ಮೂಡಲಗಿ – ನೇಕಾರರು ಒಂದಾಗಬೇಕು, ಸದೃಢರಾಗಬೇಕು ನೇಕಾರ ಪ್ರಕೋಷ್ಠಗಳು ನೇಕಾರರಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ನೇಕಾರ ಪ್ರಕೋಷ್ಠಗಳಿಗೆ ಸ್ವಚ್ಛ ಭಾರತ ಅಭಿಯಾನ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದಂಥ ಕಾರ್ಯಗಳನ್ನು ಪಕ್ಷ ನೀಡಿದೆ. ಆ ನಿಟ್ಟಿನಲ್ಲಿ ನಾವು ಬಿಜೆಪಿಯವರು ಕಾರ್ಯಪ್ರವೃತ್ತರಾಗಬೇಕು ಎಂದು ಬಿಜೆಪಿ ನೇಕಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಹಾಗೂ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಡಾ. ಬಸವರಾಜ ಕೇಳಕರ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ನಿಮಿತ್ತ ಮೂಡಲಗಿಯಲ್ಲಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ನೇಕಾರ ಪ್ರಕೋಷ್ಠದ ವತಿಯಿಂದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಪ್ಪತ್ತು ವರ್ಷ ಅಧಿಕಾರದಲ್ಲಿದ್ದರೂ ದಣಿವರಿಯದೇ ಕೆಲಸ ಮಾಡುತ್ತಿರುವ ಮೋದಿಯವರ ಹಾದಿಯಲ್ಲಿ ನಾವೆಲ್ಲ ನಡೆಯಬೇಕು. ಇಂದು ಅನೇಕ ನೇಕಾರರಿಗಾಗಿ, ಕಾರ್ಮಿಕರಿಗಾಗಿ, ಹಿಂದುಳಿದವರಿಗಾಗಿ ಕಾರ್ಯಕ್ರಮ ಹಾಗೂ ಲಸಿಕಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರು ಜನರಿಗೆ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಮನವೊಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮೂಡಲಗಿಯಿಂದ ವ್ಹಾಯಾ ಶಿವಾಪೂರ, ಹಳ್ಳೂರದಿಂದ ಮಹಾಲಿಂಗಪೂರಕ್ಕೆ ಬಸ್ಸು ಬಿಡಬೇಕು ಹಾಗೂ ಕೊಲ್ಹಾಪೂರಕ್ಕೆ ಹೋಗುವ ಬಸ್ಸುಗಳನ್ನು ಗುರ್ಲಾಪೂರ ಕ್ರಾಸ್ ದಿಂದ ಮೂಡಲಗಿಗೆ ಬಂದು ಹೋಗುವಂತೆ ಮಾಡಬೇಕು ಎಂದು ಮಾಡಿಕೊಂಡ ಮನವಿಗೆ ಕೇಳಕರ ಅವರು ಸ್ಪಂದಿಸಿದರು.
ಸಿದ್ದಣ್ಣ ದುರದುಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಪತ್ರಕರ್ತ ಉಮೇಶ ಬೆಳಕೂಡ ಸ್ವಾಗತಿಸಿದರು.
ವೇದಿಕೆಯ ಮೇಲೆ ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಈಶ್ವರ ಮುರಗೋಡ, ಜಿಲ್ಲಾ ನೇಕಾರ ಪ್ರಕೋಷ್ಠದ ಸಂಚಾಲಕ ಮಹಾಲಿಂಗ ವಂಟಗೋಡಿ, ಹಿರಿಯರಾದ ಸದಾಶಿವ ಬೆಳಕೂಡ ಹಾಗೂ ಬಸವರಾಜ ಮುರಗೋಡ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮದಿನದ ಪ್ರಯುಕ್ತ ಸಿಹಿ ಹಂಚಲಾಯಿತು.