್ಈಎಸ್ ನವರು?
ಈ ಎಮ್ಈಎಸ್ ನವರು ಸರ್ಕಾರಕ್ಕಿಂತ ದೊಡ್ಡವರಾ ? ಇಷ್ಟೆಲ್ಲ ಪುಂಡಾಟಿಕೆ ಮಾಡಿದ್ದರೂ ಅವರ ವಿರುದ್ಧ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಜಿಲ್ಲೆಯ ನಾಯಕರು ಯಾಕೆ ಬಾಯಿ ಮುಚ್ವಿಕೊಂಡಿದ್ದಾರೆ ಎಂದು ಸುಭಾಸ ಕಡಾಡಿ ಪ್ರಶ್ನೆ ಮಾಡಿದರು.
ಮಹಾನಗರಪಾಲಿಕೆ ಚುನಾವಣೆಯಲ್ಲಿ ಎಮ್ಈಎಸ್ ನವರನ್ನು ಕಸಕ್ಕಿಂತ ಕಡೆ ಮಾಡಿ ಬಿಸಾಕಿದ್ದರೂ ಅವರಿಗೆ ಬುದ್ಧಿ ಬಂದಿಲ್ಲ. ಕನ್ನಡಿಗರು ಶಾಂತಿ ಪ್ರಿಯರು.ಮರಾಠಿಗರು ಬೆಳಗಾವಿಯಲ್ಲಿ ಸೌಹಾರ್ದದಿಂದ ಇದ್ದಾರೆ. ಅದನ್ನು ಕೆಡಿಸಲು ಶಿವಸೇನೆ ಮತ್ತು ಮುಟ್ಠಾಳ ಏಕೀಕರಣ ಸಮಿತಿ ಪ್ರಯತ್ನ ಮಾಡುತ್ತಿವೆ. ಇದು ನಿಲ್ಲಬೇಕಾದರೆ ರಾಜ್ಯದಲ್ಲಿ ಈ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಕಡಾಡಿ ಹೇಳಿದರು.