ಬೈಲಹೊಂಗಲ: ಅನೇಕ ಮಾನವೀಯ ಮೌಲ್ಯಗಳ ಆಗರವಾಗಿರುವ ಬಸವಾದಿ ಶರಣರ ವಚನಗಳು ವ್ಯಕ್ತಿತ್ವವನ್ನು ವಿಕಸಿತಗೊಳಿಸುತ್ತವೆ ಎಂದು ಉದ್ಯಮಿ ಶಿವರಾಜ ಪಟ್ಟಣಶೆಟ್ಟಿ ಹೇಳಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಸಕಲ ಜೀವಿಗಳಿಗೆ ಒಳಿತನ್ನು ಬಯಸುವ ವಿಶ್ವವಿಶಾಲ ಭಾವನೆಯನ್ನು ಹೊಂದಿದ್ದ ಶರಣರ ಚಿಂತನೆಗಳು, ನುಡಿದಂತೆ ನಡೆದು ತೋರಿಸಿದ ಅವರ ಅದರ್ಶ ಎಲ್ಲರಿಗೂ ಮಾದರಿಯಾಗಬೇಕು ಎಂದರು. ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ, ವಚನ ಸಾಹಿತ್ಯದಲ್ಲಿರುವ ಸಾತ್ವಿಕ ವಿಚಾರಗಳನ್ನು, ತಾತ್ವಿಕ ಸಂದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 12 ನೆಯ ಶತಮಾನದಲ್ಲಿ ಸಮಾನತೆಯ ಅಡಿಪಾಯದ ಮೇಲೆ ಕಲ್ಯಾಣ ಸಮಾಜವನ್ನು ನಿರ್ಮಿಸಿದ ಮಹಾನ್ ದಾರ್ಶನಿಕ ಬಸವಣ್ಣನವರ ದೂರದೃಷ್ಟಿ ಅವರ ಶ್ರೇಷ್ಠತೆಯ ಪ್ರತೀಕ ಎಂದರು. ವಚನಗಳು ಇಂದಿನ ಯುವಕರಿಗೆ ಸ್ಪೂರ್ತಿಯ ಸೆಲೆಗಳಾಗಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಜಗತ್ತಿನಲ್ಲಿಯೇ ನಿಜವಾದ ಸಂಪತ್ತಾದ ಜ್ಞಾನದ ಹಸಿವು ಇರುವ ವಿದ್ಯಾರ್ಥಿಗಳು ಮಾತ್ರ ದೊಡ್ಡ ಸಾಧನೆ ಮಾಡಬಲ್ಲರು ಎಂದು ಹೇಳಿದರು. ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೇ ಅಂತರಂಗದಲ್ಲಿ ಅರಿವಿನ ಬೆಳಕು ಮೂಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿನಾಯಕ ಬಡಿಗೇರ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ಹುಣಶೀಕಟ್ಟಿ, ಗ್ರಾಮಸ್ಥರಾದ ಬಾಳಪ್ಪ ನಾಗಣ್ಣವರ, ಮಲ್ಲಪ್ಪ ಹೊಂಗಲ, ಬಸವರಾಜ ರುದ್ರಾಪೂರ, ದೇಮಪ್ಪ ಜೋಗಿಗುಡ್ಡ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ಹೇಮಲತಾ ಪುರಾಣಿಕ, ಮಂಜುಳಾ ಕಾಳಿ, ವೀರೇಂದ್ರ ಪಾಟೀಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಸಂತೋಷ ಸಾಳುಂಕೆ ಸ್ವಾಗತಿಸಿದರು. ಭಾಗ್ಯಶ್ರೀ ಬಡಿಗೇರ ನಿರೂಪಿಸಿದರು. ಲಕ್ಷ್ಮೀ ಶೀಗಿಹಳ್ಳಿಮಠ ವಂದಿಸಿದರು.

