ಬೆಳಗಾವಿ: “ಗಂಧರ್ವ ಲೋಕದ ದಂತಕತೆ ಭಾರತರತ್ನ ಲತಾ ಜೀ ಅವರ ಜೀವನವೇ ಒಂದು ಸಂಗೀತದ ಬೃಹತ್ ಸಂಪುಟ. ಕಳೆದ ಅರವತ್ತು ವರ್ಷಗಳ ಕಾಲ ಭಾರತೀಯ ಸಂಗೀತ ಲೋಕದ ಅಭಿಜಾತ ಸರಸ್ವತಿಯಾಗಿದ್ದ ಅವರು ಸಂಗೀತ ಲೋಕದಲ್ಲಿರುವ ನಮ್ಮಿಂದ ದೂರವಾಗಿದ್ದಾರೆ. ಆದರೂ ಭಾರತೀಯ ಸಂಗೀತ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಲತಾಜಿ ಸ್ಥಿರವಾಗಿ ಸುಪ್ರತಿಷ್ಠಿತರಾಗಿದ್ದಾರೆ. ಅವರ ದೂರವಾದರೂ ಅವರು ನಮ್ಮೆಲ್ಲರ ಹೃದಯದಲ್ಲಿ ಅಮರರಾಗಿದ್ದಾರೆ. ಭಾರತೀಯ ಸಂಗೀತವಿರುವವರೆಗೂ ಅವರು ಜೀವಂತರಾಗಿರುತ್ತಾರೆ. ಅವರ ಸಂಗೀತಾದರ್ಶವು ಮುಂದಿನ ತಲೆಮಾರಿಗೆ ಮಾದರಿಯಾಗಿದೆ. ಇಂದು ಅವರ ಪಾವನ ಸ್ಮರಣೆಯಿಂದ ನಾವೆಲ್ಲರೂ ಪವಿತ್ರರಾಗಿದ್ದೇವೆ” ಎಂದು ಭಾರತೀಯ ಸಂಗೀತ ಸಮಾಜದ ಅಧ್ಯಕ್ಷರಾದ ವಿದುಷಿ ಡಾ. ರೋಹಿಣಿ ಗಂಗಾಧರ್ ಅವರು ಅಭಿಪ್ರಾಯಪಟ್ಟರು.
ಅವರು ಬೆಳಗಾವಿಯ ಶಿವಬಸವ ನಗರದ ಭಾರತೀಯ ಗಾಯನ ಸಮಾಜದ ವತಿಯಿಂದ ಭಾರತೀಯ ಸಂಗೀತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯವರು ಏರ್ಪಡಿಸಿದ್ದ ಲತಾಜಿ ಅವರ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಅನಂತರ ವಿದುಷಿ ರೋಹಿಣಿ ಗಂಗಾಧರ್ ಅವರ ಅರವತ್ತು ಸ್ವರ ಸಾಧಕರು ಲತಾ ಜಿ ಅವರು ಹಾಡಿದ ಮೀರಾ, ಕಬೀರ್, ತುಳಸಿದಾಸ ಭಜನ್ಗಳನ್ನು ಮನಸೂರೆಗೊಳ್ಳುವಂತೆ ಭಾವಪೂರ್ಣವಾಗಿ ಹಾಡಿದರು. ‘ಏ ಮೇರೆವತನ್ ಕಿ ಲೋಗೋ’, ‘ವೈಷ್ಣವ ಜನತೋ…’, ‘ರಾಮರತನ ಧನಪಾಯೋ….’ ಶ್ರೀರಾಮಚಂದ್ರ ಕೃಪಾಲು ಭಜಮನ್…’ ಮುಂತಾದ ಗೀತೆಗಳು ಮನಸೆಳೆದವು.
ಕಾರ್ಯಕ್ರಮದಲ್ಲಿ ಭಜನ್, ದ್ರುಪದ, ಧಮಾರ ಮುಂತಾದ ಶಾಸ್ತ್ರೀಯ ಗಾಯನ ಪ್ರಕಾರಗಳು ಭಕ್ತಿರಸಕ್ಕೆ ಜೀವತುಂಬಿ ಸ್ವರ ನಮನವನ್ನು ಲತಾ ಮಂಗೇಶ್ಕರ ಅವರಿಗೆ ಸಲ್ಲಿಸಿದವು.
ಸತೀಶ ಗಚ್ಚಿ ತಬಲಾ ಸಾತ್ ನೀಡಿದರು.