ಮೂಡಲಗಿ – ಯಾವುದು ಸಾಮಾಜಿಕ ಕಳಕಳಿ ವ್ಯಕ್ತಮಾಡುತ್ತದೆಯೋ, ಯಾವುದು ಒಳ್ಳೆಯದು ಇದೆಯೋ ಅದನ್ನು ಗೌರವಿಸಬೇಕು. ಸಿದ್ದು ಅವರ ಕಾವ್ಯದಲ್ಲಿ ಲೋಕಾನುಭವ ಇದೆ. ‘ಎಷ್ಟ ಚಂದಿತ್ತ ಆವಾಗ’ ಎಂಬ ಈ ಕೃತಿ ಹಿಂದಿನ ಸಂಭ್ರಮದ ದಿನಗಳನ್ನು ನೆನಪಿಸುತ್ತದೆ ಎಂದು ಖ್ಯಾತ ಜಾನಪದ ಹಾಡುಗಾರ, ಸಿನಿಮಾ ನಟ ಗುರುರಾಜ ಹೊಸಕೋಟಿ ಹೇಳಿದರು.
ಸಾವಿರ ಹಾಡುಗಳ ಸರದಾರ ಮಹಾರಾಜ ಸಿದ್ದು ಹಳ್ಳೂರ ಅವರ ‘ಎಷ್ಟ ಚಂದಿತ್ತ ಆವಾಗ’ ಎಂಬ ಕವನ ಸಂಕಲನ ಬಿಡುಗಡೆ ಹಾಗೂ ಅವರ ಐವತ್ತನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಅವರು ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಸಾಮಾಜಿಕ ಬದಲಾವಣೆಯ ಕೃತಿಯನ್ನು ಬರೆದಿರುವ ಲೇಖಕರಿಗೆ ಭಗವಂತನೇ ಮಹಾರಾಜ ಎಂಬ ಹೆಸರು ಕೊಟ್ಟಿದ್ದಾನೆ. ನಾವು ಕೊಡುವಂಥದ್ದೇನಿಲ್ಲ. ಅವರಿಂದ ಇನ್ನಷ್ಟು ಮೌಲಿಕ ರಚನೆಗಳು ಹೊರಬರಬೇಕು ಎಂದರು.
ವೇದಿಕೆಯ ಮೇಲೆ ಕಸಾಪ ತಾಲೂಕಾ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಲಕ್ಷ್ಮಣ ಅಡಿಹುಡಿ, ಬಾಲಶೇಖರ ಬಂದಿ, ಸಂಗಮೇಶ ಗುಜಗೊಂಡ, ಮಹಾದೇವ ಜಿಡ್ಡಿಮನಿ, ಮಹಾದೇವ ಪೋತರಾಜ, ಸಿದ್ರಾಮ ದ್ಯಾಗಾನಟ್ಟಿ, ಸಿದ್ದಣ್ಣ ದುರದುಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಜಾನಪದ ಗಾಯಕ ಶಬ್ಬೀರ ಡಾಂಗೆ, ಸಿದ್ದು ಹುಕ್ಕೇರಿ, ಆನಂದ ಸಂತಿ, ಮುರಿಗೆಪ್ಪ ಮಾಲಗಾರ ಉಪಸ್ಥಿತರಿದ್ದರು.
ಸಾನ್ನಿಧ್ಯವನ್ನು ಶ್ರೀ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಬಾಗೋಜಿಕೊಪ್ಪ ಮುನ್ಯಾಳ ರಂಗಾಪೂರ ಇವರು ವಹಿಸಿದ್ದರು. ದುರ್ಗಪ್ಪ ದಾಸನ್ನವರ ಕೃತಿ ಪರಿಚಯ ಮಾಡಿಕೊಟ್ಟರು.
ಜಾನಪದ ಗಾಯಕ ಗುರುರಾಜ ಹೊಸಕೋಟಿಯವರಿಗೆ ಕರ್ನಾಟಕ ಯುವಕ ಸಂಘಗಳ ಒಕ್ಕೂಟ ಬೆಳಗಾವಿ ಇದರ ವತಿಯಿಂದ ‘ ಜಾನಪದ ಸಾಮ್ರಾಟ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಿದಾನಂದ ಹೂಗಾರ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಮೇತ್ರಿ ಕಾರ್ಯಕ್ರಮ ನಿರೂಪಿಸಿದರು.