ಮೈಸೂರು ಜಿಲ್ಲೆಯ ಕೆ.ಆರ್.ನಗರ ದ ಭಗತ್ ಸಿಂಗ್ ಯೂತ್ ಫೆಡರೇಶನ್ ವತಿಯಿಂದ ವಿವೇಕಾನಂದ ಅವರ 159 ನೇ ಜನ್ಮ ದಿನಾಚರಣೆ ಯನ್ನು ಅತ್ಯಂತ ವಿಶಿಷ್ಟ ಪೂರ್ಣ ವಾಗಿ ಆಚರಿಸಲಾಯಿತು.
ವಿವೇಕಾನಂದರ ೧೫೯ ನೇ ಜನ್ಮಜಯಂತಿ ಅಂಗವಾಗಿ ಕಾರ್ಯಕ್ರಮ ದ ಸಭಾಂಗಣದಲ್ಲಿ ೧೫೯ ಮೇಣದ ಬತ್ತಿಗಳನ್ನು ಹಚ್ಚಿದ್ದು ಕಾರ್ಯಕ್ರಮಕ್ಕೆ ರಂಗು ತುಂಬಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿ ಹಾಗೂ ಹಿಂದೂ ಧರ್ಮವನ್ನು ಜಗತ್ತಿಗೆ ಪಸರಿಸಿದ ಮಹಾನ್ ಶಕ್ತಿ. ಭಾರತೀಯ ಸಂಸ್ಕೃತಿಯ ಮೂಲ ಮಂತ್ರಗಳಾದ ಸತ್ಯ,ಶಾಂತಿ,ಸಹೋದರತ್ವ ತತ್ವಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ಮೂಲಕ ರಾಷ್ಟ್ರದ ಕೀರ್ತಿ ಪತಾಕೆ ಹಾರಿಸಿದರು ಎಂದು ಬಣ್ಣಿಸಿದರು..
ಯುವಜನತೆಗೆ ವಿವೇಕಾನಂದರ ತತ್ವಗಳು ದಾರಿದೀಪವಾಗಬೇಕು. ‘ಏಳು , ಎದ್ದೇಳು , ಗುರಿ ಸಾಧಿಸುವವರೆಗೆ ವಿಶ್ರಮಿಸದಿರು ‘ ಎಂಬ ವಿವೇಕಾನಂದರ ವಾಣಿ ಜಗತ್ತಿನ ಕೋಟ್ಯಂತರ ಜನರ ಬಾಳು ಕಟ್ಟಿಕೊಟ್ಟಿದೆ.ಇಂದಿನ ಯುವಜನತೆ ತಮ್ಮ ಬದುಕಿಗೆ ಒಂದು ವೈಯುಕ್ತಿಕ ಗುರಿ ,ಅದೇ ರೀತಿ ಸಮಾಜದ ಉನ್ನತಿಗೆ ದುಡಿಯುವ ಸಾಮಾಜಿಕ ಗುರಿ , ರಾಷ್ಟ್ರದ ಉನ್ನತಿಗೆ ಶ್ರಮಿಸುವ ರಾಷ್ಟಪ್ರೇಮದ ಗುರಿ ಹೊಂದಬೇಕು.ಆ ಮೂಲಕ ಸ್ವಾಮಿ ವಿವೇಕಾನಂದರ ಬಲಿಷ್ಠ ರಾಷ್ಟ್ರ ನಿರ್ಮಾಣದ ಕನಸನ್ನು ನನಸು ಮಾಡಬೇಕು ಎಂದವರು ಕರೆ ನೀಡಿದರು.
ಮತ್ತೊಬ್ಬ ಮುಖ್ಯ ಅತಿಥಿಗಳಾದ ಶಿಕ್ಷಕ ಮಂಜುರಾಜ್ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಹಾಗೂ ಆದರ್ಶಗಳು ರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಅಪಾರ ಪರಿಣಾಮ ಬೀರಿದವು.ಯುವಜನತೆ ರಾಷ್ಟ್ರದ ಆಸ್ತಿ. ಯುವಜನರು ಸ್ವಾಮಿ ವಿವೇಕಾನಂದರ ಜೀವನ ಹಾಗೂ ಆದರ್ಶ ಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾಜಸೇವಕರಾದ ಕೃಷ್ಣ ಭಟ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಸ್ವಾಮಿವಿವೇಕಾನಂದರು, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮೊದಲಾದವರ ಆದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನುಡಿದರು. ಸಂಸ್ಥೆಯ ಹಿರಿಯ ಪದಾಧಿಕಾರಿಗಳಾದ ಧರ್ಮ ಹೊಸೂರು ವೇದಿಕೆಯಲ್ಲಿದ್ದರು.
ರಕ್ಷಿತ್ ಸ್ವಾಗತಿಸಿದರು.ಕೃಷ್ಣಯ್ಯ ಕಾರ್ಯಕ್ರಮ ನಿರೂಪಿಸಿದರು. ಚೆಲ್ವನ್ ಕಾರ್ಯಕ್ರಮ ನಿರೂಪಿಸಿದರು.ರಾಜೇಶ್ ,ಅಮಿತ್,ನಟರಾಜು ,ಅಭಿ ,ಸತೀಶ್ ,ರಾಕೇಶ್ ,ಜಗದೀಶ್, ಗಿರೀಶ್ ,ಬಸವರಾಜು ಮೊದಲಾದವರು ಉಪಸ್ಥಿತರಿದ್ದರು.