ಅಕ್ಕನಲ್ಲಿ ಇದ್ದುದ್ದು ಆಭಾವ ವೈರಾಗ್ಯವಲ್ಲ. ಭಾವ ವೈರಾಗ್ಯ- ಚನ್ನವೀರಸ್ವಾಮೀಜಿ (ಕಡಣಿ)

Must Read

ಭಕ್ತಿ ಜ್ಞಾನ ವೈರಾಗ್ಯ ಬೇರೆ ಬೇರೆ ಎಂದು ವಿಂಗಡಿಸಿದರೂ ಹೊಂದಾಣಿಕೆಯಲ್ಲದ ವಿಭಿನ್ನ ಮಾರ್ಗಗಳೆಂದು ತಿಳಿಯಬಾರದು. ಭಕ್ತಿ ಯೋಗದಲ್ಲಿ ಜ್ಞಾನ ಮತ್ತು ವೈರಾಗ್ಯ ಗೌಣ, ಭಕ್ತಿ ಪ್ರಮುಖ. ಜ್ಞಾನ ಯೋಗಿಯಲ್ಲಿ ಭಕ್ತಿ ಮತ್ತು ವೈರಾಗ್ಯ ಗೌಣವಾಗಿರುತ್ತದೆ ವೈರಾಗ್ಯ ಪ್ರಥಮ ಸ್ಥಾನ ಪಡೆದಿರುತ್ತದೆ. ಇಲ್ಲದಾಗ ಒಲ್ಲೆ ನೆನ್ನುವುದು ಅಭಾವ ವೈರಾಗ್ಯ. ಇಲ್ಲದಾಗ ಒಲ್ಲೆ ನೆನ್ನುವುದು ದೊಡ್ಡದಲ್ಲ. ಸಕಲವೂ ಇದ್ದಾಗ ಎಲ್ಲವನ್ನು ಬಿಡುವುದು ದೊಡ್ಡದು. ಮಹಾದೇವಿ ಅಕ್ಕನಲ್ಲಿ ಇದ್ದುದ್ದು ಆಭಾವ ವೈರಾಗ್ಯವಲ್ಲ. ಭಾವ ವೈರಾಗ್ಯ. ಸಕಲ ಭೋಗ ಸಾಮಗ್ರಿಗಳ ಮಧ್ಯದಲ್ಲಿ ಇದ್ದರೂ ಅವನ್ನೆಲ್ಲಾ ದಿಟ್ಟತನದಿಂದ ಬಿಟ್ಟು ಶಿವಪಥವನ್ನು ಮುಟ್ಟಿ ತಿರುವೆನೆಂಬ ನಿಷ್ಠೆಯ ವೈರಾಗ್ಯ ಅಕ್ಕನದಾಗಿತ್ತು ಎಂದು ಮೂರ್ತಿ ಚೆನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ ಪೂಜ್ಯರು ಹೇಳಿದರು.

ಅವರು ಬೀದರ ಜಿಲ್ಲೆ ಬೀದರ ತಾಲೂಕಿನ ಸುಕ್ಷೇತ್ರ ಬಾವುಗಿ ಶ್ರೀ ಗುರು ಭದ್ರೇಶ್ವರ ಸಂಸ್ಥಾನದಲ್ಲಿ ಭದ್ರೇಶ್ವರ ಜಾತ್ರಾ ಮಹೋತ್ಸವದಂಗವಾಗಿ ನಡೆದು ಬಂದ ಭಕ್ತಿ ವಿಜಯ ಆಧ್ಯಾತ್ಮಿಕ ಪ್ರವಚನ ದ ಮುಕ್ತಾಯ ಸಮಾರಂಭದಲ್ಲಿ ಹಮ್ಮಿಕೊಂಡ ವೀರ ವಿರಾಗಿಣಿ ಅಕ್ಕಮಹಾದೇವಿಯ ಜಯಂತಿ ಆಚರಣೆಯಲ್ಲಿ ಅಕ್ಕನ ವೈರಾಗ್ಯದ ಕುರಿತು ಮಾತನಾಡಿದರು.

ಅವರು ಮುಂದುವರೆದು ತಮ್ಮ ಪ್ರವಚನದಲ್ಲಿ, ವೈರಾಗ್ಯ ಪ್ರಾರಂಭವಾಗಬೇಕಾದರೆ ಆಸೆಯನ್ನು ಅಳಿಯಬೇಕು ಭಯವೇ ಇರಬಾರದು ಎಂದರೆ ಆಸೆಯನ್ನು ಬಿಟ್ಟಿರಬೇಕು ಸರ್ವಸಂಗ ಪರಿತ್ಯಾಗಿ ಆಗಿರಬೇಕು. ‘ನಾಸ್ತಿ ಮೋಹ ಸಮೋ ರಿಪು’ ಮೋಹಕ್ಕೆ ಸಮಾನವಾದ ವೈರಿ ಇಲ್ಲ ವೈರಾಗ್ಯಕ್ಕೆ ಮೋಹವೇ ದೊಡ್ಡ ಶತ್ರು. ಲೌಕಿಕರು ದೇಹ ಪೋಷಣೆ ಮಾಡುತ್ತಾರೆ ಪಾರಮಾರ್ಥಿಗಳು ಆತ್ಮ ಪೋಷಣೆ ಮಾಡುತ್ತಾರೆ.

ಅಕ್ಕಮಹಾದೇವಿ ಆತ್ಮ ಪೋಷಣೆಯನ್ನ ಮಾಡಿಕೊಂಡ ವೀರ ವಿರಾಗಿಣಿಯಾಗಿದ್ದಳು. ಅಕ್ಕನಂಥ ಇನ್ನೊಬ್ಬ ಶರಣೆ ಯಾವುದೇ ಪುರಾಣ ಇತಿಹಾಸಗಳಲ್ಲಿ ನೋಡಲಿಕ್ಕೆ ಸಿಗುವುದಿಲ್ಲ. ಇಂತಹ ಅಕ್ಕ ನನ್ನ ಪಡೆದ ಕನ್ನಡ ನಾಡು ಪುಣ್ಯ ಪಾವನ. ಅಕ್ಕನ ಆದರ್ಶ ನಮ್ಮೆಲ್ಲರ ಬಾಳಿಗೆ ಬೆಳಕಾಗಬೇಕು ಅಕ್ಕನ ಜೀವನ ಸಂದೇಶ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.    

ನಿರಂತರವಾಗಿ ನಡೆದು ಬಂದ ಭಕ್ತಿ ವಿಜಯ ಆಧ್ಯಾತ್ಮಿಕ ಪ್ರವಚನ ನೀಡಿದ ತನಿಮಿತ್ತ ಬಾವುಗಿ ಶ್ರೀ ಗುರು ಭದ್ರೇಶ್ವರ ಸಂಸ್ಥಾನದಿಂದ ಶ್ರೀಭದ್ರೇಶ್ವರ ಸ್ವಾಮಿಯ ವಂಶಸ್ಥರಾದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಭದ್ರಯ್ಯ ಸ್ವಾಮಿ ಶ್ರೀ ಶಾಂತಕುಮಾರಸ್ವಾಮಿ ಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ಪ್ರವಚನ ಸೇವಾ ಸಮಿತಿಯ ಪದಾಧಿಕಾರಿಗಳಿಂದ ಪೂಜ್ಯ ಚನ್ನವೀರ ಸ್ವಾಮಿಗಳಿಗೆ ಶಾಲು ಹೊದಿಸಿ ಭದ್ರೇಶ್ವರ ಸ್ವಾಮಿಯ ಭಾವಚಿತ್ರ ಹಾಗೂ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅಕ್ಕನ ಬಳಗದ ಸರ್ವ ಸದಸ್ಯರಿಂದ ವೈರಾಗ್ಯ ನಿಧಿ ಅಕ್ಕಮಹಾದೇವಿಯ ತೊಟ್ಟಿಲಲ್ಲಿ ಹಾಕುವ ಮೂಲಕ ಜಯಂತಿಗೆ ಚಾಲನೆ ನೀಡಲಾಯಿತು.

ಅಕ್ಕನ ಬಳಗದ ಸದಸ್ಯರಿಂದ ಅಕ್ಕನ ಕುರಿತಾದ ಜೋಗುಳ ಪದಗಳು ವಚನ ಗಾಯನ ಕಾರ್ಯಕ್ರಮಗಳು ಜರುಗಿದವು. ಆರಂಭದಲ್ಲಿ ಮಹಾದೇವಯ್ಯ ಸ್ವಾಮಿ ಯಂಪಳ್ಳಿ ಇವರಿಂದ ಪ್ರಾರ್ಥನೆ ನಡೆಯಿತು ಇವರಿಗೆ ಪವನಕುಮಾರಸ್ವಾಮಿ ಕಾಶಂಪೂರ ತಬಲಾ ಸಾಥ ನೀಡಿದರು.

ಶಿವಕುಮಾರ ಸ್ವಾಮಿ ಸ್ವಾಗತಿಸಿದರು ಶ್ರೀಕಂಠಯ್ಯ ಸ್ವಾಮಿ ಬಾವುಗಿ ಇವರಿಂದ ವಂದನಾರ್ಪಣೆ ಜರಗಿತು ಕಾರ್ಯಕ್ರಮ ನಿರೂಪಣೆಯನ್ನು ಬದ್ರೇಶ್ವರ ಸಂಸ್ಥಾನದ ಶಾಂತಕುಮಾರ ಸ್ವಾಮಿಯವರು ನಡೆಸಿಕೊಟ್ಟರು ಕಾರ್ಯಕ್ರಮದ ನಂತರ ಬಂದ ಭಕ್ತರಿಗೆಲ್ಲ ಮಹಾಪ್ರಸಾದ ವಿತರಣೆ ಮಾಡಲಾಯಿತು.

Latest News

ಬೇವೂರ ಪದವಿ ಮಹಾವಿದ್ಯಾಲಯದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ.

ಬಾಗಲಕೋಟೆ : ಕನ್ನಡ ಭಾಷೆಗೆ ಸುದೀರ್ಘ ಇತಿಹಾಸ ಪರಂಪರೆ ಇದೆ. ಕದಂಬ ಚಾಲುಕ್ಯರಾದಿಯಾಗಿ ಅನೇಕ ಅರಸು ಮನೆತನಗಳ ಕಾಲಘಟ್ಟದಲ್ಲಿ ಶ್ರೀಮಂತಿಕೆಯ ಸಾಹಿತ್ಯ ರಚನೆಗೊಂಡು ನಾಡಿನ ಗತವೈಭವಕ್ಕೆ...

More Articles Like This

error: Content is protected !!
Join WhatsApp Group