ಹೆಣ್ಣು ಅಬಲೆಯಲ್ಲ ಸಬಲೆ – ಲೂಸಿ ಸಾಲ್ಡಾನಾ

Must Read

ಸವದತ್ತಿಃ “ ಹೆಣ್ಣು ತನ್ನ ಬದುಕಿನಲ್ಲಿ ನಡೆಯುವ ಎಲ್ಲ ರೀತಿಯ ಘಟನೆಗಳನ್ನು ಎದುರಿಸುವ ಜೊತೆಗೆ ಅಬಲೆಯಲ್ಲ ಸಬಲೆ ಎಂಬುದನ್ನು ನಿರೂಪಿಸಬೇಕು. ನನ್ನ ಬದುಕಿನ ಪ್ರತಿ ಪುಟದಲ್ಲಿಯೂ ನೋವುಂಡು ನೋವಿನಲ್ಲಿಯೂ ನಲಿವನ್ನು ಕಾಣುತ್ತ. ಶಿಕ್ಷಕ ವೃತ್ತಿಯನ್ನು ಮಕ್ಕಳ ಒಡನಾಟದಲ್ಲಿ ಕಳೆಯುವ ಜೊತೆಗೆ ನಿವೃತ್ತಿಯಾದರೂ ಸಹಿತ ಇಂದಿಗೂ ಮಕ್ಕಳೊಡನೆಯೇ ಬದುಕನ್ನು ಕಳೆಯುತ್ತಿರುವೆನು.

ವೈ.ಬಿ.ಕಡಕೋಳ ಮತ್ತು ಎಲ್.ಐ.ಲಕ್ಕಮ್ಮನವರ ಗುರುಗಳು ನನ್ನ ಬದುಕಿನ ಕತೆಯನ್ನು ಪುಸ್ತಕದಲ್ಲಿ ಪ್ರಕಟಿಸುವ ಮೂಲಕ ನನಗೊಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಿದರು.ನಾನು ದತ್ತಿ ನೀಡುತ್ತಿರುವ ಶಾಲೆಗಳು ಈಗ 80ಕ್ಕೆ ಏರಿದ್ದು. ಈ 80ನೆಯ ದತ್ತಿಯನ್ನು ಸವದತ್ತಿ ತಾಲೂಕಿನ ಶಾಲೆಗೆ ನೀಡಬೇಕು ಎಂದು ಸಂಕಲ್ಪಿಸಿ ಇಂದು ನಂ.4 ಶಾಲೆಗೆ ದತ್ತಿ ನೀಡಿದ್ದು ಮಕ್ಕಳಿಗೆ ಈ ದತ್ತಿ ಹಣದ ಬಡ್ಡಿಯನ್ನು ಪ್ರತಿ ವರ್ಷ ಸದ್ಬಳಕೆ ಮಾಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿರಿ” ಎಂದು ದತ್ತಿದಾನಿ ಮಾತೆ ಲೂಸಿ ಸಾಲ್ಡಾನಾ ಗುರುಮಾತೆ ಕರೆ ನೀಡಿದರು.

ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ನಂ.4 ಶಾಲೆ ಸವದತ್ತಿಯಲ್ಲಿ 20 ಸಾವಿರ ರೂಪಾಯಿಗಳ ದತ್ತಿನಿಧಿಯ ಚೆಕ್‍ನ್ನು ಶಾಲೆಯ ಗುರುಮಾತೆ ಶ್ರೀಮತಿ ಎಲ್.ಎನ್.ಗಾಣಿಗೇರ ಅವರಿಗೆ ಹಸ್ತಾಂತರಿಸುವ ಮೂಲಕ ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ ವಹಿಸಿದ್ದರು. ಅತಿಥಿಗಳಾಗಿ ಅಕ್ಷರತಾಯಿ ಲೂಸಿ ಸಾಲ್ಡಾನಾ ಸಮಿತಿಯ ಅಧ್ಯಕ್ಷರಾದ ಎಲ್.ಐ.ಲಕ್ಕಮ್ಮನವರ. ವಿಕಲಚೇತನ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ. ವೈ.ಬಿ.ಕಡಕೋಳ.ಸಂಸ್ಕೃತ ಪಾಠಶಾಲೆಯ ಶಿಕ್ಷಕರೂ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕದ ಕಾರ್ಯದರ್ಶಿಗಳಾದ ಬಿ.ಎನ್.ಹೊಸೂರ. ಶಿಕ್ಷಕರಾದ ಎಸ್.ಎಂ.ದೀಕ್ಷಿತ ಉಪಸ್ಥಿತರಿದ್ದರು.

ವೈ.ಬಿ.ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿ “ಎಲ್.ಐ.ಲಕ್ಕಮ್ಮನವರ ಗುರುಗಳ ಮೂಲಕ ಲೂಸಿ ಸಾಲ್ಡಾನಾ ಪರಿಚಯ ಅವರ ಬದುಕಿನ ಪುಟಗಳು ಕತೆಯಲ್ಲ ಜೀವನ.ಅಮೃತಧಾರೆ.ಒಂಟಿ ಪಯಣ.ಮನೆ ಮದ್ದು. ಕೃತಿಗಳ ಮೂಲಕ ಅವರ ಬದುಕು ಈಗ ಬದುಕು ಬಂಡಿ ಚಲನಚಿತ್ರವಾಗುವ ಮೂಲಕ ನನ್ನ ಬರವಣಿಗೆಯ ಸಾರ್ಥಕತೆ ಗುರುಮಾತೆಯ ಬದುಕಿನೊಂದಿಗೆ ಬೆಳೆದು ಬಂದಿದೆ.ದೇವರು ಅವರಿಗೆ ಆಯುರಾರೋಗ್ಯ ನೀಡಲಿ.ಇನ್ನೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆ ಅವರು ನೀಡುವಂತಾಗಲಿ” ಎಂದು ಆಶಿಸಿದರು. ಎಲ್.ಐ.ಲಕ್ಕಮ್ಮನವರ ಮಾತನಾಡಿ “ಸಾಲ್ಡಾನಾ ಬಾಲ್ಯದಲ್ಲಿ ನನಗೆ ಶಿಕ್ಷಣವನ್ನು ನೀಡದೇ ಹೋಗಿದ್ದರೆ ನಾನು ಏನಾಗಿರುತ್ತಿದ್ದೆನೋ ಗೊತ್ತಿಲ್ಲ. ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಅವರ ವಿದ್ಯಾರ್ಥಿಯಾಗಿ ಶಿಕ್ಷಕನಾಗಿದ್ದು ನನ್ನ ಪುಣ್ಯ. ನನ್ನ ಗುರುಮಾತೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿಯವರು ಮಾತನಾಡಿ “ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದರಲ್ಲೂ ಲೂಸಿ ಸಾಲ್ಡಾನಾ ಗುರುಮಾತೆ ಒಂದು ಶಕ್ತಿಯಾಗಿ ನಮಗೆಲ್ಲ ಜ್ವಲಂತ ಮಾದರಿ. ಅವರ ಬದುಕು ಆದರ್ಶಮಯ.ಮುಂದಿನ ದಿನಗಳಲ್ಲಿ ಅವರಿಂದ ಸವದತ್ತಿ ತಾಲೂಕಿಗೆ ಇನ್ನೂ ಹೆಚ್ಚಿನ ದತ್ತಿನಿಧಿಗಳು ಸರ್ಕಾರಿ ಶಾಲೆಗಳಿಗೆ ಲಭಿಸಿ ಬಡ ಮಕ್ಕಳಿಗೆ ಅದರ ಪ್ರಯೋಜನ ದೊರೆಯುವಂತಾಗಲಿ” ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಜಗದೀಶ ಗೋರೋಬಾಳ. ಗುರುಮಾತೆಯರಾದ ಆರ್.ಎಚ್.ನಾಗನೂರ.ಡಿ.ಪಿ.ಪತ್ತಾರ.ವ್ಹಿ.ವ್ಹಿ.ಸುಬೇದಾರ.ಜಿ.ಎಸ್.ಹೊಸಮನಿ.ಎಸ್.ಎಂ.ಮಲ್ಲೂರ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕರೂ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದ ಪದಾಧಿಕಾರಿಗಳಾದ ಎಚ್.ಆರ್.ಪೆಟ್ಲೂರ್ ಕಾರ್ಯಕ್ರಮ ನಿರೂಪಿಸುವದರೊಂದಿಗೆ ಸ್ವಾಗತಿಸಿದರು. ಬಿ.ಎನ್.ಹೊಸೂರ ವಂದಿಸಿದರು.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group