Homeಸುದ್ದಿಗಳುರಾಷ್ಟ್ರದ ಸ್ವಾತಂತ್ರ್ಯ ಹಾಗೂ ಸಮಗ್ರತೆಯ ರಕ್ಷಣೆಯ ಜವಾಬ್ದಾರಿ ಯುವಜನತೆಯ ಮೇಲಿದೆ - ಡಾ.ಭೇರ್ಯ ರಾಮಕುಮಾರ್

ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಸಮಗ್ರತೆಯ ರಕ್ಷಣೆಯ ಜವಾಬ್ದಾರಿ ಯುವಜನತೆಯ ಮೇಲಿದೆ – ಡಾ.ಭೇರ್ಯ ರಾಮಕುಮಾರ್

ಭಾರತಕ್ಕೆ ಸ್ವಾತಂತ್ರ ದೊರಕಿಸಲು ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ತಾತ್ಯಾಟೋಪೆ ಮೊದಲಾದವರು ತಮ್ಮ ಜೀವನವನ್ನೇ ತ್ಯಾಗ ಮಾಡಿದರು.ಲಕ್ಷಾಂತರ ಯುವಜನರು ತಮ್ಮ ವಿದ್ಯಾಭ್ಯಾಸ, ಉದ್ಯೋಗ, ಕುಟುಂಬವೆಲ್ಲವನ್ನೂ ತ್ಯಜಿಸಿ,ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂತಹ ಸ್ವಾತಂತ್ರ್ಯ ಹಾಗೂ ಸಮಗ್ರತೆ ರಕ್ಷಿಸಿಕೊಳ್ಳುವ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ಹಿರಿಯ ಸಾಹಿತಿ,ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.

ಕೆ.ಅರ್.ನಗರದ ಶಿಕ್ಷಕರ ಭವನದಲ್ಲಿ ಇಂದು ನಡೆದ‌ ಭಗತ್ ಸಿಂಗ್  ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು  ಯುವಜನರು,ಸೈನಿಕರು, ರೈತರು ರಾಷ್ಟ್ರದ  ಭವಿಷ್ಯದ ನಿರ್ಮಾತೃಗಳು. ಇಂದು ರೈತ ಬೆಳೆದ ಬೆಳೆಗಳ  ಲಾಭ ಮದ್ಯವರ್ತಿಗಳ ಪಾಲಾಗುತ್ತಿದೆ. ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆಯುವ ಬೆಳೆಗಳಿಗೆ  ಪೂರಕವಾದ ಕೈಗಾರಿಕೆಗಳನ್ನು ಆರಂಬಿಸಬೇಕು. ಆ ಮೂಲಕ ರೈತರ  ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕರೆ ನೀಡಿದರು.

ಎಲ್ಲ ಯುವ ಜನರೂ ತಮ್ಮ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆ ಬಳಸಬೇಕು. ಬ್ಯಾಂಕ್ ಚೆಕ್ ಗಳಲ್ಲಿ, ಅಂಚೆ ಕಚೇರಿಯಲ್ಲಿ ಮನಿಆರ್ಡರ್ ಗಳು, ಉಳಿತಾಯ ಖಾತೆ ಸಂಬಂದಿಸಿದಂತೆ ಕನ್ನಡ ಭಾಷೆಯನ್ನೇ ಕಡ್ಡಾಯವಾಗಿ ಬಳಸಬೇಕು ಎಂದು ಭೇರ್ಯ ರಾಮಕುಮಾರ್ ಕರೆ ನೀಡಿದರು.

ಗ್ರಾಮೀಣ ಪ್ರದೇಶಗಳ ಪರಿಸರ,ಆರೋಗ್ಯ, ಶಿಕ್ಷಣ  ಸಂರಕ್ಷಣೆಗೆ ಶ್ರಮಿಸುತ್ತಿರುವ ಭಗತ್ ಸಿಂಗ್ ಫೌಂಡೇಶನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದವರು ನುಡಿದರು.

ಕಾವೇರಿ ಗ್ರಾಮೀಣ ಬ್ಯಾಂಕ್ ನ ಕೆ.ಆರ್.ನಗರ ಶಾಖೆಯ ವ್ಯವಸ್ಥಾಪಕರಾದ ಷಡಕ್ಷರಿ ಅವರು ಮಾತನಾಡಿ  ಗ್ರಾಮೀಣ ಜನತೆ  ಸ್ವಾವಲಂಬಿಗಳಾಗಬೇಕು. ತಮ್ಮ ಗ್ರಾಮಗಳಲ್ಲಿ ದೊರೆಯುವ ಮೂಲವಸ್ತುಗಳನ್ನು ಬಳಸಿ ಜೀವನ ಮಾಡಬೇಕು. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕೆಂದು ನುಡಿದರು.

ಕ್ರಾಂತಿವೀರ ಭಗತ್ ಸಿಂಗ್ ಜೀವನ, ಹೋರಾಟ ಹಾಗೂ ಸಾಧನೆ ಕುರಿತಂತೆ ಸಂಪನ್ಮೂಲ ವ್ಯಕ್ತಿ ಶಶಿ ಕುಮಾರ್, ಫೌಂಡೇಶನ್ ಪದಾಧಿಕಾರಿ ಕಿರಣ್ ಕುಮಾರ್ ಮಾತನಾಡಿದರು. ರಾಷ್ಟ್ರೀಯ  ಖ್ಯಾತಿಯ ಗಾಯಕರಾದ ಅಮ್ಮ ರಾಮಚಂದ್ರ ,ನಿವೃತ್ತ ಸೈನಿಕರಾದ ಮಧುಕುಮಾರ್ ಸೇರಿದಂತೆ ಮೂವರು ಸೈನಿಕರು ಹಾಗೂ ನಾಲ್ಕು ಮಂದಿ ಆಶಾ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಗಾಯಕರಾದ ಅಮ್ಮ ರಾಮಚಂದ್ರ ಅವರು ಕ್ರಾಂತಿ ಗೀತೆಗಳನ್ನು ಹಾಡಿದರು.ಸಂಸ್ಥೆಯ ಅಧ್ಯಕ್ಷರಾದ ಯೋಗೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಕ್ಷಿತ್ ಸ್ವಾಗತಿಸಿದರು. ಚೆಲುವನ್ ಸಂಸ್ಥೆಯ  ಇದುವರೆಗಿನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.ಕೃಷ್ಣಯ್ಯ ವಂದಿಸಿದರು.ಕಾರ್ಯಕ್ರಮಕ್ಕೆ ಮುಂ ಚೆ   ಕ್ರಾಂತಿವೀರ ಭಗತ್ ಸಿಂಗ್ ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

RELATED ARTICLES

Most Popular

error: Content is protected !!
Join WhatsApp Group