ಮಕ್ಕಳಿಗೆ ಭದ್ರ ಬುನಾದಿ ಹಾಕಿಕೊಟ್ಟಾಗ ಮಾತ್ರ ಭವ್ಯ ಭಾರತದ ಕನಸು ನನಸಾಗುವುದು – ಅಜಿತ ಮೆನ್ನಿಕೇರಿ

0
387

ಮೂಡಲಗಿ: ಸರಕಾರವು ಹತ್ತು ಹಲವು ಯೋಜನೆಗಳನ್ನು ಜಾರಿಯಲ್ಲಿ ತಂದಿದೆ. ಅವುಗಳನ್ನು ಸೂಕ್ತ ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಂಡು ಜೀವನ ಸಾಗಿಸಬೇಕು. ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು. ಅವರಿಗೆ ಸೂಕ್ತ ರೀತಿಯಲ್ಲಿ ಶೈಕ್ಷಣಿಕವಾಗಿ ಭದ್ರ ಬುನಾದಿ ಹಾಕಿಕೊಟ್ಟಾಗ ಮಾತ್ರ ಭವಿಷ್ಯತ್ತಿನ ಭವ್ಯ ಭಾರತದ ಕನಸು ನನಸಾಗುವದು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.

ಅವರು ಸಮೀಪದ ನಾಗನೂರಿನ ಮೇಘಾ ವಸತಿ ಶಾಲೆಯಲ್ಲಿ ಜರುಗಿದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಪೂರ್ವಭಾವಿ ತಾಲೂಕಾ ಮಟ್ಟದ ವಿಶೇಷ ಸಂಪನ್ಮೂಲ ಶಿಕ್ಷಕರ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಸಾಲಿನಲ್ಲಿ ಮೂಡಲಗಿ ವಲಯದಿಂದ ಅತೀ ಹೆಚ್ಚು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೋನಾ, ಅಕಾಲಿಕ ಮಳೆ, ಪ್ರವಾಹಗಳ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಗಳು ಭೌತಿಕವಾಗಿ ನಡೆಯದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಗತಿಗಳ ಆಯೋಜನೆಯಾಗಿರುವದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ಅವಶ್ಯಕ ಸಾಮಗ್ರಿಗಳನ್ನು ಪೂರೈಸಿ ಪರೀಕ್ಷಾ ತಯಾರಿಗೆ ಅನುಕೂಲ ಮಾಡಲಾಗಿತ್ತೆಂದರು.

ಪ್ರಸಕ್ತ ಸಾಲಿನಲ್ಲಿ ಮುರಾರ್ಜಿ ವಸತಿ ಶಾಲೆಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ. ಪರೀಕ್ಷಾ ಪೂರ್ವಭಾವಿ ತಯಾರಿಗಾಗಿ ವಲಯ ವ್ಯಾಪ್ತಿಯಲ್ಲಿ ನುರಿತ ಸಂಪನ್ಮೂಲ ಶಿಕ್ಷಕರ ತಂಡ ರಚಿಸಿ ವಿಶೇಷ ಪಠ್ಯಕ್ರಮ ರಚಿಸಿ, ಸಾಮರ್ಥ್ಯ, ವಿಷಯ ಉಜಳಣೆ, ಕ್ಲಿಷ್ಟಾಂಶಗಳು, ಹಳೆಯ ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಸಂಭವನೀಯ ಪ್ರಶ್ನೆ ಕೋಶ ರಚಿಸಲು ತಿಳಿಸಲಾಗಿದೆ. ವಲಯ ಹಂತದಿಂದ ರಚಿಸಲ್ಪಟ್ಟ ಅಧ್ಯಯನ ಸಾಮಗ್ರಿಗಳನ್ನು ಸಮೂಹ ಹಂತದಲ್ಲಿ ವಿಶೇಷ ಶಿಕ್ಷಕರಿಗೆ ತರಬೇತಿ ನೀಡಿ ಸಮೂಹ ಹಂತದ ತಂಡದಿಂದ ಶಾಲಾ ಹಂತದ ವಿಶೇಷ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರನ್ನಾಗಿಸಬೇಕು ಎಂದು ತಿಳಿಸಿದ್ದಾರೆ.

ವಿಶೇಷ ಸಂಪನ್ಮೂಲ ಶಿಕ್ಷಕರ ಕಾರ್ಯಾಗಾರದಲ್ಲಿ ನೋಡಲ್ ಅಧಿಕಾರಿ ಹಾಗೂ ಪಿಇಒ ಎ.ಎ ಜುನೇದಿ ಪಟೇಲ್, ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್, ಕೆ.ಎಲ್ ಮೀಶಿ, ಸಿ.ಎಸ್ ಮೋಹಿತೆ, ಅಭಯ ಜರಾಳೆ, ಸುಗತೆ, ಎನ್.ವಿ ನಾಂವಿ, ಹಾದಿಮನಿ, ಸನದಿ ಹಾಗೂ ಸಂಪನ್ಮೂಲ ಶಿಕ್ಷಕರ ತಂಡ ಭಾಗಿಯಾಗಿದ್ದರು.

ಪೋಟೋ- ತಾಲೂಕಾ ಮಟ್ಟದ ವಿಶೇಷ ಸಂಪನ್ಮೂಲ ಶಿಕ್ಷಕರರ ಕಾರ್ಯಾಗಾರದಲ್ಲಿ ಬಿಇಒ ಅಜಿತ ಮನ್ನಿಕೇರಿ ಭಾಗವಹಿಸಿ ಮಾತನಾಡಿದರು.