ಮೂಡಲಗಿ: ಶಿಕ್ಷಕ ವೃತ್ತಿ ಪವಿತ್ರವಾದದ್ದು, ಉತ್ತಮ ಶ್ರದ್ಧೆ ಪ್ರಾಮಾಣಿಕತೆಯಿಂದ ವೃತ್ತಿ ಧರ್ಮ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಾರ್ವಜನಿಕ ಬದುಕಿನಲ್ಲಿ ನೆಮ್ಮದಿಯ ವಾತಾವರಣ ಸಿಗುತ್ತದೆ ಎಂದು ನಿವೃತ್ತ ದಾರವಾಡ ಅಪರ ಆಯುಕ್ತರ ಕಛೇರಿಯ ಸಹಾಯಕ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ಅವರು ಸಮೀಪದ ತಿಗಡಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಸುಣಧೋಳಿ ಸಮೂಹ ವ್ಯಾಪ್ತಿಯ ಶಿಕ್ಷಕ ಸಮೂಹದ ವತಿಯಿಂದ ಹಮ್ಮಿಕೊಂಡ ಸತ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಉತ್ತಮ ಆದರ್ಶಪ್ರಾಯವಾದ ನೈತಿಕ ಮೌಲ್ಯಗಳನ್ನು ಅಳವಡಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕ ಸಮುದಾಯದ ಮೇಲಿದೆ. ಶಿಕ್ಷಕರಿಗೆ ಪಾಲಕರ ಪ್ರೀತಿ ವಿಶ್ವಾಸ ಸಂಪಾದಿಸುವ ಮೂಲಕ ಮಕ್ಕಳ ಶಾಶ್ವತ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು. ವೃತ್ತಿ ಬದುಕಿನ ಆರಂಭಿಕ ಜೀವನ ನಡೆಸಿದ ಪುಣ್ಯದ ಭೂಮಿಯಲ್ಲಿ ಸತ್ಕರಿಸಿ ಅಭಿನಂದಿಸಿರುವದು ಹೆಮ್ಮೆ ತರುವಂತಹ ಕಾರ್ಯವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕನಾಗಿ ಮುಖ್ಯೋಪಾಧ್ಯಾಯ, ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ದೇಶಕನಾಗಿ ಕೊನೆಗೆ ಸಹ ನಿರ್ದೇಶಕನಾದೆ. ವೃತ್ತಿ ಬದುಕಿಗೆ ವಿದಾಯ ಹೇಳಿ ವಿಶ್ರಾಂತಿಯ ಜೀವನಕ್ಕೆ ಕಾಲಿಡುತ್ತಿರುವದು ಸಂತೃಪ್ತಿ ನೀಡಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ರಾಷ್ಟ್ರ ಪ್ರಶಸ್ತಿ ವಿಜೇತ ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಮೂಡಲಗಿ ವಲಯದ ಶಿಕ್ಷಕ ಸಮೂಹ ಮಾಡಿರುವ ಶ್ರೇಷ್ಠ ಕಾರ್ಯಗಳು ಸ್ಥಳೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಶೈಕ್ಷಣಿಕವಾಗಿ ಉದಾತ್ತ ಕೊಡುಗೆಗಳ ಮೂಲಕ ಈ ಪ್ರಶಸ್ತಿಗೆ ಬಾಜನರಾಗಬೇಕಾಯಿತು. ಮಕ್ಕಳ ಸರ್ವೋತೋಮುಖ ಬೆಳವಣಿಗೆ ನಿಟ್ಟಿನಲ್ಲಿ ನಾವು ಮಾಡುವ ಕಾರ್ಯಗಳಿಗೆ ಮನ್ನಣೆ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಆರ್ ಪತ್ತಾರ, ಮುಖ್ಯೋಪಾಧ್ಯಾಯರಾದ ರಮೇಶ ಬುದ್ನಿ, ಸುಭಾಸ ಬಾಗೋಜಿ, ಮಲ್ಲಮ್ಮ ಹುಚ್ಚಮಲನವರ, ಅವ್ವಣ್ಣ ಮೋಡಿ, ಸಿಆರ್ಫಿ ಹನಮಂತ ಬೆಳಗಲಿ, ಶಿಕ್ಷಕ ಸಂಘಟನೆಯ ಎಲ್.ಎಮ್ ಬಡಕಲ್, ಬ್ರಹ್ಮಾನಂದ ಕುರುಬಚನ್ನಾಳ, ಪಿ.ಬಿ ಕುಲಕರ್ಣಿ, ಗೋವಿಂದ ಸಣ್ಣಕ್ಕಿ, ಆರ್.ಕೆ ಪಾಟೀಲ ಹಾಗೂ ಸಮೂಹ ವ್ಯಾಪ್ತಿಯ ಶಿಕ್ಷಕ ಸಮೂಹ ಹಾಗೂ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.