Homeಸುದ್ದಿಗಳುಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ

ಇತ್ತೀಚೆಗೆ ಶಾಲಾ ಮಕ್ಕಳನ್ನು ಶೌಚಾಲಯ ಸ್ವಚ್ಛ ಮಾಡಲು ಕೆಲವು ಶಾಲೆಗಳು ಬಳಸುತ್ತಿರುವ ಬಗ್ಗೆ ಬಂದ ವರದಿಗಳನ್ನು ನೋಡಿದರೆ ಈ ಶಾಲೆಗಳ ಮೇಲ್ವಿಚಾರಣೆ ಮಾಡುತ್ತಿರುವ ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರ ಬಲು ದೊಡ್ಡದು ಶಿಕ್ಷಣದ ಜೊತೆಗೇ ಮಕ್ಕಳ ರಕ್ಷಣೆಯ ಜವಾಬ್ದಾರಿಯೂ ಶಿಕ್ಷಣ ಕ್ಷೇತ್ರದ್ದಾಗಿದೆ. ಹಾಗೆ ನೋಡಿದರೆ ಸರ್ಕಾರದ ಇಲಾಖೆಗಳಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುವ ಇಲಾಖೆಗಳಲ್ಲಿ ಶಿಕ್ಷಣ ಇಲಾಖೆ ಪ್ರಥಮ ಸ್ಥಾನದಲ್ಲಿದೆಯೆನ್ನಬಹುದು. ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ ಉತ್ತಮ ನಾಗರಿಕರನ್ನಾಗಿ ಪರಿವರ್ತಿಸಬೇಕೆಂಬ ಉದ್ದೇಶದಿಂದ ಸರ್ಕಾರಗಳು ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲವನ್ನೂ ಉಚಿತವಾಗಿ ನೀಡುತ್ತವೆ. ಇದು ಸರ್ಕಾರಿ ಶಾಲೆಗಳಿಗಾದರೆ ಖಾಸಗಿ ಶಾಲೆಗಳಿಗೂ ಕೂಡ ಕೆಲವೊಂದು ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುತ್ತದೆ.

ಈ ವರ್ಷದ ಬಜೆಟ್ ನಲ್ಲಿ ಸರ್ಕಾರವು ಶಾಲೆಗಳ ಕಟ್ಟಡಗಳಿಗಾಗಿ ರೂ. 310 ಕೋಟಿ ಮೀಸಲಿಟ್ಟಿದೆ. 5775 ಶಾಲೆಗಳಲ್ಲಿ ಹೊಸ ಶೌಚಾಲಯಗಳ ನಿರ್ಮಾಣ, ಸುಮಾರು 3883 ಹಳೆಯ, ಶಿಥಿಲಗೊಂಡ ಹಾಗೂ ಮಳೆಯಿಂದ ಹಾನಿಗೊಳಗಾದ ಶಾಲೆಗಳ ಪುನರ್ ನಿರ್ಮಾಣಕ್ಕೆ 100 ಕೋಟಿ ರೂ. ನೀಡುವುದಾಗಿ ಸರ್ಕಾರ ಹೇಳಿಕೊಂಡಿದೆ. ಅಲ್ಲದೆ ಮಕ್ಕಳಿಗೆ ವಾರಕ್ಕೆರಡು ಬಾರಿ ತಿಂಡಿ ತಿನಿಸು, ಕಲಿಕಾ ಬಲವರ್ಧನೆ ಯೋಜನೆ ಅಡಿಯಲ್ಲಿ ವಿಶೇಷ ಅನುದಾನ,  ಕಲಿಕೆಯಲ್ಲಿ ಮಂದ ಇರುವ ಮಕ್ಕಳಿಗಾಗಿ ಮರು ಸಿಂಚನ ಯೋಜನೆ…..ಹೀಗೆ ಅನೇಕ ಯೋಜನೆಗಳ ಅಡಿಯಲ್ಲಿ ಶಿಕ್ಷಣದ ಬಲವರ್ಧನೆಗಾಗಿ ಸರ್ಕಾರದಿಂದ ಅಪಾರ ಪ್ರಮಾಣದ ಹಣ ಹರಿದು ಬರುತ್ತದೆ. ಶಿಕ್ಷಣದ ಹಕ್ಕು ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಶಾಲೆಗಳಿಗೆ ಅನುದಾನ ಬರುತ್ತದೆ. ಇದೆಲ್ಲ ಸದುಪಯೋಗವಾಗಬೇಕು. ಎಲ್ಲೆಲ್ಲಿ ಅವ್ಯವಹಾರ ನಡೆಯುತ್ತಿದೆಯೋ ಅಲ್ಲೆಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಂಕುಶ ಪ್ರಯೋಗ ಮಾಡಿ ಸರ್ಕಾರಿ ಅನುದಾನದ ದುರ್ಬಳಕೆ ತಡೆಗಟ್ಟಬೇಕು.

ಆದರೆ ಸರ್ಕಾರದ ಈ ಸೌಲಭ್ಯಗಳ ದುರುಪಯೋಗವಾಗುವುದೇ ಹೆಚ್ಚು. ಮಕ್ಕಳಿಗಾಗಿ ಕೊಡಲಾಗುವ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟದ ರೇಶನ್, ಕ್ರೀಡಾ ಪರಿಕರಗಳಲ್ಲಿ ಸ್ಥಳೀಯ ಪುಢಾರಿಗಳು ಕೈಹಾಕಿ ಬಾಚಿಕೊಳ್ಳುವ ಪ್ರಕರಣಗಳು ನಡೆಯುತ್ತವೆ. ಮುಖ್ಯ ಶಿಕ್ಷಕರಾದವರು ಕೂಡ ತಮಗೆ ಸಾಧ್ಯವಾದಷ್ಟು ಬಾಚಿಕೊಂಡು ಅರ್ಹ ಫಲಾನುಭವಿಗಳಾದ ಶಾಲಾ ಮಕ್ಕಳಿಗೆ ವಂಚನೆ ಮಾಡುವ ಪ್ರಕರಣಗಳು ನಡೆಯುತ್ತವೆ. ಇದೆಲ್ಲ ಅಲ್ಲಿನ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಾರದೆ ನಡೆಯಲಾರದು. ಅವರೂ ಕೂಡ ಸ್ಥಳೀಯ ಪುಢಾರಿಗಳ ಮರ್ಜಿ ಕಾಯುವುದಕ್ಕೋ, ಅವರ ಕೃಪೆಗಾಗಿಯೋ ಎಲ್ಲವನ್ನೂ ನೋಡಿಯೂ ಸುಮ್ಮನೆ ಇರಬಾರದು ಹಾಗೇನಾದರೂ ಭ್ರಷ್ಟಾಚಾರಕ್ಕೆ ಇವರು ಕುಮ್ಮಕ್ಕು ಕೊಟ್ಟರೆ ಮಕ್ಕಳ ಭವಿಷ್ಯಕ್ಕೆ ಅಪಚಾರ ಎಸಗಿದಂತಾಗುತ್ತದೆ.

ಇದರ ಜೊತೆಗೇ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆಯೂ ಇಲಾಖೆ ಗಮನಹರಿಸಬೇಕಾದ ಅವಶ್ಯಕತೆಯಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶೋಷಣೆಗೆ ಒಳಗಾಗುವವರು ಶಾಲೆ ಕಲಿಯುವ ಮಕ್ಕಳು ಹಾಗೂ ಪಾಲಕರು ಎಂಬುದನ್ನು ಶಿಕ್ಷಣಾಧಿಕಾರಿಗಳು ಮರೆಯಬಾರದು. ಕೆಲವು ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿರಬಹುದು, ಶಾಲೆಯ ಮುಂದಿನ ರಸ್ತೆಗೆ ಮಕ್ಕಳಿಂದ ಮಣ್ಣು ಹಾಕಿಸಿರಬಹುದು ಅಥವಾ ಇನ್ನೇನನ್ನೋ ಮಾಡಿಸಿರಬಹುದು. ಶಾಲೆಯನ್ನು ಅಪಾಯದ ಜಾಗದಲ್ಲಿ, ಸುತ್ತಮುತ್ತ ಬೆಳೆ ಇರುವ ಹೊಲದಲ್ಲಿ ಶಾಲೆ ಆರಂಭಿಸಿರಬಹುದು. ಇದರಿಂದ ಹೆಜ್ಜೆ ಹೆಜ್ಜೆಗೂ ಮಕ್ಕಳ ಜೀವಕ್ಕೆ ಅಪಾಯವಿರುತ್ತದೆ. ಆ ಬಗ್ಗೆ ದೂರು ಬಂದಾಗ ಆಯಾ ಶಾಲೆ ( ಅದು ಸರ್ಕಾರಿ ಇರಲಿ,  ಖಾಸಗಿ ಶಾಲೆ ಇರಲಿ ) ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ್ತವ್ಯ. ಯಾಕೆಂದರೆ, ಯಾವುದೇ ಶಾಲೆಯ ವಿರುದ್ಧ ದೂರನ್ನು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ, ಅಪರ ಆಯುಕ್ತರಿಗೆ ಅಥವಾ ಆಯುಕ್ತರಿಗೇ ಸಲ್ಲಿಸಿದರೂ ಅವರು ವರದಿ ಕೇಳುವುದು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದಲೇ ! ಇಂಥ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ, ಯಾವುದೇ ಪುಢಾರಿಯ ಮುಲಾಜಿಗೆ ಒಳಗಾಗದೆ ಈ ಅಧಿಕಾರಿ ಕ್ರಮಕ್ಕೆ ಮುಂದಾದಾಗ ಮಾತ್ರ ಶಾಲಾ ಮಕ್ಕಳು ನಿರಾತಂಕವಾಗಿ ಹಾಗೂ ನಿರಪಾಯವಾಗಿ ಶಿಕ್ಷಣ ಕಲಿಯುವಂತಾಗುತ್ತದೆ.


ಉಮೇಶ ಬೆಳಕೂಡ, ಮೂಡಲಗಿ

೯೪೪೮೮೬೩೩೦೯

RELATED ARTICLES

Most Popular

error: Content is protected !!
Join WhatsApp Group