ಮೂಡಲಗಿ:-ಇಂದಿನ ವಿದ್ಯಾರ್ಥಿಗಳ ಜೀವನಕ್ಕೆ ಗುರುವಿನ ಪ್ರೇರಣೆ ಅಗತ್ಯವಾಗಿದ್ದು ನಮ್ಮ ಹಿಂದೂ ಸಂಪ್ರದಾಯದ ಪಂಚಾಂಗದಲ್ಲಿ ಆಷಾಢ ಮಾಸದ ಹುಣ್ಣಿಮೆಯ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ ಎಂದು ಆರ್ ಡಿ ಎಸ್ ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಪೂಜಾ ಪಾರ್ಶಿ ಹೇಳಿದರು
ಪಟ್ಟಣದ ಆರ್ ಡಿ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರು ಪೂರ್ಣಿಮಾ ನಿಮಿತ್ತ ಗುರು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೌತಮ ಬುದ್ಧ ತನ್ನ ಪ್ರಥಮ ಉಪದೇಶವನ್ನು
ಸಾರಾನಾಥದ ಜಿಂಕೆ ಉದ್ಯಾನವನದಲ್ಲಿ ತನ್ನ ಐದು ಜನ ಶಿಷ್ಯರಿಗೆ ಉಪದೇಶ ನೀಡಿದ ಈ ದಿನ ಗುರುಪೂರ್ಣಿಮೆಯಾಗಿದೆ. ಯೋಗ ಸಂಪ್ರದಾಯದಲ್ಲಿ ಶಿವನು ಋಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಎರೆದು ಜಗತ್ತಿನ ಶಿಕ್ಷಣದಲ್ಲಿ ಪ್ರಥಮ ಗುರು ಆಗಿರುತ್ತಾನೆ. ಅಂತಹ ಗುರುಗಳ ಮಾರ್ಗದರ್ಶನ ವಿದ್ಯಾರ್ಥಿಗಳ ಜೀವನಕ್ಕೆ ಅತ್ಯಗತ್ಯವಾಗಿದ್ದು ನಿಜವಾದ ಶಿಷ್ಯ ಗುರುವಿನ
ಪೇರಣೆಯಿಂದ ಸಾಧಕನಾಗಿ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಿದೆ ಎಂದರು.
ಆರ್ಡಿಎಸ್ ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆಯಲ್ಲಿ ಗುರುಪೂರ್ಣಿಮೆಯ ನಿಮಿತ್ತವಾಗಿ ಮಕ್ಕಳಿಗೆ ಗುರುಕುಲ ರೂಪಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಶಾಲೆಯ ಮುಖ್ಯೋಪಾಧ್ಯಾಯರಾದ ಸಂಗಮೇಶ ಹಳ್ಳೂರ ಮಾತನಾಡಿ, ಗುರುಭಕ್ತಿ ಇಂದಿನ ದಿನಗಳಲ್ಲಿ ಕಡಿಮೆಯಾಗಿ ನೈತಿಕ ಮೌಲ್ಯಗಳು ಇಂದಿನ ಮಕ್ಕಳಲ್ಲಿ ಕುಸಿಯುತ್ತಿದೆ. ಭಾರತಿಯ ಸಂಪ್ರದಾಯದಲ್ಲಿ
ಗುರುವಿನ ಪಾತ್ರದ ಮಹತ್ವ ತಿಳಿಸುವ ಗುರುಪೂರ್ಣಿಮೆ ದಿನದ ಪರಿಚಯ ಇಂದಿನ ಮಕ್ಕಳಿಗೆ ಮಾಡಿಕೊಟ್ಟು ಸಂಸ್ಕಾರವಂತ ವ್ಯಕ್ತಿಗಳಾಗಿ ನಿರ್ಮಿಸುವಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು
ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ
ಸಂತೋಷ ಪಾರ್ಶಿ ವಹಿಸಿಕೊಂಡು ಮಾತನಾಡಿ, ಪುಸ್ತಕದ ಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ ಸಂಪ್ರದಾಯ ಹಾಗೂ ಪ್ರಾಚೀನತೆಯ ಪರಿಕಲ್ಪನೆ ನೀಡುವ ಹಾಗೂ ಜ್ಞಾನದ ವಿಕಾಸದ ಜೊತೆಗೆ ಭಾರತೀಯ ಸಿದ್ದಾಂತಗಳ
ಪರಿಚಯವನ್ನು ಮಕ್ಕಳಲ್ಲಿ ಸೃಷ್ಟಿಸಿ ಅವರಲ್ಲಿ ಬೆಳೆಸುವುದು ಅವಶ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾದರು ಮತ್ತು ಸಂಸ್ಥೆಯ ಅಧ್ಯಕ್ಷರಿಂದ ಆರತಿ ಬೆಳಗಿ ಪುಷ್ಪಗಳನ್ನು ಹಾಕಿ ಎಲ್ಲ ಗುರುಗಳನ್ನು ಗೌರವಿಸಲಾಯಿತು.
ಶಿಕ್ಷಕಿ ಅಶ್ವಿನಿ ಮೆಳ್ಳಿಕೇರಿ ಕಾರ್ಯಕ್ರಮವನ್ನು ನಿರೂಪಿಸಿದರು ಶಿಕ್ಷಕ ಯಾಕೂಬ ಹಾದಿಮನಿ ಶಿಕ್ಷಕಿ ಲತಾ ಅಂಬವ್ವಗೋಳ ವಂದಿಸಿದರು .