ಮುಡಲಗಿ – ಪ್ರೊ .ಜಿ ವೆಂಕಟಸುಬ್ಬಯ್ಯನವರು ಕನ್ನಡ ನಾಡಿಗೆ ಅದರಲ್ಲೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ಯುವ ಲೇಖಕ ಶಿವಲಿಂಗ ದಾನನ್ನವರ ಹೇಳಿದರು.
ಅವರು ತಾಲೂಕಿನ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯಾಲಯದಲ್ಲಿ ಸಿರಿ ಸಂಗಮ ಕನ್ನಡ ಸಾಹಿತ್ಯ ಬಳಗದಿಂದ ನಡೆದ ಪ್ರೊ .ಜಿ ವೆಂಕಟಸುಬ್ಬಯ್ಯನವರ ಜನ್ಮ ದಿನಾಚರಣೆ ಸ್ಮರಣಾರ್ಥ ಕನ್ನಡಕ್ಕಾಗಿ ದುಡಿದು ಮಡಿದವರ ಕಾರ್ಯಕ್ರದಲ್ಲಿ ಮಾತನಾಡಿದರು.
ಪ್ರೊ .ಜಿ ವೆಂಕಟಸುಬ್ಬಯ್ಯನವರು ಭಾಷಾ ತಜ್ಞರಾಗಿ, ನಿಘಂಟು ತಜ್ಞರಾಗಿ, ಮಕ್ಕಳಿಗೆ ಉತ್ತಮವಾದ ಕಲಿಕೆಯ ಸ್ವರೂಪವನ್ನು ತಿಳಿಸಿದ್ದರಲ್ಲು ತಮ್ಮದೆ ಆದ ಕೌಶಲ್ಯವನ್ನು ಬಳಸಿ ಮಕ್ಕಳಿಗೆ ನೆಚ್ಚಿನ ಶಿಕ್ಷಕರಾಗಿ ಕನ್ನಡ ನಾಡಿಗೆ ಮೇಷ್ಟ್ರು ಅನಿಸಿಕೊಂಡವರು, ಸಾಮಾನ್ಯ ಜನರಿಗೂ ಕನ್ನಡದ ಆಳ ಅಗಲ ನಮ್ಮ ಭಾಷೆ ಅದೆಷ್ಟು ಶ್ರೇಷ್ಠ ಎಂದು ಗ್ರಾಮೀಣ ಭಾಗದ ಜನರಿಗೂ ತಿಳಿಯುವಂತೆ ಪತ್ರಿಕೆಯಲ್ಲಿ ‘ಇಗೋ ಕನ್ನಡ’ ಎಂಬ ಅಂಕಣ ಬರೆದು ತಲುಪಿಸಿದವರು, ಭಾಷೆಗಾಗಿ ತಮ್ಮ ಬಾಳನ್ನೆ ಮುಡಿಪಾಗಿಟ್ಟು ಶತಮಾನ ತಲುಪಿ ನಡೆದಾಡುವ ವಿಶ್ವಕೋಶ ಆದವರು, ಕನ್ನಡ ಎಂದರೆ ಅದೊಂದು ಪೂಜ್ಯನೀಯ ಭಾಷೆ ಅದನ್ನು ಭಕ್ತಿಯಿಂದ ಪೂಜಿಸಿ ಪ್ರೀತಿಸಿದವರಿಗೆ ಅನ್ನ, ನೀರು ಬದುಕು ನೀಡುತ್ತದೆ. ಭಾಷೆಯನ್ನು ಭಾವದಿಂದ ಪ್ರೀತಿಯಿಂದ ಮಾತಾಡಿ ಭಾಷೆಯೆ ಬದುಕು ಎಂದು ಕನ್ನಡಿಗರಿಗೆ ಕಿವಿಮಾತು ಹೇಳಿದ ಪ್ರೊ. ವೆಂಕಟಸುಬ್ಬಯ್ಯನವರಂಥ ಹಿರಿಯರನ್ನು ನೆನಪಿಸುವ ಸೌಭಾಗ್ಯ ನಮ್ಮದಾಗಿದೆ ಎಂದು ಹೇಳಿದರು.
ಸಾಮಾಜ ಸೇವಕ ಬಸಲಿಂಗ ನಿಂಗನೂರ ಮಾತನಾಡಿ, ಇಂದಿನ ಯುವ ಪೀಳಿಗೆಯು ಪ್ರೊ. ವೆಂಕಟಸುಬ್ಬಯ್ಯನವರಂಥ ನಿಘಂಟು ತಜ್ಞರನ್ನು ನಾಡು ಕಟ್ಟಿದವರನ್ನು ಸ್ಮರಿಸುವ ಅನಿವಾರ್ಯತೆ ಇದೆ ನಮಗಾಗಿ ದುಡಿದವರನ್ನು ನಾವೆಂದಿಗೂ ಮರೆಯದೆ ಸ್ಮರಿಸುವಂತಹ ಕೆಲಸವಾಗಬೇಕಿದೆ ಎಂದರು. .
ಶಿಕ್ಷಕರಾದ ಮಾರುತಿ ಲಂಗೂಟಿ, ಹನಮಂತ ಶಿವಾಪೂರ ಹಾಲಪ್ಪ ಬ್ಯಾಕೂಡ, ಶಂಕರ ಸಣಸಟ್ಟಿ ಉಪಸ್ಥಿತರಿದ್ದರು. ಕು.ಮಂಜುಳಾ ವಾಗೋಡೆ ನಿರೂಪಿಸಿದರು.
ಪೋಟೊ ಪೈಲ್-೨೩ಎಮಡಿಎಲ್-೧
ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯಲಯದಲ್ಲಿ ನಡೆದ ಪ್ರೊ .ಜಿ ವೆಂಕಟಸುಬ್ಬಯ್ಯನವರ ಜನ್ಮ ದಿನಾಚರಣೆ ಸ್ಮರಣಾರ್ಥ ಕನ್ನಡಕ್ಕಾಗಿ ದುಡಿದು ಮಡಿದವರ ಕಾರ್ಯಕ್ರದಲ್ಲಿ ಶಿವಲಿಂಗ ದಾನನ್ನವರ ಮಾತನಾಡಿದರು.