ಧಾರವಾಡ: ತಾಲೂಕಿನ ಹೆಬ್ಬಳ್ಳಿ ಶಿವಾನಂದಮಠದ ಲಿಂಗೈಕ್ಯ ಶ್ರೀವಾಸುದೇವ ಸ್ವಾಮೀಜಿ ಹಾಗೂ ಲಿಂಗೈಕ್ಯ ಶ್ರೀಬಸವರಾಜ ಸ್ವಾಮೀಜಿ ಪುಣ್ಯಾರಾಧನೆ ನಿಮಿತ್ತ 10 ದಿನಗಳ ಅಧ್ಯಾತ್ಮ ಚಿಂತನ ಸಮಾವೇಶ ಸೋಮವಾರ (ಜ.24 ರಂದು) ಹೆಬ್ಬಳ್ಳಿಯಲ್ಲಿ ಆರಂಭಗೊಳ್ಳಲಿದೆ.
ಹೆಬ್ಬಳ್ಳಿ ಶಿವಾನಂದಮಠದ ಪ್ರಸ್ತುತ ಶ್ರೀಗಳಾದ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹರಳಕಟ್ಟಿ ಶಿವಾನಂದಮಠದ ಶ್ರೀನಿಜಗುಣ ಸ್ವಾಮೀಜಿ ಸೋಮವಾರ ಮುಂಜಾನೆ 8 ಗಂಟೆಗೆ ಪ್ರಣವ ಧ್ವಜಾರೋಹಣ ಮಾಡಲಿದ್ದು, ಸಂಜೆ 7 ಗಂಟೆಗೆ ಹೆಬ್ಬಳ್ಳಿಯ ಶ್ರೀದತ್ತಾವಧೂತ ಮಹಾರಾಜರು ಈ ಧರ್ಮ ಸಮಾವೇಶವನ್ನು ಉದ್ಘಾಟಿಸುವರು. ಗದಗ ನಗರದ ಶಿವಶರಣೆ ಮುಕ್ತಾತಾಯಿ ಹಾಗೂ ಕರಿಕಟ್ಟಿಯ ಗುರುನಾಥ ಶಾಸ್ತ್ರಿಗಳು ಜ.24 ರಿಂದ ಫೆ.1 ರವರೆಗೆ ನಿತ್ಯ ಪ್ರಾತಃಕಾಲ 8 ಗಂಟೆಯಿಂದ 10 ಗಂಟೆಯವೆರೆಗೆ ಹಾಗೂ ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ಅಧ್ಯಾತ್ಮ ವಿಷಯಗಳ ಮೇಲೆ ಪ್ರವಚನ-ಕೀರ್ತನ ನೀಡುವರು.
ಉಪದೇಶಾಮೃತ:
ಹೆಬ್ಬಳ್ಳಿ ಶ್ರೀಯೋಗಾನಂದ ಸ್ವಾಮೀಜಿ ಜೊತೆಗೆ ಕಾಡರಕೊಪ್ಪ, ಇಬ್ರಾಹಿಂಪೂರ, ಬೈಲಹೊಂಗಲ, ಕರೀಕಟ್ಟಿ, ದೇವರಹುಬ್ಬಳ್ಳಿ, ಸಾಲಗಾಂವ, ಹಳಿಯಾಳ ಬಳಿಯ ಕೆ.ಕೆ.ಹಳ್ಳಿ, ಲೋಕಾಪೂರ, ಮಂದ್ರೂಪ, ಹರಳಕಟ್ಟಿ, ಹುಬ್ಬಳ್ಳಿ, ದಾದನಟ್ಟಿ, ಕೆಲಗೇರಿ, ಬಳ್ಳೂರ, ನಿರ್ವಾಣಹಟ್ಟಿ, ಕುಸೂಗಲ್ಲ, ರನ್ನತಿಮ್ಮಾಪೂರ, ಸಂಗಧರಿ, ಗದಗ ನಗರದ ವಿವಿಧ ಅದ್ವೈತಮಠಗಳ ಸ್ವಾಮೀಜಿಯವರು, ಶಿವಶರಣೆಯರು, ವಿವಿಧ ಸಾಧಕ ಶ್ರೀಗಳು 10 ದಿನಗಳ ಸಮಾವೇಶದಲ್ಲಿ ಪಾಲ್ಗೊಂಡು ಉಪದೇಶಾಮೃತ ನೀಡುವರು.
ರಥೋತ್ಸವ:
ಗದಗ ಶಿವಾನಂದಮಠದ ಪೀಠಾಧಿಪತಿ ಶ್ರೀಅಭಿನವ ಶಿವಾನಂದ ಸ್ವಾಮೀಜಿ ಹಾಗೂ ಶ್ರೀಸದಾಶಿವಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಾಡಿನ ಅನೇಕ ಭಾಗಗಳ ಹರ-ಗುರು ಚರಮೂರ್ತಿಗಳ ನೇತೃತ್ವದಲ್ಲಿ ಫೆ.2 ರಂದು ಸಂಜೆ 5 ಗಂಟೆಗೆ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ರಥೋತ್ಸವ ಜರುಗುವುದು. ಅದೇ ದಿನ ಪ್ರಾತಃಕಾಲದಲ್ಲಿ ಲಿಂಗೈಕ್ಯ ಶ್ರೀವಾಸುದೇವ ಸ್ವಾಮೀಜಿ ಹಾಗೂ ಲಿಂಗೈಕ್ಯ ಶ್ರೀಬಸವರಾಜ ಸ್ವಾಮೀಜಿಯವರ ಗದ್ದುಗೆಗಳಿಗೆ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಜರುಗುದು. ಅಪರಾಹ್ನ ಪ್ರಸಾದ ವಿತರಣೆ ನಡೆಯುವುದು. ನಾವಲಗಟ್ಟಿಯ ಮಾನಪ್ಪ ಬಡಿಗೇರ, ಹೊಳೆಹೊಸೂರಿನ ಗಂಗಾಧರ ಕುಂಬಾರ ಹಾಗೂ ಸಂಗಡಿಗರಿಂದ ನಿತ್ಯವೂ ಸಂಗೀತಸೇವೆ ನಡೆಯಲಿದೆ ಎಂದು ಸಮಾವೇಶದ ಸಂಚಾಲಕ ದ್ಯಾಮನಗೌಡ ಪಾಟೀಲ ಹಾಗೂ ಶಿವಾನಂದ ಹೂಗಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದರು.