ಕಾಲ್ಪನಿಕ ರೇಣುಕಾಚಾರ್ಯರು ಯಾರು?

Must Read

ಇಂದಿನ ಪಂಚಪೀಠಗಳಲ್ಲಿ ಪಂಚಾಚಾರ್ಯರೆಂದು ಪಂಚ(ಐದು) ಅಚ್ಯುತ ಗುರು ಪರಂಪರೆ ಬೆಳೆದು ಬಂದಿದೆ. ಆ ಐದು ಆಚಾರ್ಯರಲ್ಲಿ ರೇಣುಕಾಚಾರ್ಯ, ವಿಜಯಕೀರ್ತಿ, ವಿಶ್ವಾರಾದ್ಯ, ಏಕ್ರಾಮ್ಯ ಮತ್ತು ಮರುಳಶಂಕರ ಎಂದು ಗುರುತಿಸಲಾಗಿದೆ. ಇವರನ್ನು ವೀರಶೈವ ಪಂಥದ ಪಂಚಾಚಾರ್ಯರು ಎಂದು ಕರೆಯಲಾಗುತ್ತದೆ. ಅವರಲ್ಲಿ ರೇಣುಕಾಚಾರ್ಯರು ಪ್ರಥಮರು. ಇವರ ಕುರಿತು ಇತಿಹಾಸ ತಜ್ಞರು ಈ ವಿಷಯದಲ್ಲಿ ಜಿಜ್ಞಾಸೆ ಹೊಂದಿದ್ದಾರೆ. ಏಕೆಂದರೆ ರೇಣುಕಾಚಾರ್ಯರ ಕುರಿತಾಗಿ ಪ್ರಾರಂಭಿಕ ಶಾಸನಗಳಲ್ಲಿ ನಿಖರ ಉಲ್ಲೇಖಗಳಿಲ್ಲ.

ಅವರ ಹೆಸರು ಬಹುಪಾಲು ಧಾರ್ಮಿಕ ಪಂಥದ ಪುರಾಣಗಳಿಂದ ಕಾಲ್ಪನಿಕವಾಗಿ ಬೆಳೆದು ಬಂದಿದೆ. ಅವೆಲ್ಲವು 13 ಮತ್ತು 14ನೆ ಶತಮಾನದ ನಂತರ ರಚನೆಯಾದವು. ಇದರಿಂದ ಕೆಲವು ಸಂಶೋಧಕರು ರೇಣುಕಾಚಾರ್ಯರು ಐತಿಹಾಸಿಕವಾಗಿ ಪೌರಾಣಿಕ ವ್ಯಕ್ತಿಯಾಗಿದ್ದರೂ ವೀರಶೈವ ಧರ್ಮದ ಕಾಲ್ಪನಿಕವಾಗಿ ಸೃಷ್ಟಿಸಲ್ಪಟ್ಟ ವ್ಯಕ್ತಿ ಎಂದು ತೀರ್ಮಾನಕ್ಕೆ ಬಂದಿದ್ದಾರೆ.

ಈ ಕುರಿತು ಆಧುನಿಕ ಸಂಶೋಧಕರಾದ ಡಾ.ಪಿ.ಬಿ.ದೇಸಾಯಿ ಅವರು ‘ರೇಣುಕಾಚಾರ್ಯರು ಪೌರಾಣಿಕ ಕಥೆಯಾಧರಿಸಿದ ವ್ಯಕ್ತಿತ್ವ ಹೊಂದಿದ್ದಾರೆ. ಯಾವುದೇ ಶಾಸನದಲ್ಲಿ ಅವರ ಕುರಿತು ಕುರುಹು ಸಾಬೀತಾಗಿಲ್ಲ’, ಎಂದು ಅಭಿಪ್ರಾಯಿಸಿದ್ದಾರೆ. ಇದಕ್ಕೆ ಪೂರಕವಾಗಿ ಡಾ.ಎಂ.ಎಂ.ಕಲ್ಬುರ್ಗಿಯವರೂ ಸಹ “ವೀರಶೈವ ಪಂಥವು ಶರಣ ಸಂಚಲನದ ನಂತರ ಬೆಳೆದರೂ, ತಾವು ತಾತ್ವಿಕ ಪುರಾತನತೆ ಪ್ರದರ್ಶಿಸಿಕೊಳ್ಳಲು ಇಂತಹ ಕಾಲ್ಪನಿಕ ಗುರು ಪರಂಪರೆಗಳನ್ನು ನಿರ್ಮಿಸಿಕೊಂಡಿದ್ದಾರೆ”, ಎಂದು ಹೇಳಿದ್ದಾರೆ.

ಪುರಾತನ ಕಾಲದಿಂದಲೂ ಲಭ್ಯವಾಗುತ್ತಿರುವ ಕೆಲವು ಶಾಸನಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ಜಂಗಮ,ಮಠಾದಿಪತಿ, ಗುರು ಪೀಠದ ಕುರುಹುಗಳನ್ನು ಪ್ರತಿಪಾಧಿಸುತ್ತವೆ. ಅಂತಹ ಪ್ರಮುಖ ಐತಿಹಾಸಿಕ ದಾಖಲಾತಿಗಳನ್ನು ಹೊಂದಿದ ಆಯ್ದ ಶಾಸನಗಳೆಂದರೆ;

ಕ್ರಿ.ಶ.972ರಲ್ಲಿ (10ನೆ ಶತಮಾನದ) ಪ್ರಸಕ್ತ ಬಾಳೆ ಹೊನ್ನೂರಿನ ರಂಭಾಪುರಿ ಪೀಠದ ಕುರಿತಾದ ಶಾಸನವೊಂದು ಪತ್ತೆಯಾಗಿದೆ. ಅದರಲ್ಲಿ ಎಲ್ಲಿಯೂ ಪೀಠ ಮತ್ತು ರೇಣುಕಾಚಾರ್ಯರ ಕುರಿತು ಉಲ್ಲೇಖವಿಲ್ಲ. ಬದಲಾಗಿ ಅರಸೊತ್ತಿಗೆಯವರಿಂದ ಜಂಗಮ ಗುರುಗಳಿಗೆ ಭೂದಾನ ಮಾಡಿದ್ದು ಹಾಗೂ ಶ್ರೀಮಠದ ಪ್ರಸ್ತಾಪವಿದೆ. ಕ್ರಿ.ಶ. 1050ರಲ್ಲಿ ಆಂಧ್ರಪ್ರದೇಶದ ಇಂದಿನ ಶ್ರೀಶೈಲಂ ಪೀಠದ ಕುರಿತು ಇನ್ನೊಂದು ಶಾಸನ ಲಭ್ಯವಾಗಿದ್ದು, ಅದರಲ್ಲಿ ಜಂಗಮಗಳಿಗೆ ಭೂದಾನ-ದತ್ತಿ ನೀಡಿದ್ದರ ಕುರಿತು ಉಲ್ಲೇಖವಿದೆ.

ಕ್ರಿ.ಶ.1115ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೀಠದ ವೈದಿಕ ಮತ್ತು ಶೈವ ಪರಂಪರೆ ಕುರಿತು ಉಲ್ಲೇಖವಿದ್ದ ಶಾಸನ ಪತ್ತೆಯಾಗಿದೆ. ಕ್ರಿ.ಶ. 1162 ರಲ್ಲಿ ಉಜ್ಜಯಿನಿ ಪೀಠದ ಕುರಿತಾಗಿ ಮತ್ತೊಂದು ಶಾಸನ ದೊರೆತಿದೆ. ಅದರಲ್ಲಿ ಪೀಠ ಎಂಬ ಪದವೇ ಪ್ರಯೋಗಿಸಿಲ್ಲ. ರೇಣುಕಾಚಾರ್ಯರ ಹಾಗೂ ಪೀಠದ ಸಂಸ್ಥಾಪಕರ ಕುರಿತಾಗಿಯೂ ಯಾವುದೇ ಉಲ್ಲೇಖಗಳಿಲ್ಲ. ಬದಲಾಗಿ ಉಜ್ಜಯಿನಿ ಗುರು ಪರಂಪರೆ ಹಾಗೂ ಶಿವಾಚಾರ್ಯರೆಂದು ಪ್ರಸ್ತಾಪಿಸಲಾಗಿದೆ. ಕ್ರಿ.ಶ.1186ರಲ್ಲಿ ವಾರಾಣಸಿಯಲ್ಲಿ ಕಾಶಿ ಪೀಠದ ಕುರಿತಾಗಿ ಗುರು ಮತ್ತು ಜಂಗಮ ಪದ್ಧತಿ ಎಂದು ನಮೂದಿಸಿದ ಶಾಸನ ಲಭ್ಯವಾಗಿದೆ.

ಪ್ರಾಚೀನ ಪರಂಪರೆ ತಿಳಿಯಲು ಪುರಾತನ ಕಾಲದ ಶಾಸನಗಳೆ ಸೂಕ್ತ ಸಾಕ್ಷಿಯ ಪುರಾವೆಗಳೆಂದು ವೈಜ್ಞಾನಿಕ ಸಂಶೋಧನೆಯಿಂದ ಸಾಭೀತಾಗಿದೆ. ಹಾಗಾದ್ರೆ ಇಲ್ಲಿಯವರೆಗೆ ಲಭ್ಯವಾದ ಶಾಸನಗಳ ಸಂಶೋಧನಾ ಅಧ್ಯಯನಗಳಿಂದ ವ್ಯಕ್ತವಾಗುವ ವಾಸ್ತವ ಸಂಗತಿ ಎಂದರೆ, “ಪೀಠಾದಿಪತಿ,ಲಿಂಗದಾನ, ಭೂದಾನ, ಶಿವ ಪಂಚಾಚಾರ’ ಎಂಬ ಪದಗಳೆ ಪ್ರತಿಮಾಪದವಾಗಿ ಕಾಣಿಸುತ್ತಿವೆ. ಹಾಗಾದ್ರೆ ರೇಣುಕಾಚಾರ್ಯರ ಹುಟ್ಟು ಮತ್ತು ಪಂಚಪೀಠಗಳ ಮೂಲ ಎಲ್ಲಿಯದು?!

ಇತ್ತೀಚೆಗೆ ಆಯ್ದ ಪ್ರದೇಶಗಳಲ್ಲಿ ಅಂದರೆ ಪಂಚಪೀಠಾದೀಶರೆಂದು ಗುರುತಿಸಿಕೊಂಡ ಬಳಿಕ ಕೆಲವು ಶಾಸನಗಳು ಪ್ರಸ್ತಾಪಿಸುವುದೆಂದರೆ, ಪಂಚಪೀಠಗಳ ಪರಂಪರೆ 12ನೆ ಶತಮಾನದ ತದನಂತರ ಉದ್ಭವವಾಗಿರುವುದು ಎಂದು ನಮೂದಾಗಿವೆ. ಆದಾಗ್ಯೂ ಲಭ್ಯವಾದ ಕೆಲವು ಶಾಸನಗಳಲ್ಲಿ ನಿಖರವಾಗಿ ಪಂಚಪೀಠಗಳ ಹಾಗೂ ರೇಣುಕಾಚಾರ್ಯರ ಕುರಿತಾಗಿ ಪದ ಬಳಕೆಯಾಗಿಲ್ಲ. ಅದಕ್ಕೆ ಅನುರೂಪ ಪದಗಳಾದ ಶಿವಗಂಗೆಯ ದೇವರು, ಶ್ರೀಮಠದ ಗುರು, ಜಂಗಮ ಗುರು, ಮಠಾದಿಪತಿ, ಪೀಠಾದೀಶ ಇತ್ಯಾದಿಗಳು ಉಲ್ಲೇಖಗೊಂಡಿವೆ. ಇವೆಲ್ಲವೂ ಮಠ ಮತ್ತು ಗುರು ಸಂಪ್ರದಾಯದ ಬೆಳವಣಿಗೆಯ ಮಾರ್ಗವನ್ನು ಅನುಕರಿಸಿದ್ದು ಸೂಚಿಸುತ್ತವೆ. ಹೊರತು ಪಂಚಪೀಠ, ವೀರಶೈವ ಪಂಥ ಹಾಗೂ ರೆಣುಕಾಚಾರ್ಯರ ಪಾತ್ರದ ಕುರಿತು ಎಲ್ಲಿಯೂ ಪ್ರಸ್ತಾಪವಿಲ್ಲ.

ಕಲ್ಯಾಣ ಕ್ರಾಂತಿ ಸಂಭವಿಸಿದ ಬಳಿಕ ಮರಣವೇ ಮಹಾನವಮಿ ಎಂದು ಬಹುತೇಕ ಶರಣರು ಲಿಂಗೈಕ್ಯರಾದರು. ವಚನ ಭಾಂಡಾರ ಬೆಂಕಿಗಾಹುತಿಯಾಯಿತು. ಅಳಿದುಳಿದ ವಚನ ಸಾಹಿತ್ಯ ಅನಾಮಧೇಯ ರಹಸ್ಯ ನೆಲೆಗಳಲ್ಲಿ ಬಚ್ಚಿಟ್ಟುಕೊಂಡಿತು. ಅದನ್ನೇ ಸದುಪಯೋಗಪಡಿಸಿಕೊಂಡ ಒಂದು ವೈದಿಕ ಮತ್ತು ಪುರೋಹಿತಶಾಹಿ ವರ್ಗ ಆಯಾ ಪ್ರದೇಶದ ರಾಜರಸರ ಪ್ರೋತ್ಸಾಹದಿಂದ ಪೀಠಗಳನ್ನು ನಿರ್ಮಿಸಲ್ಪಟ್ಟರು. ಅದಕ್ಕೆ ಅಲ್ಲಮನ ವಿರಕ್ತ ಪರಂಪರೆಯೇ ಪ್ರೇರಣೆಯಾದ್ರೂ ಅದನ್ನು ಮರೆಮಾಚಿಸಿ, ತಮ್ಮ ಮೂಲ ಗುರು ರೇಣುಕಾಚಾರ್ಯರೆಂದು ಕಾಲ್ಪನಿಕ ಗುರುವನ್ನು ಸೃಷ್ಠಿಸಿದ್ದು ಐತಿಹಾಸಿಕ ಸತ್ಯ.

ತದನಂತರ ಮದ್ಯಕಾಲೀನ ಮುಸ್ಲಿಂರ ಆಡಳಿತದ ಪ್ರಭಾವದಿಂದ ಲಿಂಗಾಯತ ಪರಂಪರೆ ಉಳಿವಿಗಾಗಿ ತೋಟದ ಎಡೆಯೂರು ಸಿದ್ದಲಿಂಗೇಶ್ವರರು ಎಲ್ಲೆಂದರಲ್ಲಿ ವಿರಕ್ತಮಠಗಳನ್ನು ಸ್ಥಾಪಿಸಿದ ಪರಿಣಾಮ ವೇದಾಧರಿತ ಶೈವ ಪಂಥದ ಗುರುಪೀಠ ಹಾಗೂ ಬಸವಾದಿ ಶರಣ ಪರಂಪರೆಯ ಲಿಂಗಾಯತ ಮಠದ ಗುರುಗಳೆಂದು ಎರಡು ವಿಭಿನ್ನ ಪ್ರಬೇಧಗಳನ್ನು 16ನೆ ಶತಮಾನದಿಂದ ಬೆಳೆದು ಬಂದಿದ್ದು ಕಾಣಬಹುದಾಗಿದೆ.

ಎಂಟು ಮತ್ತು ಒಂಬತ್ತನೆ ಶತಮಾನದಲ್ಲಿ ರೇವಣಸಿದ್ಧರು ಎಂಬ ಪೌರಾಣಿಕ ಸಂತನ ಕುರಿತು ಜಾನಪದಗಳಲ್ಲಿ ಹಾಗೂ ಕಾಲ್ಪನಿಕ ಕಥೆಗಳಲ್ಲಿ ಲಭ್ಯವಿದೆ. ಕೆಲವು ಐತಿಹಾಸಿಕ ಕಾದಂಬರಿ ಮತ್ತು ಸ್ಥಿತಿಗಳಲ್ಲಿ ಅದೇ ರೇವಣಸಿದ್ಧರು ಕಿರುಬ-ಕುರುಬ ಸಮುದಾಯದವನೆಂದು ಬಿಂಬಸಲಾಗಿದೆ. ಅಂದ್ರೆ ಆತ ಶಿವನ ಸ್ವರೂಪನಾಗಿ ‘ಕಿರುಬ’ ಎಂಬ ಪ್ರಾಣಿಯನ್ನು ಸಂಗೋಪನೆಗೊಳಿಸಿದ್ದ. ಅದನ್ನೇ ತನ್ನ ವಾಹನವನ್ನಾಗಿ ಬಳಸಿಕೊಂಡಿದ್ದ. ಅದೇ ಪ್ರಾಣಿಯನ್ನಾಧರಿಸಿ ಕುರುಬ ಸಂತಾನ ಬೆಳೆಯಿತು. ನಂತರ ಕುರಿ, ಮೇಕೆ ಸಾಕುವ ಪದ್ದತಿ ಕುಲಕಸುಬಾಗಿ ಬೆಳೆದಿದ್ದು ಪೌರಾಣಿಕ ಕಥೆಯಿದೆ. ಅದೇ ರೇವಣಸಿದ್ದರು ಪುನರ್ಜನ್ಮ ಪಡೆದು ಶಿವ ಭಕ್ತರ ಉದ್ಧಾರಕ್ಕಾಗಿ ಅವತರಿಸಿ ಪಂಚಪೀಠ ಸ್ಥಾಪನೆಗೆ ಕಾರಣರಾದರೆಂದು ಕಾಲ್ಪನಿಕವಾಗಿ ಪ್ರತಿಪಾದಿಸಲಾಗುತ್ತಿದೆ.

ಇಂತಹ ಊಹಾ-ಪೋಹ ಕಥೆಗಳನ್ನು ಬದಿಗಿಟ್ಟು ವೀರಶೈವ ಪಂಥವು ಹಾಗೂ ಪಂಚಾಚಾರ್ಯರ ಪರಂಪರೆಯೂ 13 ಮತ್ತು 14ನೆ ಶತಮಾನದ ನಂತರ ಬೆಳೆದಿದೆ ಎಂದು ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಅಲ್ಲದೆ ಪಂಚ ಪೀಠಗಳದ್ದು ಕಾಲ್ಪನಿಕ ಗುರು ಪರಂಪರೆಯಾಗಿದೆ. 16ನೆ ಶತಮಾನದ ವಿಜಯ ನಗರ ಅರಸರ ಪ್ರಭಾವದಿಂದ ಒಂದು ಜನಾಂಗ ಶಾಶ್ವತವಾಗಿ ಗುರು ಸ್ಥಾನ ವಹಿಸಿಕೊಂಡಿದ್ದರ ಪರಿಣಾಮ ಅವರನ್ನೇ “ಜಂಗಮರು” ಎಂದು ಗುರುತಿಸುವ ಪದ್ಧತಿ ಬೆಳವಣಿಗೆಯಾಗಿದೆ. ಅದೇ ಜಂಗಮರು ಪಂಚಪೀಠದ ಅಧಿಪತ್ಯ ಸಾಧಿಸುತ್ತ, ಪಂಚಪೀಠಾಧೀಶರಾಗಿ ಮೆರೆಯುವ ಪದ್ಧತಿ ಬೆಳೆವಣಿಗೆಯಾಗಿದ್ದು ಐತಿಹಾಸಿಕ ಸತ್ಯ. ಈ ಕುರಿತು ಖ್ಯಾತ ಸಂಶೋಧಕರಾಗಿದ್ದ ಡಾ. ಎಸ್.ಎಸ್.ಗುರ್ಜರ್ ಅವರು, “ರೇವಣಸಿದ್ದರ ತಾತ್ವಿಕ ಮತ್ತು ಕಾಲ್ಪನಿಕ ಪಾತ್ರ ಪ್ರಬಲವಾಗಿದ್ದರೂ ಅವರು ಪಂಚಪೀಠದ “ಆದಿಗುರು” ಎಂಬ ಸ್ಥಾನದ ಕುರಿತು ನಿರ್ಧಿಷ್ಟ ಶಾಸನಗಳಲ್ಲಿ ಲಭ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಡಾ. ಎಂ.ಎಂ.ಕಲ್ಬುರ್ಗಿಯವರು, “ರೇಣುಕಾಚಾರ್ಯರ ಹೆಸರನ್ನು ಹಿಂದುಳಿದ ಸಮುದಾಯದ ಸಾಧಕರಿಂದ ಉತ್ತಿಷ್ಠಗೊಳಿಸಿ, ಬೃಹದ್ಧರ್ಮಕ್ಕೆ ಒಳಗೊಳಿಸುವ ಸಂಪ್ರದಾಯದ ಪಾಲು ಇದಾಗಿದೆ” ಎಂದು ಪ್ರತಿಪಾದಿಸಿದ್ದಾರೆ. ಪ್ರಸಕ್ತ ಪಂಚಪೀಠಗಳು ಅನುಸರಿಸುತ್ತಿರುವ ಪದ್ಧತಿ ಬಸವೋತ್ತರವಾಗಿ ಬೆಳೆದ ಚಿತ್ರದುರ್ಗದ ಬೃಹನ್ಮಠದ ಪರಂಪರೆಯಾಗಿದೆ. ಅಲ್ಲಿನ ನಾಯಕ ಸಮುದಾಯದ ದೊರೆ ಲಿಂಗಾಯತ ಗುರುಗಳನ್ನು ಗೌರವಿಸುವುದಕ್ಕಾಗಿ ಪಾದ ಪೂಜೆ, ಅಡ್ಡ ಪಲ್ಲಕ್ಕಿ ಉತ್ಸವಗಳನ್ನು ತನ್ನ ಆಸ್ಥಾನಿಕರಿಂದ ಆಯೋಜಿಸಿ ಜಾರಿಗೆ ತಂದಿದ್ದನು. ನಂತರ ಚಿತ್ರದುರ್ಗ ನಾಯಕರ ಆಡಳಿತವು ಮುಸ್ಲಿಂರ ವಶವಾದ ಬಳಿಕ ಅದನ್ನೇ ಪಂಚಪೀಠಗಳು ಅನುಸರಿಸ ತೊಡಗಿವೆ ಎಂದು ಹೇಳಲಾಗುತ್ತಿದೆ.

ಡಾ. ಸತೀಶ ಕೆ.ಇಟಗಿ,                            ಪತ್ರಿಕೋದ್ಯಮ ಉಪನ್ಯಾಸಕ.                             ಅಂಚೆ: ಕೋಳೂರ, ತಾ: ಮುದ್ದೇಬಿಹಾಳ.                     ಜಿ: ವಿಜಯಪುರ-586129 (ಕರ್ನಾಟಕ ರಾಜ್ಯ) 9241286422.                                                Email. satishitagi10@gmail.com

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group