ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು ಬೋಧಿಸಬೇಕಾಗಿದೆ. ಆಗ ಮಾತ್ರ ವಿದ್ಯಾರ್ಥಿಗಳಲ್ಲಿ ಕಲಿಕೆ ಪರಿಣಾಮಕಾರಿಯಾಗಲು ಸಾಧ್ಯವಾಗುತ್ತದೆಂದು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಸ್ಥಾಪನಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅಣ್ಣಾಸಾಹೇಬ ಎಂ. ಗುರವ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಐಕ್ಯೂಎಸಿ ಘಟಕವು ಏರ್ಪಡಿಸಿದ ಭಾಷೆ, ಸಮಾಜ ವಿಜ್ಞಾನ, ವಾಣಿಜ್ಯ ಮತ್ತು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿನ ಆವಿಷ್ಕಾರ, ಆಚರಣೆ, ಪರಿಣಾಮ ಮತ್ತು ಸವಾಲುಗಳು ಎನ್ನುವ ಒಂದು ದಿನದ ರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಶಿಕ್ಷಕನು ತನ್ನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ರೂಢಿಸಿಕೊಂಡರೆ ವೃತ್ತಿಯಲ್ಲಿ ಪದೋನ್ನತಿಯ ಜೊತೆಗೆ ಸಮಾಜದಲ್ಲಿ ಎಲ್ಲರಿಂದ ಗೌರವಿಸಲ್ಪಡುತ್ತಾನೆ. ಇದಕ್ಕೆ ಉದಾಹರಣೆ ಎಂದರೆ ಒಂದು ಬರೆಯುವ ಬಾಲ್ ಪೆನ್ನು. ಈ ಪೆನ್ನನ್ನು ಗಮನಿಸಿದರೆ ಹೊರಗಿನ ದೇಹ ರಚನೆ ಪಾರದರ್ಶಕವಾಗಿದ್ದು, ಒಳಗಿನ ಮಸಿ ಇರುವ ರಿಫಿಲ್ ಕಾಣುವಂತೆ ತಯಾರಿಸುವ ಜಾಣ್ಮೆಯೇ ಆವಿಷ್ಕಾರ. ಈ ಆವಿಷ್ಕಾರದಿಂದ ರಿಫಿಲ್ನಲ್ಲಿರುವ ಮಸಿ ಎಷ್ಟು ಖರ್ಚಾಗಿದೆ, ಎಷ್ಟು ಉಳಿದಿದೆ ಎಂದು ಗೊತ್ತಾಗುವಂತೆ ಮಾಡುವ ಸೃಜನಶೀಲತೆ ಇದ್ದಾಗ ಮಾತ್ರ ಆ ವಸ್ತು ಸಮಾಜದಲ್ಲಿ ಎಲ್ಲರ ಬಳಕೆಯ ವಸ್ತುವಾಗಿ ಜನಮನ್ನಣೆ ಗಳಿಸುತ್ತದೆ ಎಂದರು.
ತರಗತಿಯಲ್ಲಿ ಶಿಕ್ಷಕನು ಪ್ರತಿದಿನವೂ ಹೊಸ ಆವಿಷ್ಕಾರದ ಚಿಂತನೆಗಳೊಂದಿಗೆ ತರಗತಿಯನ್ನು ಪ್ರವೇಶಿಸಬೇಕು. ಪ್ರಸ್ತುತ ದಿನದಲ್ಲಿ ಆವಿಷ್ಕಾರ ಮತ್ತು ಶಿಕ್ಷಣದಲ್ಲಿ ದೊಡ್ಡ ಅಂತರ ನಿರ್ಮಾಣವಾಗಿದೆ. ಈ ಅಂತರ ಅಳಿಯಬೇಕಾದರೆ ನಾವಿನ್ಯಪೂರ್ಣ ಚಿಂತನೆ, ತಂತ್ರಜ್ಞಾನದ ಬಳಕೆಯಿಂದ ಪರಿಣಾಮಕಾರಿ ಬೋಧನೆ ಸಾಧ್ಯವಾಗುವ ಮೂಲಕ ಪರಿಪೂರ್ಣತೆ ಸಾಧಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ. ಮಾರುತಿ ಎ. ದೊಂಬರ ವಹಿಸಿದ್ದರು, ಸೌಮ್ಯಾ ಪರದೇಶಿ ಪ್ರಾರ್ಥಿಸಿದರು, ಪ್ರೊ. ಶಿವಲೀಲಾ ಅರಹುಣಸಿ ಸ್ವಾಗತಿಸಿದರು, ಪ್ರೊ. ಆಫ್ರೀನ್ ಹಳ್ಳೂರ ಅತಿಥಿಗಳನ್ನು ಪರಿಚಯಿಸಿದರು, ಪ್ರೊ. ಗೌರಿ ಅಕ್ಕಿ ವಂದಿಸಿದರು, ಡಾ. ಎನ್.ಎ.ಕೌಜಗೇರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಈ ವೆಬಿನಾರ್ನಲ್ಲಿ 116ಜನ ಭಾಗವಹಿಸಿ ಪ್ರಬಂಧ ಮಂಡಿಸಿದರು.
ನಾಡಿನ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ಪದವಿ ವಿದ್ಯಾರ್ಥಿಗಳು ಮತ್ತು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.