ಸಿಂದಗಿ: ಇಂದಿನ ಸಮಾಜವು ಕಲುಷಿತ ಎಣ್ಣೆ ಬಳಕೆಯಿಂದಾಗಿ ಆರೋಗ್ಯದಲ್ಲಿ ಭಾರಿ ಏರುಪೇರು ಅನುಭವಿಸುತ್ತಿದೆ ಗಾಣಿಗರ ಕುಲಕಸಬು ಕುಸುಬಿ ಎಣ್ಣೆ ಉತ್ಪಾದನೆ ಘಟಕಗಳನ್ನು ಪುನ: ಪ್ರಾರಂಭಿಸುವ ಸಂದೇಶ ಪ್ರಸ್ತುತ ಸಮ್ಮೇಳನದಲ್ಲಿ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ಕರ್ನಾಟಕ ರಾಜ್ಯ ಗಾಣಿಗ ನೌಕರರ ಕ್ಷೇಮಾಭಿವೃದ್ದಿ ಸಂಘ, ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕಗಳು ಹಮ್ಮಿಕೊಂಡಿದ್ದ ಗಾಣಿಗ ನೌಕರರ ರಾಜ್ಯ ಮಟ್ಟದ 3ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕಾರಣಕ್ಕಾಗಿ ಗಾಣಿಗ ಸಂಘಟನೆ ದುರುಪಯೋಗ ಪಡಿಸಿಕೊಳ್ಳುವುದು ಬೇಡ. ನೊಂದವರಿಗೆ ಆಸರೆಯಾಗುವ ಕಾರ್ಯ ಮಾಡಲು ಸಂಘಟನೆ ಇರಬೇಕಲ್ಲದೆ ಸರ್ಕಾರದ ಆಡಳಿತ ಯಂತ್ರದ ಪ್ರಮುಖ ಅಂಗವಾಗಿರುವ ಕಾರ್ಯಾಂಗ ದಲ್ಲಿರುವ ನೌಕರರು ಆತ್ಮಸಾಕ್ಷಿಯಾಗಿ ಕೆಲಸ ಮಾಡಿ ಸರ್ಕಾರದ ಯೋಜನೆಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪ್ರಾಧ್ಯಾಪಕ ಆರ್.ಆರ್.ಬಿರಾದಾರ ಮಾತನಾಡಿ, ದೇಶದಲ್ಲಿ ಶ್ರೀಮಂತ ಸಂಸ್ಕೃತಿ ಹೊಂದಿದ ಗಾಣಿಗ ಸಮುದಾಯದ ಜನರು ಶ್ರಮಜೀವಿಗಳು ಎಂದು ಹೇಳಿದರು.
ಅಖಿಲ ಭಾರತ ಗಾಣಿಗ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಗಾಣಿಗ ಸಮುದಾಯದ ಸಂಘಟನೆ ಜೊತೆಗೆ ಸುತ್ತ-ಮುತ್ತಲೂ ಅಸಂಘಟನೆಗೆ ಹುಟ್ಟು ಹಾಕುವ ಗುಂಪು ಇದ್ದೆ ಇರುತ್ತದೆ ಅದಕ್ಕೆ ತಲೆಕೆಡಿಸಿಕೊಳ್ಳದೇ ಗಾಣಿಗ ಸಮಾಜದಿಂದ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರವನ್ನು ಪ್ರಾರಂಭಿಸುವವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ದಯಾಸಾಗರ ಪಾಟೀಲ ಮಾತನಾಡಿ, ರಾಜ್ಯದಾದ್ಯಂತ 20ರಷ್ಟು ಶಾಸಕರಾಗಿ ಆಯ್ಕೆಗೊಳ್ಳುವಷ್ಟು ಜನಸಂಖ್ಯೆ ಹೊಂದಿದ್ದರೂ ಒಂದಿಬ್ಬರು ಮಾತ್ರ ಶಾಸಕರಾಗುವುದು ನೋಡಿದರೆ ಈ ಸಮಾಜದಲ್ಲಿ ಸಂಘಟನೆ ಇಲ್ಲದಿರುವುದು ಎತ್ತಿ ತೋರಿಸುತ್ತದೆ. ಈ ದಿಸೆಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಗಾಣಿಗ ಸಮಾವೇಶಗಳು ಹಮ್ಮಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಗಾಣಿಗ ನೌಕರರ ಕ್ಷೇಮಾಭಿವೃದ್ದಿ ಸಂಘ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಮಾತನಾಡಿ, ನಮ್ಮ ಸಮುದಾಯಕ್ಕೆ ನೀತಿ ಇದೆ ಆದರೆ ನೇತಾರ ಇಲ್ಲ. ರಾಜಕಾರಣಿ ಹೊರತುಪಡಿಸಿದ ನೇತಾರರ ಅಗತ್ಯತೆ ಇದೆ ಅಲ್ಲದೆ ಗಾಣಿಗ ಒಳಪಂಗಡಗಳು ಒಂದುಗೂಡಬೇಕು. ಅಂದಾಗಲೇ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ಆಶಯ ವ್ಯಕ್ತಪಡಿಸಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ.ಪಾಟೀಲ, ಸಾನ್ನಿಧ್ಯ ವಹಿಸಿದ್ದ ವಿಜಯಪುರ ವನಶ್ರೀ ಸಂಸ್ಥಾನಮಠದ ಜಯಬಸವ ಕುಮಾರ ಸ್ವಾಮೀಜಿ, ಸೋಮಜಾಳದ ಅಮೃತಲಿಂಗ ಸ್ವಾಮೀಜಿ, ಕೋಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಚಾಳಕಾಪೂರ ಸಿದ್ದಾರೂಢಮಠದ ಶಂಕರಾನಂದ ಸ್ವಾಮೀಜಿ ಮಾತನಾಡಿದರು.
ವಿಧಾನಪರಿಷತ್ ಮಾಜಿ ಸದಸ್ಯ ಬಿ.ಜಿ.ಪಾಟೀಲ ಹಲಸಂಗಿ, ಗಾಣಿಗ ನೌಕರರ ಸಂಘದ ಸಂಸ್ಥಾಪಕ ತಿಪ್ಪಣ್ಣ ಮಜ್ಜಿಗಿ, ಗಾಣಿಗ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಅರಕೇರಿ, ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಣ್ಣ ಮನಗೂಳಿ ಮನ್ನಾಪೂರ, ಗುರಣ್ಣಗೌಡ ಪಾಟೀಲ, ಬಿ.ಎಚ್.ಬಿರಾದಾರ, ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ನಿಂಗರಾಜ ಬಗಲಿ, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ಆಗಮಿಸಿದ ಗಾಣಿಗ ಸಮುದಾಯದ ಮುಖಂಡರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಚಿಕ್ಕಸಿಂದಗಿ ಬೈಪಾಸ್ ಹತ್ತಿರದ ನೂತನ ವನಶ್ರೀ ಶಾಖಾಮಠದ ಆವರಣದಲ್ಲಿ ಬಿಜೆಪಿ ಮುಖಂಡರಾದ ಶ್ರೀಶೈಲಗೌಡ ಬಿರಾದಾರ ಹಾಗೂ ಸುರೇಶ ಮಳಲಿ ಗಾಣದೇವತೆಯ ಧ್ವಜಾರೋಹಣ ನೆರವೇರಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಣ್ಣ ಮನಗೂಳಿ ಮನ್ನಾಪೂರ, ಗುರನಗೌಡ ಪಾಟೀಲ, ನಿಂಗರಾಜ ಬಗಲಿ, ಶಿವಕುಮಾರ ಕಲ್ಲೂರ ಹಾಗೂ ಶ್ರೀಗಳು ಗಾಣ ದೇವತೆಯ ಮೆರವಣಿಗೆಗೆ ಚಾಲನೆ ನೀಡಿದರು
ಸಂಗನಗೌಡ ಹಚಡದ, ಸಿಎನ್.ಶಿರಕನಳ್ಳಿ ನಿರೂಪಿಸಿದರು.