ಬಿಜೆಪಿ ಬಿಡುವುದಿಲ್ಲ, ಬೇರೆ ಪಕ್ಷ ಸೇರುವುದಿಲ್ಲ, ಇದು ವಿರೋಧಿಗಳ ಅಪಪ್ರಚಾರ – ಬಾಲಚಂದ್ರ ಜಾರಕಿಹೊಳಿ

Must Read

ಗೋಕಾಕ: ಯಾರು ಎಷ್ಟೇ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದರೂ 2023 ರಲ್ಲಿ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅರಭಾವಿ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದಲ್ಲಿ ಗುರುವಾರದಂದು ಜರುಗಿದ ಮಹಾಲಕ್ಷ್ಮೀ ಸಭಾ ಭವನವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಈಗಾಗಲೇ ಪಕ್ಷ ಬಿಡುತ್ತಿದ್ದೇನೆ ಎಂದು ಸುಳ್ಳು ಸುದ್ಧಿಗಳನ್ನು ಹಬ್ಬಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಬೇರೆ ಪಕ್ಷ ಸೇರುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಬೆಳಗಾವಿಯಲ್ಲಿ ನಮ್ಮ ಪಕ್ಷದವರೇ ಸಭೆ ನಡೆಸಿದ್ದಾರೆ. ಅದು ಅಧಿಕೃತವೋ ಅಥವಾ ಅನಧಿಕೃತವೋ ಎಂಬುದನ್ನು ಪಕ್ಷದ ಮುಖಂಡರೇ ನಿರ್ಣಯಿಸಬೇಕು. ಒಂದು ವೇಳೆ ಅಧಿಕೃತವಾಗಿದ್ದರೆ ಪಕ್ಷದ ಅಧ್ಯಕ್ಷರು, ಲೋಕಸಭಾ ಸದಸ್ಯರು ಹಾಗೂ ಇನ್ನಿತರ ಶಾಸಕರಿಗೆ ಮಾಹಿತಿ ರವಾನಿಸಬೇಕಿತ್ತು. ಅದೂ ಅಲ್ಲದೇ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಕಡಾಡಿ ಮತ್ತು ಶಾಸಕ ರಾಜೀವ ಅವರೇ ಇದೇನು ಪಕ್ಷದ ಅಧೀಕೃತ ಸಭೆಯಲ್ಲ ಎಂದು ಅವರೇ ಹೇಳಿರುವುದು. ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಹೀಗಾಗಿ ಇದರ ಬಗ್ಗೆ ಹೆಚ್ಚಿನ ಮಾತನಾಡಲಾರೆ. ಆದರೆ ಒಂದಂತೂ ಸ್ಪಷ್ಟ. ಇಂತಹ ಬೆಳವಣಿಗೆಗಳು ನಡೆಯಬಾರದಿತ್ತು. ಪಕ್ಷಕ್ಕೆ ಮುಜುಗರವಾಗಬಹುದು ಎಂದು ಹೇಳಿದರು.

ರಮೇಶ ಜಾರಕಿಹೊಳಿ ಮತ್ತು ಇನ್ನಿತರ 17 ಜನ ಶಾಸಕರ ಬಲದೊಂದಿಗೆ ಇಂದು ಬಿಜೆಪಿಯಲ್ಲಿ ಕೆಲವರು ಅಧಿಕಾರ ಅನುಭವಿಸುತ್ತಿದ್ದಾರೆ. ಈ ಅಧಿಕಾರದ ರುಚಿಯಲ್ಲಿ ರಮೇಶ ಅವರ ಪಾತ್ರ ಬಹು ದೊಡ್ಡದಿದೆ. ಒಂದು ವೇಳೆ ರಮೇಶ ಜಾರಕಿಹೊಳಿ ಮತ್ತು ಸಂಗಡಿಗರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಬರದಿದ್ದಲ್ಲಿ ನಾವು ಸರ್ಕಾರ ರಚಿಸಲು ಆಗುತ್ತಿರಲಿಲ್ಲ. ಇದನ್ನು ಅಧಿಕಾರ ಅನುಭವಿಸುತ್ತಿರುವವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಪಕ್ಷ ಅಂದ ಮೇಲೆ ಭಿನ್ನಾಭಿಪ್ರಾಯ, ವೈಮನಸ್ಸು ಇರುವುದು ಸ್ವಾಭಾವಿಕವಾಗಿದೆ. ಜಿಲ್ಲೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ನಾವೆಲ್ಲರೂ ಕುಳಿತುಕೊಂಡು ಪರಿಹಾರ ಮಾಡಿಕೊಳ್ಳುತ್ತೇವೆ. ಸಚಿವರಾದ ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮತ್ತಿತರರು ಶೀಘ್ರದಲ್ಲಿ ಸಭೆ ಸೇರಿ ಚರ್ಚಿಸುತ್ತೇವೆ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಿಸಲು ಒಗ್ಗಟ್ಟಿನಿಂದ ಕಾರ್ಯತಂತ್ರಗಳನ್ನು ರೂಪಿಸುತ್ತೇವೆ ಎಂದು ಹೇಳಿದರು.

ರಮೇಶ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನ ಕೊಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಮುಂಬರುವ ಚುನಾವಣೆ ಹಾಗೂ ಸಂಘಟನೆ ಹಿತದೃಷ್ಟಿಯಿಂದ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನನ್ನ ವೈಯಕ್ತಿಕ ನಿಲುವಾಗಿದೆ. ಆದರೂ ವರಿಷ್ಠರ ತೀರ್ಮಾನಕ್ಕೆ ಬದ್ಧರಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group