ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ ಕುಮಾರಮಹಾಸ್ವಾಮಿಗಳ ಕುರಿತಾದ ಚಲನಚಿತ್ರ ವಿರಾಟಪುರ ವಿರಾಗಿ ಚಿತ್ರ ಈಗಾಗಲೇ ವಿನ್ಯಾಸಗೊಂಡಿದ್ದು ಅದರ ಪ್ರಚಾರಾರ್ಥವಾಗಿ ಅನೇಕ ಮಠಾಧೀಶರ ನೇತೃತ್ವದಲ್ಲಿ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕಾ ಪದಾಧಿಕಾರಿಗಳ ಸಹಯೋಗದಲ್ಲಿ ವಾಲ್ ಪೋಸ್ಟರ್ ( ಗೋಡೆ ಚಿತ್ರ) ಬಿಡುಗಡೆಗೊಳಿಸಿ ಮಾತನಾಡಿ, ಅಂದು ಜನರು ಊಟಕ್ಕೂ ಪರಿತಪಿಸುವ ಸಂದರ್ಭದಲ್ಲಿ ಸುಮಾರು 8 ಗಂಟೆಗಳ ಕಾಲ ಕಂತಿ ಭಿಕ್ಷೆ ಮಾಡಿ ಸಮಾಜವನ್ನು ಬದುಕಿಸಿ ಶಿಕ್ಷಣದ ಕ್ರಾಂತಿಯನ್ನೆ ಎಬ್ಬಿಸದಿದ್ದರೆ ನಾವೆಲ್ಲ ಶಿಕ್ಷಣದಿಂದ ವಂಚಿತರಾಗುತ್ತಿದ್ದೆವು ಎಂದರು.
ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು ಮಾತನಾಡಿ,ಹಾನಗಲ್ ಕುಮಾರ ಮಹಾಸ್ವಾಮಿಗಳೆಂದರೆ ಕರ್ನಾಟಕದ ಪವರ್ ಇದ್ದಹಾಗೆ ಎನ್ನುವುದಕ್ಕೆ ಅವರು ಮಾಡಿದ ಪವಾಡಗಳೇ ನಿದರ್ಶನ. ಕುಮಾರ ಶಿವಯೋಗಿಗಳ ಹಾಗೂ ಸಿಂದಗಿ ಮಠಕ್ಕೆ ಅವಿನಾಭಾವ ಸಂಬಂಧವಿತ್ತು. ಅವರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯ ಅವರ ಚರಿತ್ರೆಯನ್ನು ಮೈಗೂಡಿಸಿಕೊಂಡು ನಡೆಯಬೇಕು ಎಂದು ಸಲಹೆ ನೀಡಿದರು.
ವಿರಕ್ತ ಮಠದ ಬಸವಪ್ರಭು ದೇವರು, ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮಿಗಳು, ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕಾಧ್ಯಕ್ಷ ಅಶೋಕ ವಾರದ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚೆನ್ನಪ್ಪ ಕತ್ತಿ, ಸತೀಶ ಕವಲಗಿ, ಕಿರಣ ಕೋರಿ, ಮಹಾಂತೇಶ ಪಟ್ಟಣಶೆಟ್ಟಿ, ಶಕುಂತಲಾ ಹಿರೇಮಠ, ರಮೇಶ ಜೋಗುರ, ಮಾದೇವಿ ಹಿರೇಮಠ, ಸದಾಶಿವ ಕುಂಬಾರ, ಮಾದೇವಿ ಬಮ್ಮಣ್ಣಿ ಸೇರಿದಂತೆ ಅನೇಕರಿದ್ದರು.