ಮೂಡಲಗಿ – ತಾಲೂಕಿನ ಶಿವಾಪೂರ (ಹ) ಗ್ರಾಮದ ತೋಟ ನಂ.೧ ಶಾಲೆಯ ಜಾಗ ಹಾಗೂ ಕಟ್ಟಡ ಕುರಿತಂತೆ ಜಾಗದ ಮಾಲೀಕರು ಹಾಗೂ ಶಿಕ್ಷಣ ಇಲಾಖೆಯ ನಡುವೆ ಹಗ್ಗ ಜಗ್ಗಾಟ ನಡೆದಿದ್ದು ಇದು ಯಾವಾಗ ಬಗೆಹರಿಯಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಜಾಗದ ಮಾಲೀಕರಾದ ಮಲ್ಲಪ್ಪ ಜುಂಜರವಾಡ ಅವರು ಹೇಳುವಂತೆ, ಶಿವಾಪೂರ ಸರ್ಕಾರಿ ಪ್ರಾಥಮಿಕ ಶಾಲೆ ತೋಟ ನಂ.೧ ಶಾಲೆಗೆ ನಮ್ಮ ಅಜ್ಜಿ ಚನ್ನವ್ವಾ ಜುಂಜರವಾಡ ಇವರು ಐದು ಗುಂಟೆ ಜಾಗವನ್ನು ದೇಣಿಗೆಯಾಗಿ ನೀಡಿದ್ದು ಶಿಕ್ಷಣ ಇಲಾಖೆಯವರು ಸುಮಾರು ೩೦ ಗುಂಟೆಗಿಂತಲೂ ಹೆಚ್ಚಿನ ಜಾಗವನ್ನು ಅತಿಕ್ರಮಿಸಿ ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳನ್ನು ಕಟ್ಟಿದ್ದಾರೆ ಇದಕ್ಕೆ ನಮ್ಮ ತಕರಾರು ಇದೆ ಎನ್ನುತ್ತಾರೆ.
ಈ ವಿವಾದದಿಂದಾಗಿ ಸದ್ಯ ಶಾಲೆಯ ನೂತನ ಕಟ್ಟಡದ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಇದೇ ಜಾಗದಲ್ಲಿ ಹಾದು ಹೋಗಲು ತಮಗೆ ದಾರಿ ಕೂಡ ಇಲ್ಲವಾಗಿದೆ ಎಂದು ಹೇಳುವ ಜುಂಜರವಾಡ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಇವರ ಈ ಹಗ್ಗ ಜಗ್ಗಾಟದಲ್ಲಿ ಸಿಲುಕಿರುವ ಶಾಲೆಯ ಕಟ್ಟಡ ಶಿಥಿಲಗೊಳ್ಳುತ್ತಿದೆ. ಹಳೆಯ ಕಟ್ಟಡದ ಮೇಲೆ ಪತ್ರಾಸ ಹಾಕಿದ್ದಾರಾದರೂ ಅದನ್ನು ಯಾರು ಕಾಮಗಾರಿ ಮಾಡಿಸಿದ್ದಾರೋ ಎನ್ನುವಷ್ಟು ಹದಗೆಟ್ಟು ಹೋಗಿದೆ. ಕೊಠಡಿಯ ಒಳಗೆ ಧೂಳು ಕಸ ಕಡ್ಡಿ ತುಂಬಿಕೊಂಡು ದನಗಳನ್ನು ಕಟ್ಟುವ ಕೊಠಡಿಯಂತಾಗಿದೆ. ಅತ್ತ ಹಳೆಯ ಅಂಗನವಾಡಿ ಕಟ್ಟಡ ಸೋರುತ್ತಿದೆ. ಅದನ್ನು ರಿಪೇರಿ ಮಾಡಿಸಲು ಬರುವ ಅಧಿಕಾರಿಗಳನ್ನು ಜಾಗದ ಮಾಲೀಕರು ಮರಳಿ ಕಳಿಸಿದ್ದು ತಮ್ಮ ಬೇಡಿಕೆಗಳು ಈಡೇರುವವರೆಗೂ ಶಾಲಾ ಕಟ್ಟಡಗಳ ಬೀಗ ತೆರೆಯುವುದಿಲ್ಲ ಎನ್ನುತ್ತಾರೆ. ಅಲ್ಲದೆ ಹಿಂದಿನ ಮುಖ್ಯೋಪಾಧ್ಯಾಯರು ಇಲ್ಲಿ ಅಪಾರ ಪ್ರಮಾಣದ ಅಫರಾತಫರಿ ಮಾಡಿದ್ದ ಬಗ್ಗೆ ಕೇಳಿದ್ದಕ್ಕೆ ಹಾಗೂ ಈ ವಿವಾದಕ್ಕೆ ಅವರಿಗೆ ಸಂಬಂಧವೇ ಇಲ್ಲದಿದ್ದರೂ ತಮಗೆ ಹಾಗೂ ಕುಟುಂಬಸ್ಥರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದು ಅದಕ್ಕೆ ನ್ಯಾಯ ಸಿಗಬೇಕು ಎನ್ನುತ್ತಾರೆ.
ಇದೆಲ್ಲದರ ಮಧ್ಯೆ ಶಾಲಾ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದು ಕೆಲವು ವಿದ್ಯಾರ್ಥಿಗಳು ಈ ಶಾಲೆ ಬಿಟ್ಟು ಅಲ್ಲಿಯೇ ಸಮೀಪ ಇರುವ ಖಾಸಗಿ ಶಾಲೆಗೆ ಹೋಗಿದ್ದಾರೆ. ಅಷ್ಟಕ್ಕೂ ಒಂದು ಸರ್ಕಾರಿ ಶಾಲೆಯ ಇಷ್ಟು ಸಮೀಪಕ್ಕೆ ಖಾಸಗಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಗೆ ಪರವಾನಿಗೆ ಕೊಟ್ಟರೆಂಬುದಾಗಿ ಶಿಕ್ಷಣ ಪ್ರೇಮಿಗಳು, ಸಾರ್ವಜನಿಕರು ಕೇಳುತ್ತಿದ್ದಾರೆ. ಮೊದಲೇ ವಿದ್ಯಾರ್ಥಿಗಳಿಲ್ಲದೆ ಸರ್ಕಾರಿ ಶಾಲೆಗಳು ಸೊರಗುತ್ತಿದ್ದು ಈಗ ಶಿಕ್ಷಣ ಇಲಾಖೆಯ ತಪ್ಪಿನಿಂದಾಗಿ ಸರ್ಕಾರಿ ಶಾಲೆಯ ಎದುರಿನಲ್ಲೇ ಖಾಸಗಿ ಶಾಲೆ ತಲೆಯೆತ್ತುವಂತಾಗಿದೆ.
ಸದರಿ ಶಿವಾಪೂರ(ಹ) ತೋಟ ನಂ.೧ ಶಾಲೆಯ ವಿವಾದ ಸುಮಾರು ೮-೧೦ ವರ್ಷಗಳಿಂದ ಇದೆ ಎಂಬುದಾಗಿ ಹೇಳಲಾಗುತ್ತಿದ್ದು ಈ ಸಮಸ್ಯೆ ಪರಿಹಾರವಾಗುವುದು ಯಾವಾಗ ? ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಈಗ ಶುರುವಾಗಿದೆ. ವಿವಾದಕ್ಕೆ ಕಾರಣವೇನು, ಸದ್ಯಕ್ಕೆ ಅದರ ಪರಿಸ್ಥಿತಿ ಏನು ಎಂಬುದನ್ನು ಶಿಕ್ಷಣ ಇಲಾಖೆ ಪ್ರಕಟಪಡಿಸಬೇಕಾಗಿದೆ. ಯಾಕೆಂದರೆ ಶಾಲಾ ಕಟ್ಟಡಗಳಿಗೆ ಜಾಗದ ಮಾಲೀಕರು ಬೀಗ ಹಾಕಿದ್ದು ಅವು ಉಪಯೋಗವಿಲ್ಲದೆ ಶಿಥಿಲಗೊಳ್ಳುವ ಅಪಾಯವಿದೆ. ಹಾಗೇನಾದರೂ ಆದರೆ ಸರ್ಕಾರದ ದುಡ್ಡು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
ಇದೇ ರೀತಿ ಮೂಡಲಗಿ ವಲಯದಲ್ಲಿ ಹಲವು ಶಾಲೆಗಳು ವಿವಾದಕ್ಕೆ ಸಿಲುಕಿರುವ ವಿಷಯ ಪ್ರಚಲಿತವಾಗುತ್ತಿದೆ. ಹಳ್ಳೂರಿನ ಶಾಲೆಯೊಂದರ ಕಟ್ಟಡ ಜಗಳದಿಂದಾಗಿ ಪಾಳು ಬಿದ್ದ ಬಂಗಲೆಯಂತಾಗಿದೆ, ಶಿವಾಪೂರದ ಶಾಲೆಗೆ ಹೆಸರಿಡುವ ಕುರಿತಂತೆ ವಿವಾದ ಇದ್ದು ನಾಮಫಲಕವಿಲ್ಲದೆ ಶಾಲೆ ಇದೆ ಎನ್ನಲಾಗುತ್ತಿದೆ…..ಹೀಗೆ ಹಲವು ಶಾಲೆಗಳು ವಿವಾದದ ಬಲೆಯಲ್ಲಿ ಸಿಲುಕಿದ್ದು ಅವುಗಳ ಬಗ್ಗೆ ಶೀಘ್ರದಲ್ಲಿಯೇ ಪತ್ರಿಕೆ ವಿವರವಾದ ವರದಿ ನೀಡಲಿದೆ.
ಶಿವಾಪೂರ (ಹ) ತೋಟ ನಂ. ೧ ಸರ್ಕಾರಿ ಪ್ರಾಥಮಿಕ ಶಾಲೆಯ ವಿವಾದ ಬೇಗ ಬಗೆಹರಿಯಲಿ.
ಉಮೇಶ ಮ.ಬೆಳಕೂಡ
ಮೂಡಲಗಿ
೯೪೪೮೮೬೩೩೦೯