ಸಿಂದಗಿ; ನಾವು ನಮ್ಮ ಮಕ್ಕಳ ಹುಟ್ಟು ಹಬ್ಬ ಆಚರಣೆಗೆ ಆಡಂಬರ ಆಚರಣೆ ಮಾಡುವುದಕ್ಕಿಂದ ಅವರ ಹೆಸರಲ್ಲಿ ಒಂದೊಂದು ಗಿಡ ನೆಟ್ಟರೆ ಮಾತ್ರ ಉತ್ತಮ ಪರಿಸರ ಪಡೆಯಲು ಸಾಧ್ಯ. ಗಿಡ ಇದ್ದರೆ ಮಳೆ, ಮಳೆ ಇದ್ದರೆ ಬೆಳೆ, ಬೆಳೆ ಇದ್ದರೆ ಮಾತ್ರ ರೈತ ಎಂದು ಸಿಂದಗಿ ವಲಯ ಉಪ ಅರಣ್ಯಾಧಿಕಾರಿಗಳಾದ ಶ್ರೀಮತಿ ಪ್ರಿಯಾಂಕ ಹೇಳಿದರು.
ಪಟ್ಟಣದ ಬಸವ ನಗರದಲ್ಲಿರುವ ಸಂಗಮ ಸಂಸ್ಥೆಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಮಕ್ಕಳು ನಮಗೆ ನೋಡುತ್ತಾರೆ ಎಂಬ ನಂಬಿಕೆ ನಮಗೆ ಇಲ್ಲ. ಆದರೆ ನಾವು ಒಂದು ಗಿಡ ನೆಟ್ಟು ಪಾಲನೆ ಪೋಷಣೆ ಮಾಡಿದರೆ ಅದು ಖಂಡಿತ ನಮಗೆ ನೆರಳಿನ ಜೊತೆ ಹಣ್ಣುಗಳು, ಸ್ವಚ್ಚ ಆಮ್ಲಜನಕ ಕೊಡುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಮಾತನಾಡಿ, ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಮಾತ್ರ ನಾವು ಉತ್ತಮವಾದ ಪರಿಸರ ನಿರ್ಮಿಸಲು ಸಾಧ್ಯ ಇಲ್ಲದಿದ್ದರೆ ವಿವಿಧ ರೀತಿಯ ರೋಗಗಳು ಬರಲು ನಾವೆ ಕಾರಣಿಕರ್ತರಾಗುತ್ತೇವೆ. ಆದ್ದರಿಂದ ತಮ್ಮ ತಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮಗಳಾದ ಹುಟ್ಟು ಹಬ್ಬ ಆಚರಣೆ, ಮದುವೆ, ಹೊಸ ವಾಹನ ಖರೀದಿ ಹೀಗೆ ಸಂದರ್ಭ ಹುಡುಕಿ ಒಂದೊಂದು ಗಿಡ ನೆಟ್ಟರೆ ಮಾತ್ರ ನಾವು ನೀವು ಸೇರಿ ಪರಿಸರ ಉಳಿಸಲು ಸಾಧ್ಯ ಎಂದರು.
ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಮಾತನಾಡಿ, “ಪ್ಲಾಸ್ಟಿಕ್ ಮಾಲಿನ್ಯವನ್ನು ಮಣಿಸಿ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಈ ಅಭಿಯಾನವು ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರ ವ್ಯವಸ್ಥೆ, ವನ್ಯಜೀವಿಗಳು ಮತ್ತು ಮಾನವನ ಆರೋಗ್ಯದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಪ್ಲಾಸ್ಟಿಕ್ಗೆ ಪರ್ಯಾಯಗಳಿವೆ ಬಳಕೆಗೆ ಮನಸ್ಸು ನಾವು ಮಾಡಬೇಕಷ್ಟೇ. ನಾನು ಪ್ಲಾಸ್ಟಿಕ್ ಬಳಸುವುದಿಲ್ಲ ಹಾಗೂ ನಾನು ನನ್ನ ಮನೆಯಲ್ಲಿ ನನ್ನ ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ತಿಳಿಸಿದಲ್ಲಿ ಖಂಡಿತಾಗಿಯೂ ದಿನ ನಿತ್ಯ ಬಳಕೆಯ ಪ್ರಮಾಣ ಕಡಿಮೆಯಾಗುವುದು ಎಂದು ತಿಳಿಸಿದರು.
ಅರಣ್ಯ ಅಗ್ನಿ ಪಾಲಕರಾದ ಶಿವಾನಂದ ಹಾಗೂ ಅನಿಲರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಹಳ್ಳಿಗಳಿಂದ ಸ್ವ-ಸಹಾಯ ಸದಸ್ಯರು, ಸಂಗಮ ಸಂಸ್ಥೆಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಒಂದೊಂದು ಸಸಿ ಕೊಡಲಾಯಿತು.
ಬಸವರಾಜ ಬಿಸನಾಳ ನಿರೂಪಿಸಿದರು, ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ಸ್ವಾಗತಿಸಿದರು ಮತ್ತು ಉಮೇಶ ದೊಡಮನಿ ವಂದಿಸಿದರು.