ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಶಿಕ್ಷಣ ಇಲಾಖೆ ತಲೆ ತಗ್ಗಿಸುವಂಥ ಘಟನೆಯೊಂದು ನಡೆದಿದೆ. ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ್ ಕಾಲೊನಿಯ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅವರು ಮಾಡಿದ ತಪ್ಪು ಏನೆಂದರೆ, ತಮ್ಮ ಶಾಲೆಗಾಗಿ ನಾಲ್ಕು ಶಾಲಾ ಕೊಠಡಿಗಳನ್ನು ಕೊಡುವಂತೆ ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ಮಾಡಿದ್ದು !
ನಿಡಗುಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೀರಣ್ಣ ಮಡಿವಾಳ ಎಂಬುವವರು ತಮ್ಮ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ಮಂಜೂರು ಮಾಡುವಂತೆ ಸರ್ಕಾರವನ್ನು, ಶಿಕ್ಷಣ ಇಲಾಖೆಯನ್ನು ಒತ್ತಾಯಿಸುತ್ತ ಬಂದಿದ್ದರು. ಮೊದಲೇ ವಿದ್ಯಾರ್ಥಿಗಳಿಲ್ಲದೇ ಬಂದ್ ಆಗುತ್ತಿರುವ ಸರ್ಕಾರಿ ಶಾಲೆಗಳ ಪೈಕಿ ತಮ್ಮ ಶಾಲೆಗೆ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಮಾಡುವಲ್ಲಿ ಮಡಿವಾಳರ ಅವರು ಸಫಲರಾಗಿರಬೇಕು. ಆ ಹೆಚ್ಚಾದ ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಕಟ್ಟಡಕ್ಕಾಗಿ ಬೇಡಿಕೆ ಇಟ್ಟರು. ಈ ವಿಷಯವೇ ರಾಯಬಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್. ಅವರಿಗೆ ಹೆಚ್ಚು ‘ವರಿ’ ತಂದಿತೇನೋ ! ಕೊಠಡಿಗಳಿಗಾಗಿ ಬೇಡಿಕೆ ಇಟ್ಟ ಶಿಕ್ಷಕರನ್ನೇ ಅಮಾನತು ಮಾಡಿಬಿಟ್ಟರು ! ಅವರಿಗೆ ಫುಲ್ ಅಧಿಕಾರ ಇದೆಯಂತೆ ! ಬಹುಶಃ ಖಾಸಗಿ ಶಿಕ್ಷಣ ಸಂಸ್ಥೆ ಯಾವುದಾದರೂ ಈ ಬೇಡಿಕೆ ಇಟ್ಟಿದ್ದರೆ ಆಗಲೇ ಕೊಡುತ್ತಿದ್ದರೇನೊ !
ಯಾವನೋ ಒಬ್ಬ ಶಿಕ್ಷಕ ವರ್ಷಗಟ್ಟಲೇ ಶಾಲೆಗೆ ಬರದೇನೆ ಸಂಬಳ ಪಡೆಯುತ್ತಿರುತ್ತಾನೆ, ಯಾವನೋ ಶಿಕ್ಷಕ ಡೆಪ್ಯುಟೇಶನ್ ಮೇಲೆ ಹೋಗಬೇಕಿದ್ದರೂ ಹೋಗದೇ ತನ್ನೂರಲ್ಲೇ ಪಾಠ ಹೇಳುತ್ತ ಕಾಲ ಕಳೆಯುತ್ತಿರುತ್ತಾನೆ, ಯಾವನೋ ಬಿಸಿ ಊಟದ ತರಕಾರಿ, ತತ್ತಿಗಳನ್ನೇ ಕದ್ದು ಸಾಗಿಸುತ್ತಿರುತ್ತಾನೆ……ಇದೆಲ್ಲ ಬಿಇಓಗಳ ಗಮನಕ್ಕೂ ಬಂದಿರುತ್ತದೆ ಆದರೆ ಅವರಿಗೆ ತಮ್ಮ ಚಮಚಾಗಿರಿ ಮಾಡುವ ಶಿಕ್ಷಕರು ಬೇಕು. ಅದು ಬಿಟ್ಟು ಹೀಗೆ ಶಾಲೆಯ ಉದ್ಧಾರಕ್ಕೆ ಹಠ ಮಾಡುವ ಶಿಕ್ಷಕರನ್ನು ಕಂಡರೆ ಅವರಿಗೆ ಆಗಿಬರುವುದಿಲ್ಲ.
ಮಡಿವಾಳರ ಎಂಬ ಶಿಕ್ಷಕ ಬೇಡಿದ್ದೇನು? ಮಕ್ಕಳಿಗಾಗಿ ಶಾಲಾ ಕೊಠಡಿಯನ್ನು. ಅವರ ಬೇಡಿಕೆಯನ್ನು ಮೇಲಧಿಕಾರಿಗಳ ಮುಂದೆ, ಸರ್ಕಾರದ ಮುಂದೆ ಇಟ್ಟು ಕೆಲಸ ಮಾಡಿಕೊಡುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ್ತವ್ಯ ಇದರಿಂದ ಅವರ ಪದವಿಗೂ ಶ್ರೇಯಸ್ಸು ಬರುತ್ತದೆ. ಅದನ್ನು ಮಾಡದೆ ಬೇಡಿಕೆಯಿಟ್ಟ ಶಿಕ್ಷಕರನ್ನೇ ಅಮಾನತ್ತು ಮಾಡುತ್ತಾರೆಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಸಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದಕ್ಕೆ ಯಾವ ಉತ್ತರ ನೀಡುತ್ತಾರೆ ?
ವಿಚಿತ್ರವೆಂದರೆ ಈ ಶಿಕ್ಷಕರ ಅಮಾನತ್ತಿನ ಬಗ್ಗೆ ಬೇರೆ ಯಾವ ಶಿಕ್ಷಕರೂ ಪ್ರತಿಕ್ರಿಯೆ ನೀಡಿಲ್ಲ ! ಯಾವ ರಾಜಕಾರಣಿಯೂ ಸೊಲ್ಲೆತ್ತಿಲ್ಲ. ಇದ್ದುದರಲ್ಲಿಯೇ ಆಪ್ ಪಕ್ಷದ ಕೆಲವು ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಬಿಇಓ ಅಮಾನತ್ತು ರದ್ದುಗೊಳಿಸಲು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ತನ್ನದೇ ಅಧಿಕಾರಿಯ ವಿರುದ್ಧ ಮಾತನಾಡಲಾರದು ಅಂಥ ರಾಜಕಾರಣ ಅದರದು. ಬಿಜೆಪಿ ಯಾಕೋ ಬಾಯಿ ಮುಚ್ಚಿಕೊಂಡು ಕುಳಿತಿದೆ. ಸಮಾಜ ಸೇವಕರೆನ್ನಿಸಿಕೊಂಡವರೂ, ಮಾಹಿತಿ ಹಕ್ಕಿನ ಅಡಿಯಲ್ಲಿ ಸಮಾಜ ಸೇವೆಗೆ ತೊಡಗಿದವರೂ ಯಾರೂ ಈ ಬಡಪಾಯಿ ಶಿಕ್ಷಕನ ಅಮಾನತು ಶಿಕ್ಷೆಯ ಬಗ್ಗೆ ಮಾತನಾಡಿಲ್ಲ.
ಒಂದು ಮಾತಿದೆ ಎಲ್ಲಕ್ಕಿಂತ ಹೆಚ್ಚು ಭ್ರಷ್ಟ ಇಲಾಖೆಗಳೆಂದರೆ ಒಂದು ಕಂದಾಯ ಇನ್ನೊಂದು ಶಿಕ್ಷಣ ಕ್ಷೇತ್ರ. ಇದು ಎಷ್ಟು ನಿಜವೋ ಗೊತ್ತಿಲ್ಲ ಆದರೆ ಇಂಥ ಘಟನೆಗಳು ನಡೆದಾಗ ಈ ಮಾತು ನಿಜವೆನ್ನಿಸುತ್ತದೆ. ಶಿಕ್ಷಣ ಕ್ಷೇತ್ರವೇ ಭ್ರಷ್ಟವಾದರೆ ಸಮಾಜದ ಮಕ್ಕಳಿಗೆ ಯಾವ ರೀತಿಯ ಸಂದೇಶ ಸಿಗುತ್ತದೆಯೆಂಬುದೇ ಯಕ್ಷ ಪ್ರಶ್ನೆ. ಜಿಲ್ಲಾ ಶಿಕ್ಷಣ ಅಧಿಕಾರಿಗಳು ಈ ಬಿಇಓ ಅವರ ವಿರುದ್ಧ ಕ್ರಮ ಜರುಗಿಸಬೇಕು. ಆ ಮುಖ್ಯ ಶಿಕ್ಷಕರಿಗೆ ನ್ಯಾಯ ಸಿಗಬೇಕೆಂಬುದೇ ನಮ್ಮೆಲ್ಲರ ಆಶಯವಾಗಿದೆ.
ಉಮೇಶ ಬೆಳಕೂಡ, ಮೂಡಲಗಿ
9448863309