ಕನ್ನಡ ಸಾಹಿತ್ಯ ಪರಿಷತ್. ಜಿಲ್ಲಾ ಘಟಕದ ವತಿಯಿಂದ ದಿ. ಜ್ಯೋತಿ ಮೂಗಿ ದತ್ತಿ ಉಪನ್ಯಾಸ ಕಾರ್ಯಕ್ರಮ
ಕುಟುಂಬದ ಆರ್ಥಿಕ ಭದ್ರತೆಯ ಹಿಡಿತ ಮಹಿಳೆಯ ಕೈಯಲ್ಲಿದೆ. ಮಹಿಳೆ ತನ್ನ ಏಕಾಗ್ರತೆಯ ದುಡಿಮೆಯಿಂದ ಕುಟುಂಬ ಸೇರಿದಂತೆ ದೇಶವೇ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಆರ್ಥಿಕವಾಗಿ ಸುಭದ್ರತೆಯತ್ತ ಸಾಗಬಹುದು ಎಂದು ಅವರ ದಿ.13 ರಂದು ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಬೆಳಗಾವಿ ಕಸಾಪ ಜಿಲ್ಲಾ ಘಟಕದ ವತಿಯಿಂದ ದಿ. ಜ್ಯೋತಿ ಮೂಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಳಗಾವಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಬಸಮ್ಮ ಗಂಗನಳ್ಳಿ ಹೇಳಿದರು.
‘ಆರ್ಥಿಕ ಸ್ವಾವಲಂಬನೆ ಮತ್ತು ಉದ್ಯಮಶೀಲತೆಗೆ ಮಹಿಳೆಯರ ಕೊಡುಗೆ ‘ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆ ತರಕಾರಿ ಮಾರಾಟ,ಗಾರ್ತಿ ಕೆಲಸ ಕಸೂತಿ, ಬಟ್ಟೆ ಕೆಲಸ ಗೃಹೋಪಯೋಗಿ ವಸ್ತುಗಳ ತಯಾರಿಕೆ ಸ್ವಚ್ಛತೆ ಹಿಡಿದು ದೊಡ್ಡ ಕಂಪನಿಗಳನ್ನು ನಡೆಸುವ ನಿಟ್ಟಿನಲ್ಲಿ ತನ್ನದೇ ಆದ ದಾಪುಗಾಲು ಇಟ್ಟಿದ್ದಾಳೆ. ಮಹಿಳೆಯರು ಇತ್ತೀಚೆಗೆ ಕೃಷಿಯನ್ನೇ ಉದ್ಯಮ ಮಾಡಿಕೊಂಡಿದ್ದು ಮೌಲ್ಯವರ್ಧಿತವಾಗಿ ಬೆಳೆ ಮತ್ತು ವಸ್ತು ತಯಾರಿಸುವಂತೆ ಉದ್ದಿಮೆ ಮಾಡುವ ಹೆಜ್ಜೆ ಹಾಕಿದ್ದಾಳೆ. ಸಬಲೆ, ಸಖಿ, ಗೆಳತಿ, ಅಮ್ಮ, ಅಕ್ಕ ಇನ್ನಿತರ ಹೆಸರುಗಳಲ್ಲಿ ಅನೇಕ ಉದ್ಯಮಗಳನ್ನು ಮಹಿಳೆಯರೇ ಮುನ್ನಡೆಸಿ ಮಹಿಳಾ ಸಂಕುಲಕ್ಕೆ ಉದ್ಯೋಗ ಕೊಡುವತ್ತ ದಾಪುಗಾಲು ಹಾಕಿದ್ದಾರೆ. ದೇಶದ ಆರ್ಥಿಕ ಸುಭದ್ರತೆಯಲ್ಲೂ ಮಹಿಳೆಯರ ಕೊಡುಗೆ ಅನನ್ಯವಾಗಿದೆ ಎಂದು ಡಾ. ಗಂಗನಳ್ಳಿ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ. ಸಾ. ಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ ಮಾತನಾಡಿ ದತ್ತಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಮತ್ತು ಎಲ್ಲಾ ಆಯಾಮಗಳಲ್ಲಿ ಸಮಾಜ ಉಪಯೋಗಿ ಕೆಲಸದ ಜೊತೆಗೆ ಸಾಹಿತ್ಯ ಕ್ಷೇತ್ರ ಬೆಳೆಸುವ ಕಾರ್ಯ ನಿರಂತರವಾಗಿ ಸಾಗಿದೆ ಎಂದರು.
ಇದೇ ಸಂದರ್ಭದಲ್ಲಿ .ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿಗಳಾದ ಡಾ. ಗುರುದೇವಿ ಹುಲೆಪ್ಪನವರಮಠ ಮತ್ತು ನೀಲಗಂಗಾ ಚರಂತಿಮಠ ಮೂಗಿ ಮತ್ತು ಏಣಗಿ ಕುಟುಂಬದ ಸಾಹಿತ್ಯ ಸೇವೆ ಕುರಿತಾದ ತಮ್ಮ ಅನುಭವಗಳನ್ನು ಮತ್ತು ಯುವ ಪ್ರತಿಭೆಗಳಿಗೆ ಮಾರ್ಗದರ್ಶನದ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಕ. ಸಾ. ಪ. ಬೆಳಗಾವಿ ತಾಲೂಕು ಅಧ್ಯಕ್ಷ ಸುರೇಶ ಹಂಜಿ, ಸ.ರಾ. ಸುಳಕೂಡೆ, ಭಾರತಿ ಮಠದ,ಸುಶೀಲಾ ಗುರುವ, ಆರ್. ಬಿ ಬನಶಂಕರಿ,ಬಿ ಬಿ ಮಠಪತಿ, ನಿತಿನ ಮೆಣಸಿನಕಾಯಿ, ದಾನಮ್ಮ ಅಂಗಡಿ,ರಾಜನಂದ ಗಾರ್ಗಿ, ಗಂಗಮ್ಮ ಪಾಟೀಲ, ಮಹಾದೇವಿ ಪಾಟೀಲ, ಅನ್ನಪೂರ್ಣ ಕನೋಜ, ಬಾಳಗೌಡ ದೊಡ ಭಂಗಿ, ಸೇರಿದಂತೆ ಅನೇಕ ಸಾಹಿತ್ಯಸಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಯದರ್ಶಿ ವೀರಭದ್ರ ಅಂಗಡಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ಪರಿಚಯಿಸಿದರು ಮಲ್ಲಿಕಾರ್ಜುನ ಕೋಳಿ ನಿರೂಪಿಸಿದರು,ಶಿವಾನಂದ ತಲ್ಲೂರ ವಂದಿಸಿದರು.

