Homeಸುದ್ದಿಗಳುತುಂಗಾನದಿಯ ತೂಗು ಸೇತುವೆ ಭವಿಷ್ಯ ತೂಗುಯ್ಯಾಲೆಯಲ್ಲಿ

ತುಂಗಾನದಿಯ ತೂಗು ಸೇತುವೆ ಭವಿಷ್ಯ ತೂಗುಯ್ಯಾಲೆಯಲ್ಲಿ

ಸೇತುವೆ ನಿರ್ವಹಣೆ ಇಲ್ಲದೆ ಅಪಾಯದಲ್ಲಿದೆ

ತೀರ್ಥಹಳ್ಳಿ: ತಾಲೂಕಿನ ಭೀಮನಕಟ್ಟೆ ಬಳಿ ತುಂಗಾನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಭವಿಷ್ಯ ತೂಗುಯ್ಯಾಲೆಯಲ್ಲಿ ರುವಂತೆ ಕಾಣುತ್ತಿದೆ. ಮುಳುಬಾಗಿಲು, ಹೆಗ್ಗೋಡು ಗ್ರಾ.ಪಂ.ವ್ಯಾಪ್ತಿಗೆ ಹತ್ತಿರದಲ್ಲಿರುವ ತೂಗುಸೇತುವೆ ಸರಿಯಾದ ನಿರ್ವಹಣೆ ಇಲ್ಲದೆ ಒಂದೆಡೆ ತುಕ್ಕು ಹಿಡಿಯುತ್ತಿದೆ ವಿಚಿತ್ರವೆಂದರೆ ತೂಗು ಸೇತುವೆ ಮೇಲೆ ದ್ವಿಚಕ್ರ ವಾಹನ ಸಂಚಾರ ಮಾಡುವಂತೆ ಇಲ್ಲ ಆದರೆ ಅಲ್ಲಿನ ಸ್ಥಳೀಯರು ಹಾಗೂ ಹೊರಗಿನ ಪ್ರದೇಶದಿಂದ ಬರುವ ಅನೇಕ ಆಟೋ ಚಾಲಕರು ಸೇತುವೆ ಮೇಲೆ ಸವಾರಿ ನಡೆಸುತ್ತಾರೆ. ಈ ತಾರತಮ್ಯ ಏಕೆ ಎಂಬುದು ಅರ್ಥವಾಗುತ್ತಿಲ್ಲ.

ಹೆಸರು ಹೇಳಲು ಇಚ್ಛಿಸಿದ ಸ್ಥಳೀಯ ವಿದ್ಯಾರ್ಥಿನಿ ಹಾಗು ಅವರ ತಾಯಿ ಭಾನುವಾರ ಮುಸ್ಸಂಜೆ ತೂಗು ಸೇತುವೆ ಬಳಿ ಸಮಯ ಕಳೆಯಲು ಬಂದಿದ್ದ ಅವರು ಹಲವು ಬಾರಿ ಸೇತುವೆ ಮೇಲೆ ದ್ವಿಚಕ್ರ ವಾಹನ ಸವಾರರು ಹಾಗು ಆಟೋ ಚಾಲಕರು ಸೇತುವೆ ಮೇಲೆ ಸವಾರಿ ಮಾಡುವುದನ್ನು ನೋಡಿರುವುದಾಗಿ ತಿಳಿಸುತ್ತಾರೆ. ಅಂದು ಫೆಬ್ರವರಿ ೧೩ ರ ರವಿವಾರದ ಮುಸ್ಸಂಜೆ ರವಿ ಆಗಸದಿಂದ ಜಾರುತ್ತ ಇದ್ದರೆ ಇತ್ತ ಸೇತುವೆ ಮೇಲೆ ದ್ವಿಚಕ್ರ ವಾಹನ ಸವಾರ ಮೂರು ಸೀಟು ಹಾಕಿಕೊಂಡು ಸೇತುವೆ ಮೇಲೆ ಸವಾರಿ ಸಾಗಿತ್ತು. ಅದನ್ನು ನೋಡಿದ ಕೂಡಲೇ ನನ್ನ ಮೊಬೈಲ್ ಆ ಚಿತ್ರವನ್ನು ಸೆರೆಹಿಡಿದಾಗ ಅದನ್ನು ಕಂಡ ಆ ಯುವಕ ನಗುತ್ತಲೇ ನನ್ನ ಚಿತ್ರ ಏಕೆ ಸೆರೆಹಿಡಿದಿರ್ರಿ ಎಂದು ನನ್ನ ಬಳಿ ಪ್ರಶ್ನೆ ಕೇಳಿದ್ದ ಆಗ ನಾನು ಅವನ ಬಳಿ ಈ ಸೇತುವೆ ಮೇಲೆ ಸವಾರಿ ಮಾಡಬಹುದೇ ಎಂದು ಪ್ರಶ್ನೆ ಕೇಳಿದ್ದೆ ಅದಕ್ಕೆ ಅವನ ಉತ್ತರಿಸದೇ ವಾಹನ ಚಾಲನೆ ಮಾಡಿದ್ದ. ಹಿಂದೆ ಕೂತಿದ್ದ ಆ ತಾಯಿಗೆ ಏನು ಭಯವಿಲ್ಲದೆ ಮಂದಹಾಸ ಬೀರುತ್ತಾ ಇದ್ದರೆ – ಅವರು ಯಾರು ಶಿರಸ್ತ್ರಾಣ ಧರಿಸದೆ ಕೋವಿಡ್ ನಿಯಮ ಪಾಲಿಸದೆ ಅಂದರೆ ಮಾಸ್ಕ್ ಧರಿಸದೆ ಸಾಗುತ್ತ ಇದ್ದರು – ಆದರೆ ನನ್ನ ಮನದಲ್ಲಿ ದುಗುಡ ಹಾಗು ಅವರಿಗೆ ಸೇತುವೆ ಮೇಲೆ ಸಾಗುವಾಗ ಏನಾದರು ಅಪಾಯ ವಾದರೆ ಎಂಬ ಆತಂಕ ಕವಿದಿತ್ತು. ಕಾರಣ ಸೇತುವೆ ನಿರ್ವಹಣೆ ಇಲ್ಲದೆ ಅಪಾಯದಲ್ಲಿದೆ , ಅಲಲ್ಲಿ ತುಕ್ಕು ಹಿಡಿದಿದೆ ಉದ್ದಕ್ಕೂ ಎರಡೂ ಬದಿಗೆ ಸುರಕ್ಷತೆಗಾಗಿ ನಿರ್ಮಿಸಿದ ತಂತಿ ಬೇಲಿ ತುಂಡು ತುಂಡು ಆಗಿರುವುದು ಕಂಡು ಬಂತು ಹಾಗು ಸೇತುವೆ ಆರಂಭದಲ್ಲಿ ಮೊದಲ ಹೆಜ್ಜೆ ಇಡುವ ಜಾಗವೇ ಬಿರುಕು ಬಿಟ್ಟಿದೆ ಇದರ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ಇದಕ್ಕೆಲ್ಲ ಕಾರಣ ಯಾರು , ಒಂದು ಉತ್ತಮ ಸೇತುವೆ – ಸಂಪರ್ಕ ಕಲ್ಪಿಸುವ ಜೋಡಣೆ ಮಾಡಿರುವ ವ್ಯವಸ್ಥೆ ಹಾಳು ಮಾಡುತ್ತಿರುವ ನಾಗರಿಕರಾ ಅಥವಾ ನಾಗರಿಕರಿಗಾಗಿ ಸೇತುವೆ ನಿರ್ಮಿಸಿ ಸರಿಯಾಗಿ ನಿರ್ವಹಣೆ ಮಾಡದ ಆಡಳಿತ ವ್ಯವಸ್ಥೆಯೋ ?

25 ವರ್ಷ ಆಯಸ್ಸಿನ ಸೇತುವೆ ೧೫ ವರ್ಷಕ್ಕೆ ಅಧೋಗತಿಯತ್ತ !!

2007ರಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ತೂಗು ಸೇತುವೆಗೆ 25 ವರ್ಷ ಆಯಸ್ಸಿದೆ ಎಂದು ಸರಕಾರಿ ದಾಖಲೆಯಲ್ಲಿ ಉಲ್ಲೇಖಿಸ ಲಾಗಿದೆ. ಆದರೆ ೧೫ ವರ್ಷ ಕಳೆಯುವುದರ ಒಳಗೆ ತೂಗು ಸೇತುವೆ ಸ್ಥಿತಿ ಗಂಭೀರವಾಗಿದೆ. ಜಿ.ಪಂ, ತಾ.ಪಂ.ಆಡಳಿತ ಈ ಕುರಿತು ಎಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ.

ಆರಗ ಜ್ಞಾನೇಂದ್ರ ಶಿಫಾರಸಿನ ಮೇರೆಗೆ 2007ರಲ್ಲಿ ತೂಗು ಸೇತುವೆ ನಿರ್ಮಾಣ:

ಎಂ ಎ ಡಿ ಬಿ ಅನುದಾನ:

ಆಲಗೇರಿ, ಸೌಳಿ, ಬಾಳೇಕೊಡ್ಲು, ಗೊರಕೋಡು, ಹೊಳೆ ಮದ್ಲು, ಬಿಕ್ಕೋಳಿ, ಬೋಗಾರುಕೊಪ್ಪ ಸೇರಿದಂತೆ ಅನೇಕ ಹಳ್ಳಿಗಳ ಸಾರ್ವಜನಿಕರು ಭೀಮನ ಕಟ್ಟೆ ಬಳಿ ಸೇತುವೆ ನಿರ್ಮಿಸಬೇಕೆಂದು ಸುಮಾರು 30 ವರ್ಷಗಳಿಂದಲೂ ಬೇಡಿಕೆ ಮಂಡಿಸುತ್ತಲೇ ಬಂದಿದ್ದರು. 1983ರಲ್ಲಿ ಡಿ.ಬಿ. ಚಂದ್ರೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ಧಪಡಿಸಲಾಗಿತ್ತು. ಆಡಳಿತಾತ್ಮಕ ಗೊಂದಲ ದೆಸೆಯಿಂದಾಗಿ ಸೇತುವೆ ನಿರ್ಮಾಣದ ಪ್ರಸ್ತಾಪ ಅಲ್ಲಿಗೆ ಮೊಟುಕು ಗೊಂಡಿತು.

ನಂತರದ ದಿನಗಳಲ್ಲಿ ಸೇತುವೆ ವಿಚಾರ ಪ್ರತಿ ವಿಧಾನಸಭಾ ಚುನಾವಣೆ ಯಲ್ಲೂ ರಾಜಕೀಯ ವಿಚಾರವಾಗಿ ಹೊರಹೊಮ್ಮುತ್ತಿತು. ಆದರೂ ಸೇತುವೆ ಬೇಡಿಕೆ ಈಡೇರಲಿಲ್ಲ. ಸದ್ಯ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಶಾಸಕರಾಗಿದ್ದ ಅವಧಿಯಲ್ಲಿ ಸೇತುವೆ ಬೇಡಿಕೆಗೆ ಮತ್ತೆ ಜೀವ ಬಂತು. ಆರಗ ಶಿಫಾರಸಿನ ಮೇರೆಗೆ 2007ರಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದ ಪದ್ಮನಾಭ ಭಟ್ ಕೊನೆಗೂ ತೂಗು ಸೇತುವೆ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದರು. ಸೇತುವೆ ನಿರ್ಮಾಣವಾಯಿತು ಆದರೆ ನಿರ್ವಹಣೆ ಸೂಕ್ತ ಇಲ್ಲದೆ ಸೇತುವೆ ಈಗ ಅಪಾಯದಲ್ಲಿದೆ.

ವಾಹನ ಓಡಾಟ:

ತೂಗುಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿಷೇಧವಿದ್ದರೂ ದ್ವಿಚಕ್ರ ವಾಹನಗಳು ಪುರುಸೊತ್ತಿಲ್ಲದೆ ಸಂಚರಿಸುತ್ತಿವೆ. ತೂಗುಸೇತುವೆಗೆ ಬಣ್ಣ, ಸವಕಳಿ ತಡೆಯಲು ಎಣ್ಣೆ ಮುಂತಾದ ಸಣ್ಣಪುಟ್ಟ ಕೆಲಸ ಮಾಡಿಸಲು ಗ್ರಾ.ಪಂ. ಆಡಳಿತ ಮಂಡಳಿ ಲೆಕ್ಕಾಚಾರ (ಹೆಗ್ಗೋಡು, ಮುಳುಬಾಗಿಲು ಗ್ರಾ.ಪಂ. ) ಮಾಡಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಸೇತುವೆ ಅಪಾಯದಲ್ಲಿದೆ.

ತುಂಗಾ, ಮಾಲತಿ ನದಿ ಸಂಗಮ:

ತುಂಗಾ, ಮಾಲತಿ ನದಿ ಸಂಧಿಸುವ ಭೀಮನಕಟ್ಟೆ ಪೌರಾಣಿಕ ಸ್ಥಳವಾಗಿ ಗುರುತಿಸಿಕೊಂಡಿದೆ. ಈ ಪ್ರದೇಶದಲ್ಲಿ ತೂಗು ಸೇತುವೆ ಇರುವುದು ಪ್ರವಾಸಿಗಳಿಗೆ ಖುಷಿ ತಂದಿದೆ. ಪ್ರವಾಸಿಗಳು, ಶಾಲಾ ಮಕ್ಕಳು ಹೆಚ್ಚಾಗಿ ತೂಗು ಸೇತುವೆ ವೀಕ್ಷಿಸಲು ಬರುತ್ತಾರೆ. ತೂಗು ಸೇತುವೆ ಅಪಾಯದಲ್ಲಿದೆ – ತೂಗು ಸೇತುವೆ ಪ್ರದೇಶ ಹೆಗ್ಗೋಡು, ಮುಳುಬಾಗಿಲು ಗ್ರಾ.ಪಂ.ವ್ಯಾಪ್ತಿಗೆ ಸೇರಿದೆ. ಸೇತುವೆ ನಿರ್ವಹಣೆ ಇಲ್ಲದೆ ಅಪಾಯದಲ್ಲಿದೆ. – ನಿರ್ವಹಣೆ ಇಲ್ಲದ ತೂಗು ಸೇತುವೆ ಕಂಡು ಪ್ರವಾಸಿಗರು ಅಸಮಾಧಾನಗೊಂಡಿದ್ದಾರೆ – ಹೆಗ್ಗೋಡು ಗ್ರಾ.ಪಂ. – ಮುಳುಬಾಗಿಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಒಮ್ಮೆ ಇತ್ತ ನೋಡುವರೆ ?

ತೂಗು ಸೇತುವೆ ಸಂಪರ್ಕದ ಅನುಕೂಲ ?

ತೂಗು ಸೇತುವೆ ಸಂಪರ್ಕದ ಅನುಕೂಲವನ್ನು ಮುಳುಬಾಗಿಲು, ಹೆಗ್ಗೋಡು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಾಗಿ ಪಡೆಯುತ್ತಾರೆ. ಸೇತುವೆ ಪ್ರದೇಶ ಹೆಗ್ಗೋಡು ಗ್ರಾ.ಪಂ.ವ್ಯಾಪ್ತಿಗೆ ಸೇರಿದ್ದು ನಿರ್ವಹಣೆ ಜವಾಬ್ದಾರಿ ನಿಭಾಯಿಸುವಲ್ಲಿ ಎರಡೂ ಗ್ರಾ.ಪಂ. ಪೂರ್ಣ ವಿಫಲವಾಗಿವೆ ಎಂದರೆ ತಪ್ಪೇನೋ ಇಲ್ಲ ಅಲ್ಲವೇ ? ಗೃಹ  ಸಚಿವರೆ ಒಮ್ಮೆ ಇತ್ತ ನೋಡಿ, ಪ್ರಾಣಾಪಾಯ ಸಂಭವಿಸುವ ಮುನ್ನ…

ಸರಕಾರದಿಂದ ದೊರಕುವ ಅನುದಾನ ಬಳಸಿ ನಿರ್ವಹಣೆ ಮಾಡಬಹುದಾಗಿದ್ದರೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಆಡಳಿತ ಆಸಕ್ತಿ ತಾಳುತ್ತಿಲ್ಲ ಎಂಬ ದೂರು ಸಾರ್ವಜನಿಕರದ್ದಾಗಿದೆ. ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿರುವ ತೂಗು ಸೇತುವೆ ಉಳಿಸಿಕೊಳ್ಳಲು ಆಡಳಿತ ಮೀನಾಮೇಷ ಎಣಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಗುರಿ ಆಗಿದೆ , ನೀವಾದರೋ ಒಮ್ಮೆ ತಿಳಿ ಹೇಳಿ ಅವರಿಗೆ. ಪ್ರಾಣಾಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಚುರುಕಾಗಿ ಕರ್ತವ್ಯ ನಿರ್ವಹಿಸಲಿ ಎಂಬ ಆಶಯದೊಂದಿಗೆ…


ಚಿತ್ರ: ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

RELATED ARTICLES

Most Popular

error: Content is protected !!
Join WhatsApp Group