ರಾಜ್ಯದ ಆರೋಗ್ಯ ಸಚಿವರು ಇತ್ತಕಡೆ ಸ್ವಲ್ಪ ಕಣ್ಣು ಹರಿಸಿ
ಬೀದರ – ಅನಾರೋಗ್ಯಕ್ಕೊಳಗಾದ ಬಡ ಜನರ ಹೊಟ್ಟೆ ಸೇರಬೇಕಾದ ಸರ್ಕಾರಿ ಆಸ್ಪತ್ರೆಯ ಔಷಧಿ ಮಾತ್ರೆಗಳು ನದಿಯ ಪಾಲಾದ ದುರದೃಷ್ಟಕರ ಘಟನೆ ಬೀದರ ಸಮೀಪದ ಚುಳಕಿ ನಾಲಾ ಹತ್ತಿರ ನಡೆದಿದೆ.
ರಾಶಿ ರಾಶಿ ಔಷಧಿ ಮಾತ್ರೆಗಳು, ಟಾನಿಕ್ ,ಚುಚ್ಚುಮದ್ದು, ಓಆರ್ ಎಸ್ ಪಾಕೇಟ್ ಸೇರಿದಂತೆ ಅಪಾರ ಪ್ರಮಾಣದ ಸರ್ಕಾರಿ ಆಸ್ಪತ್ರೆಯ ಔಷಧಿ ಮಾತ್ರೆಗಳನ್ನು ಬಿಸಾಡಿ ಕೈ ತೊಳೆದುಕೊಂಡ ಆಸ್ಪತ್ರೆ ಸಿಬ್ಬಂದಿಯ ಕರ್ಮಕಾಂಡ ಇದು.
ಗಡಿ ಜಿಲ್ಲೆ ಬೀದರನ ಭಾಲ್ಕಿ ತಾಲ್ಲೂಕಿನ ಇಂಚೂರ್ – ಗೋರಚಿಂಚೋಳಿಯ ಮಾಂಜ್ರಾ ಚುಳಕಿ ನಾಲಾ ಜಲಾಶಯದ ಸೇತುವೆಯ ಕೆಳಗೆ ರಾಶಿ ರಾಶಿ ಔಷಧಿ ಮಾತ್ರೆಗಳು, ಟಾನಿಕ್, ಚುಚ್ಚುಮದ್ದು, ಮಾತ್ರೆಗಳು, ಓಆರ್ ಎಸ್ಎಲ್ಲವೂ ಸೇತುವೆ ಅಡಿಯಲ್ಲಿ ಜನರ ಕೈಗೆ ಸಿಕ್ಕು ಆರೋಗ್ಯ ಇಲಾಖೆ ಅಧಿಕಾರಿಗಳ ಅನಾಚಾರವನ್ನು ಸಾರಿ ಸಾರಿ ಹೇಳುತ್ತಿವೆ. ಏನ್ ಮಾಡುತ್ತಿದ್ದಾರೆ ಆರೋಗ್ಯ ಸಚಿವರು, ಬೀದರ್ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಂದು ಜನತೆ ಕೇಳುವಂತಾಗಿದೆ.
ಉಸ್ತುವಾರಿ ಸಚಿವರು ಜಿಲ್ಲೆಗೆ ಬೇಟಿ ನೀಡದೆ ಆರು ತಿಂಗಳೇ ಕಳೆದಿದೆ. ಇನ್ನೂ ಅವರು ಬೀದರ್ ಕಡೆ ಮುಖ ಮಾಡಿಲ್ಲ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಮೇಲಾಗಿ ಇಂಥ ಅನಾಚಾರಗಳು ಸಂಭವಿಸುತ್ತಿವೆ ಎಂದು ಜನತೆ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಔಷಧಿಗಳು ಸಿಕ್ಕ ಸ್ಥಳದಲ್ಲಿ ಹಾಜರಿದ್ದ ಜನರು ಆರೋಗ್ಯ ಇಲಾಖೆಯ ಬೇಜವಾಬ್ದಾರಿತನಕ್ಕೆ ಛೀಮಾರಿ ಹಾಕಿದರಲ್ಲದೆ ಮಕ್ಕಳ ಹಾಗೂ ಜನರ ಆರೋಗ್ಯ ಕಾಪಾಡಬೇಕಾದ ಔಷಧಿಗಳನ್ನು ನಾಲೆಗೆ ಬಿಸಾಕಿದ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ